ಪದ್ಯ ೪೨: ಚತುರಂಗ ಬಲವು ಹೇಗೆ ನಾಶವಾಯಿತು?

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮುಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ (ಗದಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸುತ್ತಲೂ ಆಯುಧದ ಕಿಚ್ಚು, ಬಿಟ್ಟೋಡಿದರೆ ಅಶ್ವತ್ಥಾಮನ ಬಾಣಗಳು. ತಪ್ಪಿಸಿಕೊಂಡು ಹೋದರೆ ಬಾಗಿಲುಗಳಲ್ಲಿ ಕೃತವರ್ಮ, ಕೃಪರ ಬಾಣ ಪ್ರಯೋಗ. ಬಾಣಗಳ ಹೊಡೆತಕ್ಕೆ ಚತುರಂಗ ಬಲವು ನಾಶವಾಗಿ ಹೋಯಿತು.

ಅರ್ಥ:
ಕೂಡೆ: ಕೂಡಲೆ; ಕಟ್ಟು: ಬಂಧಿಸು; ಕಿಚ್ಚು: ಬೆಂಕಿ; ತೆರಪು: ಮಯ, ಸಂದರ್ಭ; ಓಡು: ಧಾವಿಸು; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಬಾಗಿಲು: ಕದ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಝಾಡಿ: ಕಾಂತಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ನೃಪ: ರಾಜ; ಪರಿವಾರ: ಬಂಧುಜನ;

ಪದವಿಂಗಡಣೆ:
ಕೂಡೆ +ಕಟ್ಟಿತು +ಕಿಚ್ಚು +ತೆರಪಿನಲ್
ಓಡುವಡೆ +ಗುರುಸುತನ +ಶರ +ಮಿ
ಕ್ಕೋಡುವಡೆ +ಬಾಗಿಲುಗಳಲಿ +ಕೃತವರ್ಮ +ಕೃಪರೆಸುಗೆ
ಕೂಡೆ +ಮುಮ್ಮುಳಿಯೋದುದ್+ಈ+ ಶರ
ಝಾಡಿಯಲಿ+ ಚತುರಂಗ+ಬಲವ
ಕ್ಕಾಡಿತೇನೆಂಬೆನು +ಯುಧಿಷ್ಠಿರ+ನೃಪನ +ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೂಡೆ ಕಟ್ಟಿತು ಕಿಚ್ಚು
(೨) ಓಡು, ಮಿಕ್ಕೋಡು – ಪದಗಳ ಬಳಕೆ