ಪದ್ಯ ೮೭: ದೇವತೆಗಳು ಏಕೆ ಗದ್ದಲ ಮಾಡಿದರು?

ನೂಕು ಬಾಗಿಲ ಚಾಚು ಬಣಗು ದಿ
ವೌಕಸರ ನಿಲಿಸಲ್ಪಪುಣ್ಯರ
ನೇಕೆ ಹೊಗಿಸಿದೆ ಬಹಳದಾನ ತಪೋ ವಿವರ್ಜಿತರ
ಓಕುಳಿಯ ನೆವದಿಂದ ತೆಕ್ಕೆಯ
ಬಾಕುಳಿಗಳುರವಣಿಸಿತೇ ತಮ
ಗೇಕೆ ರಂಭಾದಿಗಳ ಸೋಂಕೆಂದುದು ಸುರಸ್ತೋಮ (ಅರಣ್ಯ ಪರ್ವ, ೮ ಸಂಧಿ, ೮೭ ಪದ್ಯ)

ತಾತ್ಪರ್ಯ:
ಬಾಗಿಲನ್ನು ಮುಚ್ಚು, ಕೆಲಸಕ್ಕೆ ಬಾರದ ಸ್ವರ್ಗವಾಸಿಗಳನ್ನು ನಿಲ್ಲಿಸು, ಅಲ್ಪ ಪುಣ್ಯದಿಂದ ಸ್ವರ್ಗವಾಸಿಗಳಾದವರನ್ನು ಇಲ್ಲೇಕೆ ಬಿಟ್ಟುಕೋಂಡಿರಿ? ಇವರು ಹೆಚ್ಚಿನ ದಾನವನ್ನೂ ತಪಸ್ಸನ್ನೂ ಮಾಡದೆ ಇಲ್ಲಿಗೆ ಬಂದವರು. ಓಕುಳಿಯಾಡುವ ನೆವದಿಂದ ಸ್ತ್ರೀಯರನ್ನು ಆಲಿಂಗಿಸುವ ಅತಿ ಆಶೆಯುಳ್ಳವರು, ಈ ಗದ್ದಲದಲ್ಲಿ ನುಗ್ಗಿದರೋ? ಇಂತಹವರೆಲ್ಲಾ ಉತ್ತಮ ಅಪ್ಸರೆಯರನ್ನು ಸೋಕುವುದಾದರೆ ನಮಗೇಕೆ ರಂಭೆ ಮೊದಲಾದವರ ಸಹವಾಸ? ಎಂದು ದೇವತೆಗಳು ಹೇಳಿದರು.

ಅರ್ಥ:
ನೂಕು: ತಳ್ಳು; ಬಾಗಿಲು: ಕದ; ಚಾಚು: ಹರಡು; ಬಣಗು: ಕೀಳು, ಅಲ್ಪ; ದಿವೌಕಸರು: ದೇವತೆಗಳು; ನಿಲಿಸು: ತಡೆ; ಅಲ್ಪ: ಚಿಕ್ಕ, ಕ್ಷುದ್ರ; ಪುಣ್ಯ: ಸದಾಚಾರ; ಹೊಗಿಸು: ಸೇರಿಸು; ಬಹಳ: ತುಂಬ; ದಾನ: ಚತುರೋಪಾಯದಲ್ಲಿ ಓಂದು; ತಪ: ತಪಸ್ಸು, ಜಪ; ವಿವರ್ಜಿತ: ಬಿಟ್ಟ, ತ್ಯಜಿಸಿದ; ಓಕುಳಿ: ಉತ್ಸವ ಸಂದರ್ಭಗಳಲ್ಲಿ ಒಬ್ಬರ ಮೇಲೆ ಒಬ್ಬರು ಎರಚುವ ಬಣ್ಣದ ನೀರು; ನೆವ: ಕಾರಣ; ತೆಕ್ಕೆ: ಅಪ್ಪುಗೆ, ಆಲಿಂಗನ; ಬಾಕುಳಿ: ಹೆಬ್ಬಯಕೆ, ಅತ್ಯಾಸೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಆದಿ: ಮುಂತಾದ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ನೂಕು +ಬಾಗಿಲ +ಚಾಚು +ಬಣಗು +ದಿ
ವೌಕಸರ+ ನಿಲಿಸ್+ಅಲ್ಪ+ಪುಣ್ಯರನ್
ಏಕೆ +ಹೊಗಿಸಿದೆ +ಬಹಳದಾನ+ ತಪೋ +ವಿವರ್ಜಿತರ
ಓಕುಳಿಯ+ ನೆವದಿಂದ +ತೆಕ್ಕೆಯ
ಬಾಕುಳಿಗಳ್+ಉರವಣಿಸಿತೇ+ ತಮ
ಗೇಕೆ +ರಂಭಾದಿಗಳ+ ಸೋಂಕ್+ಎಂದುದು+ ಸುರಸ್ತೋಮ

ಅಚ್ಚರಿ:
(೧) ಸುರ, ದಿವೌಕಸರ – ಸಮನಾರ್ಥಕ ಪದ