ಪದ್ಯ ೩೧: ಯಾವುದರಲ್ಲಿ ಯಾವುದು ಲೀನವಾಯಿತು?

ಆ ಮಹಾಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾಮರುತ್ತಿನಲಾ ಬಹಳ ಬಹಿರಾವರಣದಲಿ ಪವನ
ವ್ಯೋಮಕಾ ತದಹಂ ಮಹತ್ತು ವಿ
ರಾಮ ವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಂತರ ಆ ಮಹಾ ಜಲರಾಶಿಯು ಅಗ್ನಿಯಲ್ಲಿ ಹೋಮವಾಯಿತು, ಅಗ್ನಿಯು ವಾಯುವಿನಲ್ಲಿ, ವಾಯುವ ಆಕಾಶದಲ್ಲಿ, ಆಗಸವು ಅಹಂತತ್ತ್ವದಲ್ಲಿ, ಅಹಂ ತತ್ತ್ವವು ಮಹತತ್ತ್ವದಲ್ಲಿ ಮತ್ತು ಮಹತ್ತು ಮಾಯೆಯಲ್ಲಿ ಅಡಗಿತು, ಮಾಯೆಯು ಪರಮಾತ್ಮನಲ್ಲಿ ಲಯವಾಯಿತು ಎಂದು ಮಾರ್ಕಂಡೇಯ ಮುನಿಯು ವಿವರಿಸಿದನು.

ಅರ್ಥ:
ಮಹಾ: ದೊಡ್ಡ; ಜಲ: ನೀರು; ಅಗ್ನಿ: ಬೆಂಕಿ; ಮುಖ: ಆನನ; ಹೋಮ: ಯಜ್ಞ; ಅಡಗು: ಮರೆಯಾಗು, ಮುಚ್ಚು; ಮರುತ: ಗಾಳಿ; ಬಹಳ: ತುಂಬ; ಬಹಿರ: ಹೊರಗೆ; ಆವರಣ: ಮುಸುಕು, ಹೊದಿಕೆ; ಪವನ: ವಾಯು; ವ್ಯೋಮ: ಆಗಸ; ಅಹಂ: ಅಹಂಕಾರ; ಮಹತ್ತು: ಹಿರಿದು, ಶ್ರೇಷ್ಠವಾದುದು; ವಿರಾಮ: ಬಿಡುವು, ವಿಶ್ರಾಂತಿ; ಪ್ರಕೃತಿ: ನೈಜವಾದುದು; ಮಾಯ: ಗಾರುಡಿ, ಇಂದ್ರಜಾಲ;ಕಾಮಿನಿ: ಹೆಣ್ಣು; ಪರಮಾತ್ಮ: ಭಗವಮ್ತ; ಲಯ: ನಾಶ, ಲೀನ; ಮುನಿಪ: ಋಷಿ;

ಪದವಿಂಗಡಣೆ:
ಆ +ಮಹಾಜಲಕ್+ಅಗ್ನಿ+ ಮುಖದಲಿ
ಹೋಮವಾಯ್ತು +ತದಗ್ನಿ+ಅಡಗಿದುದ್
ಆ+ಮರುತ್ತಿನಲ್+ಆ+ಬಹಳ+ ಬಹಿರಾವರಣದಲಿ +ಪವನ
ವ್ಯೋಮಕ+ಆ+ ತದ್+ಅಹಂ+ ಮಹತ್ತು+ ವಿ
ರಾಮ+ ವಾ +ಪ್ರಕೃತಿಯಲಿ+ ಮಾಯಾ
ಕಾಮಿನಿಗೆ +ಪರಮಾತ್ಮನಲಿ+ ಲಯವೆಂದನಾ+ ಮುನಿಪ

ಅಚ್ಚರಿ:
(೧) ಮಾಯಯು ಅಡಗಿದ ಪರಿ – ಮಾಯಾಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ

ಪದ್ಯ ೨೨: ಕಲ್ಪದ ಕೊನೆ ಹೇಗಿರುತ್ತದೆ?

ಅರಸ ಕೇಳ್ ಕಲ್ಪಾಂತದಲಿ ಬಿಡೆ
ಬಿರಿದುದೀ ಬ್ರಹ್ಮಾಂಡ ಬಹಿರಾ
ವರಣ ಜಲನಿಧಿ ಜಲದೊಳೊಂದಾಯ್ತೇನ ಹೇಳುವೆನು
ಹರಿವಿನೋದದೊಳಾಲದೆಲೆಯಲಿ
ಸಿರಿಸಹಿತ ಪವಡಿಸಿದನಿನಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ (ಅರಣ್ಯ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕಲ್ಪದ ಕೊನೆಗಾಲದಲ್ಲಿ ಬ್ರಹ್ಮಾಂಡವು ಬಿರಿದು, ಹೊರಗಿನ ಆವರಣದ ಸಮುದ್ರವು ಭೂಮಿಯನಾವರಿಸಿದ ನೀರಿನೊಡನೆ ಬೆರೆತು ಹೋದುದನ್ನು ಹೇಗೆ ಹೇಳಲಿ? ವಿಷ್ಣುವು ಲಕ್ಷ್ಮೀ ದೇವಿಯೊಂದಿಗೆ ಒಂದು ಆಲದ ಎಲೆಯ ಮೇಲೆ ಮಲಗಿದ್ದನು. ಆಗ ಸೂರ್ಯಚಂದ್ರರ ಬೆಳಕಿರಲಿಲ್ಲ, ಮಹಾಂಧಕಾರವು ಗಾಢವಾಯಿತು.

ಅರ್ಥ:
ಅರಸ: ರಾಜ; ಕೇಳ್: ಆಲಿಸು; ಕಲ್ಪ: ಬ್ರಹ್ಮನ ಒಂದು ದಿವಸ ಯಾ ಸಹಸ್ರ ಯುಗ; ಅಂತ: ಕೊನೆ; ಬಿಡು: ತೊರೆ, ತ್ಯಜಿಸು; ಬಿರಿ: ಬಿರುಕು, ಸೀಳು; ಬ್ರಹ್ಮಾಂಡ: ಜಗತ್ತು; ಬಹಿರ: ಹೊರಗೆ; ಆವರಣ: ಪ್ರಾಕಾರ, ಸುತ್ತು; ಜಲನಿಧಿ: ಸಾಗರ; ಜಲ: ನೀರು; ಹೇಳು: ತಿಳಿಸು; ಹರಿ: ಕೃಷ್ಣ; ವಿನೋದ: ಸಂತೋಷ; ಆಲ: ವಟವೃಕ್ಷ; ಎಲೆ: ಪರ್ಣ; ಸಿರಿ: ಐಶ್ವರ್ಯ; ಸಹಿತ: ಜೊತೆ; ಪವಡಿಸು: ಮಲಗು; ಇನ: ಸೂರ್ಯ; ಶಶಿ: ಚಂದ್ರ; ಕಿರಣ: ಕಾಂತಿ; ಅಂಧಕಾರ: ಕತ್ತಲೆ; ಭಾರ: ಹೊರೆ;

ಪದವಿಂಗಡಣೆ:
ಅರಸ +ಕೇಳ್ +ಕಲ್ಪಾಂತದಲಿ+ ಬಿಡೆ
ಬಿರಿದುದ್+ಈ+ ಬ್ರಹ್ಮಾಂಡ +ಬಹಿರಾ
ವರಣ+ ಜಲನಿಧಿ +ಜಲದೊಳ್+ಒಂದಾಯ್ತ್+ಏನ+ ಹೇಳುವೆನು
ಹರಿ+ವಿನೋದದೊಳ್ +ಆಲದ್+ಎಲೆಯಲಿ
ಸಿರಿ+ಸಹಿತ+ ಪವಡಿಸಿದನ್+ಇನ+ಶಶಿ
ಕಿರಣವಿಲ್ಲ+ ಮಹಾಂಧಕಾರ+ ಸಭಾರವಾಯ್ತೆಂದ

ಅಚ್ಚರಿ:
(೧) ಹರಿಯ ವಿನೋದ ಲೀಲೆ – ಹರಿವಿನೋದದೊಳಾಲದೆಲೆಯಲಿ ಸಿರಿಸಹಿತ ಪವಡಿಸಿದನಿನಶಶಿ
ಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ