ಪದ್ಯ ೯: ಭೀಮನ ಪೌರುಷವು ಹೇಗಿತ್ತು?

ಕಡಿದರರಿಭಟಪಾದಪವನಡ
ಗೆಡಹಿದರು ಗಜಗಿರಿಗಳನು ರಥ
ದೆಡೆದೆವರ ಕೊಚ್ಚಿದರು ತುರಗವ್ರಜದ ಬಲುಮೆಳೆಯ
ಕಡಿದು ಹರಹಿದರನಿಲಸುತ ಕಾ
ಲಿಡಲು ತೆರಹಾಯ್ತಹಿತವಿಪಿನದ
ಕಡಿತ ತೀರಿತು ಹೊಕ್ಕನರನೆಲೆಗಾಗಿ ಕಲಿಭೀಮ (ಭೀಷ್ಮ ಪರ್ವ, ೫ ಸಂಧಿ, ೯ ಪದ್ಯ)

ತಾತ್ಪರ್ಯ:
ಸೈನಿಕರೆಂಬ ಮರಗಳನ್ನು ಕಡಿದು, ಬೆಟ್ಟದಂತಿದ್ದ ಆನೆಗಳನ್ನು ಅಡ್ಡಗೆಡವಿ, ರಥಗಳೆಂಬ ದಿನ್ನೆಗಳನ್ನು ಕೊಚ್ಚಿ ಸಮ ಮಾಡಿ, ಕುದುರೆಗಳ ಮಳೆಗಳನ್ನು ಕತ್ತರಿಸಿ ಹರಡಿದರು. ಭೀಮನು ಕಾಲೆತ್ತಿ ಇಟ್ಟೊಡನೆ ಶತ್ರು ಸೈನ್ಯದ ಅರಣ್ಯವು ತೆರವಾಯಿತು. ಭೀಮನು ರಾಜನ ಬೀಡಿನತ್ತ ನಡೆದನು.

ಅರ್ಥ:
ಕಡಿ: ಸೀಳು, ಕತ್ತರಿಸು; ಅರಿ: ವೈರಿ; ಭಟ: ಸೈನಿಕ; ಪಾದಪ: ಮರಗಿಡ; ಪವನ; ಕೆಡಹು: ಬೀಳಿಸು; ಗಜ: ಆನೆ; ಗಿರಿ: ಬೆಟ್ಟ; ರಥ: ಬಂಡಿ; ಕೊಚ್ಚು: ಕತ್ತರಿಸುವ ಸಾಧನ, ಕತ್ತರಿ; ತುರಗ: ಕುದುರೆ; ವ್ರಜ: ಗುಂಪು; ಮೆಳೆ: ದಟ್ಟವಾಗಿ ಬೆಳೆದ ಗಿಡಗಳ ಗುಂಪು, ಪೊದರು; ಹರಹು: ವಿಸ್ತಾರ, ವೈಶಾಲ್ಯ; ಅನಿಲಸುತ: ವಾಯುಪುತ್ರ (ಭೀಮ); ಕಾಲಿಡು: ತುಳಿ; ತೆರವು: ಎಡೆ, ಜಾಗ; ಅಹಿತ: ವೈರಿ; ವಿಪಿನ: ಕಾಡು; ಕಡಿತ: ಸೀಳು; ತೀರು: ಅಂತ್ಯ; ಹೊಕ್ಕು: ಸೇರು; ನೆಲೆ: ಭೂಮಿ; ಕಲಿ: ಶೂರ;

ಪದವಿಂಗಡಣೆ:
ಕಡಿದರ್+ಅರಿಭಟ+ಪಾದಪವನ್+ಅಡ
ಕೆಡಹಿದರು +ಗಜಗಿರಿಗಳನು +ರಥದ್
ಎಡೆದೆವರ+ ಕೊಚ್ಚಿದರು+ ತುರಗ+ವ್ರಜದ +ಬಲುಮೆಳೆಯ
ಕಡಿದು+ ಹರಹಿದರ್+ಅನಿಲಸುತ +ಕಾ
ಲಿಡಲು +ತೆರಹಾಯ್ತ್+ಅಹಿತ+ವಿಪಿನದ
ಕಡಿತ +ತೀರಿತು +ಹೊಕ್ಕ+ನರ+ನೆಲೆಗಾಗಿ +ಕಲಿಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾದಪ, ಗಜಗಿರಿ, ಬಲುಮೆಳೆ, ಅಹಿತವಿಪಿನ