ಪದ್ಯ ೧೩: ಎರಡು ಸೈನ್ಯವು ಹೇಗೆ ಹೋರಾಡಿದರು?

ಆಯತಿಕೆಯಲಿ ಬಂದು ಪಾಂಡವ
ರಾಯದಳ ಮೋಹರಿಸಿ ನೀಮ್ದುದು
ರಾಯರಿಬ್ಬರ ಬೀಸುಗೈಗಳ ಸನ್ನೆ ಸಮವಾಗೆ
ತಾಯಿಮಳಲನು ತರುಬಿದಬುಧಿಯ
ದಾಯಿಗರು ತಾವಿವರೆನಲು ಬಿಡೆ
ನೋಯಬೆರಸಿದುದುಭಯಬಲ ಬಲುಖತಿಯ ಬಿಂಕದಲಿ (ಶಲ್ಯ ಪರ್ವ, ೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯು ಸನ್ನದ್ಧವಾಗಿ ಬಂದು ನಿಂತಿತು. ರಾಜರಿಬ್ಬರೂ ಕೈಬೀಸಿ ಯುದ್ಧಾರಂಭಕ್ಕೆ ಏಕಕಾಲದಲ್ಲಿ ಅನುಮತಿಕೊಟ್ಟರು. ಸಮುದ್ರದೊಳಗಿರುವ ಮರಳು ಮೇಲೆದ್ದು ಅಲ್ಲೋಲ ಕಲ್ಲೋಲವಾದ ಸಮುದ್ರಗಳಿಗೆ ಇವರು ದಾಯಾದಿಗಳೆನ್ನುವಂತೆ ಮಹಾಕೋಪದಿಂದ ಒಬ್ಬರೊಡನೊಬ್ಬರು ಹೋರಾಡಿದರು.

ಅರ್ಥ:
ಆಯತಿ: ವಿಸ್ತಾರ; ಬಂದು: ಆಗಮಿಸು; ರಾಯ: ರಾಜ; ದಳ: ಸೈನ್ಯ; ಮೋಹರ: ಯುದ್ಧ; ನಿಂದು: ನಿಲ್ಲು; ಬೀಸು: ಅಲ್ಲಾಡಿಸು; ಕೈ: ಹಸ್ತ; ಸನ್ನೆ: ಗುರುತು; ಸಮ: ಸರಿಸಮಾನವಾದುದು; ತಾಯಿಮಳಲು: ಸಮುದ್ರದಡಿಯಲ್ಲಿರುವ ಮರಳು; ತರುಬು: ತಡೆ, ನಿಲ್ಲಿಸು; ಅಬುಧಿ: ಸಾಗರ; ದಾಯಿಗ: ದಾಯಾದಿ; ನೋಯ: ನೋವು; ಬೆರಸು: ಕಲಿಸು; ಉಭಯ: ಎರದು; ಬಲು: ಬಹಳ; ಖತಿ: ಕೋಪ; ಬಿಂಕ: ಗರ್ವ, ಜಂಬ, ಠೀವಿ;

ಪದವಿಂಗಡಣೆ:
ಆಯತಿಕೆಯಲಿ +ಬಂದು +ಪಾಂಡವ
ರಾಯದಳ +ಮೋಹರಿಸಿ+ ನಿಂದುದು
ರಾಯರಿಬ್ಬರ +ಬೀಸುಗೈಗಳ +ಸನ್ನೆ+ ಸಮವಾಗೆ
ತಾಯಿಮಳಲನು +ತರುಬಿದ್+ಅಬುಧಿಯ
ದಾಯಿಗರು+ ತಾವಿವರೆನಲು +ಬಿಡೆ
ನೋಯ+ಬೆರಸಿದುದ್+ಉಭಯಬಲ+ ಬಲು+ಖತಿಯ +ಬಿಂಕದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ತಾಯಿಮಳಲನು ತರುಬಿದಬುಧಿಯ ದಾಯಿಗರು ತಾವಿವರೆನಲು

ಪದ್ಯ ೨೫: ಬಾಣವು ಕೃಷ್ಣನಿಗೆ ಎಲ್ಲಿ ತಾಗಿತು?

ಕೆಂಗರಿಯ ಮರಿದುಂಬಿ ತಾವರೆ
ಗಂಗವಿಸುವವೊಲಸುರರಿಪುವಿನ
ಮಂಗಳಾನನಕಮಲದಲಿ ಶರವಾಳೆ ಗರಿಗಡಿಯೆ
ತುಂಗವಿಕ್ರಮನಂಬ ಕಿತ್ತು ತ
ದಂಗರಕ್ತವಿಷೇಕರೌದ್ರಾ
ಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ (ಭೀಷ್ಮ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಬಾಣವು ಕೆಂಗರಿಯ ಮರಿದುಂಬಿಯು ಕಮಲದೊಳಕ್ಕೆ ವೇಗವಾಗಿ ಹೋಗುವಂತೆ, ಶ್ರೀಕೃಷ್ಣನ ಮಂಗಳಕರವಾದ ಮುಖಕಮಲದತ್ತ ಹೋಗಿ, ಅವನ ಹಣೆಗೆ ನಟ್ಟಿತು. ಮಹಾಪರಾಕ್ರಮಿಯಾದ ಶ್ರೀಕೃಷ್ಣನು ಆ ಬಾಣವನ್ನು ಕೀಳಲು ಹೊರಚಿಮ್ಮಿದ ರಕ್ತಧಾರೆಯು ಅವನ ದೇಹಕ್ಕೆ ಅಭಿಷೇಕ ಮಾಡಿತು. ಆಗ ಶ್ರೀಕೃಷ್ಣನು ಭೀಷ್ಮನ ಉಪಟಳದಿಂದ ಮಹಾ ಕೋಪಾದ್ರಿಕನಾದನು.

ಅರ್ಥ:
ಕೆಂಗರಿ: ಕೆಂಪಾದ ರೆಕ್ಕೆ; ಮರಿ: ಚಿಕ್ಕ; ದುಂಬಿ: ಭ್ರಮರ; ತಾವರೆ: ಕಮಲ; ಅಂಗವಿಸು: ಬಯಸು, ಒಪ್ಪು; ಅಸುರರಿಪು: ರಾಕ್ಷಸನ ವೈರಿ (ಕೃಷ್ಣ); ಮಂಗಳ: ಶುಭ; ಆನನ: ಮುಖ; ಕಮಲ: ತಾವರೆ; ಶರವಾಳೆ: ಬಾಣಗಳ ಮಳೆ; ಗರಿ: ಬಾಣ; ಕಡಿ: ಸೀಳೂ; ತುಂಗ: ದೊಡ್ಡ, ಶ್ರೇಷ್ಠ; ವಿಕ್ರಮ: ಶೂರ, ಸಾಹಸ; ಅಂಬು: ಬಾಣ; ಕಿತ್ತು: ಕೀಳು; ರಕ್ತ: ನೆತ್ತರು; ವಿಷೇಕ: ಅಭಿಷೇಕ, ಮಜ್ಜನ; ರೌದ್ರ: ಕೋಪ; ಆಲಿಂಗಿತ: ತಬ್ಬಿಕೋ; ಬಲು: ಬಹಳ; ಖತಿ: ಕೋಪ; ಹಿಡಿ: ಗ್ರಹಿಸು; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಕೆಂಗರಿಯ +ಮರಿದುಂಬಿ +ತಾವರೆಗ್
ಅಂಗವಿಸುವವೊಲ್+ಅಸುರರಿಪುವಿನ
ಮಂಗಳಾನನ+ಕಮಲದಲಿ +ಶರವಾಳೆ+ ಗರಿಗಡಿಯೆ
ತುಂಗವಿಕ್ರಮನ್+ಅಂಬ +ಕಿತ್ತು +ತದ್
ಅಂಗರಕ್ತ್ + ಅವಿಷೇಕ+ರೌದ್ರಾ
ಲಿಂಗಿತನು+ ಬಲುಖತಿಯ+ ಹಿಡಿದನು+ ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ಅಸುರರಿಪು, ಮಂಗಳಾನನಕಮಲ, ತುಂಗವಿಕ್ರಮ – ಕೃಷ್ಣನನ್ನು ಕರೆದ ಪರಿ
(೨) ಉಪಮಾನ ಪ್ರಯೋಗ – ಕೆಂಗರಿಯ ಮರಿದುಂಬಿ ತಾವರೆಗಂಗವಿಸುವವೊಲ
(೩) ಕೃಷ್ಣನ ಮುಖಭಾವ – ತದಂಗರಕ್ತವಿಷೇಕರೌದ್ರಾಲಿಂಗಿತನು ಬಲುಖತಿಯ ಹಿಡಿದನು ಭೀಷ್ಮನುಪಟಳಕೆ