ಮತ್ತೆ ಜರೆದನು ದನುಜರಿಪು ತಲೆ
ಗುತ್ತಿದನು ಕಲಿ ಪಾರ್ಥನಾತನ
ಕುತ್ತಿ ಬರಸೆಳೆದಂತೆ ಭಂಗಿಸಿದನು ಮುರಧ್ವಂಸಿ
ಒತ್ತುವವು ಫಲುಗುಣನ ನುಡಿ ಮಿಗೆ
ಕೆತ್ತುವವು ಹರಿವಚನವಾತನ
ಚಿತ್ತವನು ಸಂತೈಸಿ ಹರಿ ತಿಳುಹಿದನು ಸಾಮದಲಿ (ಕರ್ಣ ಪರ್ವ, ೨೬ ಸಂಧಿ, ೪೧ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ಅರ್ಜುನನನ್ನು ಜರೆಯಲು ಅರ್ಜುನನು ತಲೆ ತಗ್ಗಿಸಿದನು. ಅವನನ್ನು ಹೊಡೆದೆಳೆದಂತೆ ಕೃಷ್ಣನು ಹಂಗಿಸಿದನು. ಕೃಷ್ಣನ ಮಾತುಗಳು ಾವನನ್ನು ಯುದ್ಧಮಾಡಲು ಪ್ರಚೋದಿಸಿದವು, ಅರ್ಜುನನ ಮಾತುಗಳು ಅದನ್ನು ನಿರಾಕರಿಸಿದವು, ಕೊನೆಗೆ ಕೃಷ್ಣನು ಸಾಮೋಪಾಯದಿಂದ ಅರ್ಜುನನನ್ನು ಒಡಂಬಡಿಸಲು ಯತ್ನಿಸಿದನು.
ಅರ್ಥ:
ಜರೆ: ಬಯ್ಯು; ದನುಜರಿಪು: ರಾಕ್ಷಸರ ವೈರಿ; ತಲೆ: ಶಿರ; ಕಲಿ: ಶೂರ; ಕುತ್ತು: ಹೊಡೆತ, ಪೆಟ್ಟು; ಬರಸೆಳೆ: ಹತ್ತಿರಕ್ಕೆ ಬರುವಂತೆ ಎಳೆ; ಭಂಗಿಸು: ಮುರಿ; ಮುರಧ್ವಂಸಿ: ಕೃಷ್ಣ; ಒತ್ತು: ಒತ್ತಡ ಹತ್ತಿರ; ನುಡಿ: ಮಾತು; ಮಿಗೆ: ಮತ್ತು; ಕೆತ್ತು:ನಡುಕ, ಸ್ಪಂದನ; ವಚನ: ನುಡಿ, ಮಾತು; ಚಿತ್ತ: ಮನಸ್ಸು; ಸಂತೈಸು: ಸಮಾಧಾನಪಡಿಸು; ತಿಳುಹು: ತಿಳಿಸು, ಹೇಳು; ಸಾಮ: ಶಾಂತಗೊಳಿಸುವಿಕೆ, ಕಾರ್ಯ ಸಾಧನೆಯ ಚತುರೋಪಾಯಗಳಲ್ಲಿ ಒಂದು;
ಪದವಿಂಗಡಣೆ:
ಮತ್ತೆ +ಜರೆದನು +ದನುಜರಿಪು +ತಲೆ
ಗುತ್ತಿದನು+ ಕಲಿ +ಪಾರ್ಥನ್+ಆತನ
ಕುತ್ತಿ +ಬರಸೆಳೆದಂತೆ +ಭಂಗಿಸಿದನು +ಮುರಧ್ವಂಸಿ
ಒತ್ತುವವು +ಫಲುಗುಣನ+ ನುಡಿ +ಮಿಗೆ
ಕೆತ್ತುವವು +ಹರಿವಚನವ್+ಆತನ
ಚಿತ್ತವನು +ಸಂತೈಸಿ +ಹರಿ +ತಿಳುಹಿದನು +ಸಾಮದಲಿ
ಅಚ್ಚರಿ:
(೧) ಕುತ್ತು, ಒತ್ತು, ಕೆತ್ತು, – ಪದಗಳ ಬಳಕೆ
(೨) ಕಾರ್ಯಸಾಧನೆಯ ಹಲವು ಮಾರ್ಗಗಳನ್ನು ಉಪಯೋಗಿಸಿದ ಕೃಷ್ಣ
(೩) ದನುಜರಿಪು, ಮುರಧ್ವಂಸಿ, ಹರಿ; ನುಡಿ, ವಚನ – ಸಮನಾರ್ಥಕ ಪದ