ಒಡ್ಡವಿಸಿತೆನ್ನಾಟ ನಗೆಯೊಳ
ಗಡ್ಡಬಿದ್ದಳು ಪಾಂಡುಪುತ್ರರ
ಬೊಡ್ಡಿ ಬಿಂಕದಲವರು ಬಿರಿದರು ಭೀಮ ಫಲುಗುಣರು
ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ
ಬಡ್ಡಿಗಿನ್ನಕ ಬದುಕಿದೆನು ಧೃತರಾಷ್ಟ್ರ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೪೩ ಪದ್ಯ)
ತಾತ್ಪರ್ಯ:
ನನ್ನ ವರ್ತೆನೆಯು ಹೀಗೆ ಗೊಂದಲಮಯವಾಗಲು, ಪಾಂಡವರ ಬೊಡ್ಡಿ ದ್ರೌಪದಿಯ ನಗುವು ಹೆಚ್ಚಾಗಿ ಆಕೆ ಅಡ್ಡಬಿದ್ದಳು. ಭೀಮಾರ್ಜುನರು ಹೆಮ್ಮೆಯಿಂದ ಬೀಗಿದರು. ನಾನೋ ಗೊಡ್ಡು ರೋಷದಿಂದ ಕುದಿದು ಅದರ ಬಡ್ಡಿಯಾಗಿ ಬದುಕಿದ್ದೇನೆ ಎಂದು ದುರ್ಯೋಧನನು ತನ್ನ ನೋವನ್ನು ಧೃತರಾಷ್ಟ್ರನಿಗೆ ಹೇಳಿಕೊಂಡನು.
ಅರ್ಥ:
ಒಡ್ಡ: ಮೂರ್ಖ, ಕೆಲಸಮಾಡುವವ; ನಗೆ: ನಗು, ಸಂತೋಷ, ಹರ್ಷ; ಅಡ್ಡಬೀಳು: ಕೆಳಕ್ಕೆ ಬೀಳು, ಹೊರಳು; ಪುತ್ರ: ಮಕ್ಕಳು; ಬೊಡ್ಡಿ: ವೇಶ್ಯೆ; ಬಿಂಕ: ಗರ್ವ, ಜಂಬ, ಠೀವಿ; ಬಿರಿ: ಬಿರುಕು, ಸೀಳು; ಖಡಿ: ಕತ್ತರಿಸು; ಗರುವ: ಹಿರಿಯ, ಶ್ರೇಷ್ಠ; ರೋಷ: ಕೋಪ; ಗೊಡ್ಡು: ಬಂಜೆ, ನಿಷ್ಫಲತೆ; ವಿಘಾತಿ: ಹೊಡೆತ, ವಿರೋಧ; ಬಡ್ಡಿ: ಸಾಲವಾಗಿ ಕೊಡುವ ಯಾ ಪಡೆಯುವ ಹಣದ ಮೇಲೆ ತೆರುವ ಯಾ ಪಡೆಯುವ ಹೆಚ್ಚಿನ ಹಣ, ಹೆಚ್ಚಾಗಿ; ಬದುಕು: ಜೀವಿಸು; ಕೇಳು: ಆಲಿಸು;
ಪದವಿಂಗಡಣೆ:
ಒಡ್ಡವಿಸಿತೆನ್+ಆಟ +ನಗೆಯೊಳಗ್
ಅಡ್ಡಬಿದ್ದಳು +ಪಾಂಡುಪುತ್ರರ
ಬೊಡ್ಡಿ +ಬಿಂಕದಲ್+ಅವರು +ಬಿರಿದರು+ ಭೀಮ +ಫಲುಗುಣರು
ಖಡ್ಡಿ+ ಗರುವೆನ್ನಿಂದ +ರೋಷದ
ಗೊಡ್ಡು +ನಾನಾದೆನು+ ವಿಘಾತಿಯ
ಬಡ್ಡಿಗಿನ್ನಕ+ ಬದುಕಿದೆನು+ ಧೃತರಾಷ್ಟ್ರ +ಕೇಳೆಂದ
ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ಪಾಂಡುಪುತ್ರರ ಬೊಡ್ಡಿ
(೨) ದುರ್ಯೋಧನನ ಸ್ಥಿತಿಗೆ ಉಪಮಾನದ ಪ್ರಯೋಗ – ಖಡ್ಡಿ ಗರುವೆನ್ನಿಂದ ರೋಷದ
ಗೊಡ್ಡು ನಾನಾದೆನು ವಿಘಾತಿಯ ಬಡ್ಡಿಗಿನ್ನಕ ಬದುಕಿದೆನು