ಎಲೆ ಮರುಳೆ ಗುರುವೆಮಗೆ ನೀ ಹೆ
ಕ್ಕಳಿಸಿ ನುಡಿದರೆ ಮೊದಲಲಂಜುವೆ
ನುಳಿದ ಮಾತಿನಲೇನು ನಿಮ್ಮೊಡನೆನಗೆ ಸಂಗ್ರಾಮ
ಬಳಿಕವೀಗಳು ನಿಮ್ಮ ಮೋಹರ
ದೊಳಗೆ ಕೊಡಿ ಬಟ್ಟೆಯನು ಸಿಲುಕಿದ
ಫಲುಗುಣನ ತಹೆನಣ್ಣದೇವನ ನೇಮ ತನಗೆಂದ (ದ್ರೋಣ ಪರ್ವ, ೧೨ ಸಂಧಿ, ೧೩ ಪದ್ಯ)
ತಾತ್ಪರ್ಯ:
ಎಲೈ ಹುಚ್ಚನೇ, ನೀನು ನಮಗೆ ಗುರುವಾಗಿರುವೆ, ನೀನು ಹೆಚ್ಚಿನ ಮಾತನ್ನಾಡಿದರೆ ಮೊದಲಿಗೆ ಹೆದರುತ್ತೇನೆ, ಮಿಕ್ಕ ಮಾತು ಹಾಗಿರಲಿ, ನಿಮ್ಮೊಡನೆ ವೃಥಾ ವಾಗ್ಯುದ್ಧ ಬೇಡ, ಈಗ ಸಂದರ್ಭವೇನೆಂದರೆ, ಅಣ್ಣನು ನನಗೆ ಆಜ್ಞೆ ಮಾಡಿದ್ದಾನೆ, ನಿಮ್ಮ ಸೈನ್ಯ ಮಧ್ಯದಲ್ಲಿ ಸಿಕ್ಕಿಹಾಕಿ ಕೊಂಡಿರುವ ಅರ್ಜುನನನ್ನು ಕರೆದು ತಾ ಎಂದು, ಅದಕ್ಕಾಗಿ ನಾನಿಲ್ಲಿಗೆ ಬಂದಿದ್ದೇನೆ, ದಾರಿ ನೀಡಿ ನಾನು ಅರ್ಜುನನನ್ನು ಕರೆತರುತ್ತೇನೆ ಎಂದನು.
ಅರ್ಥ:
ಮರುಳೆ: ಮೂಢ; ಗುರು: ಆಚಾರ್ಯ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು, ಹಿಗ್ಗು; ನುಡಿ: ಮಾತಾದು; ಅಂಜು: ಹೆದರು; ಉಳಿದ: ಮಿಕ್ಕ; ಮಾತು: ನುಡಿ; ಸಂಗ್ರಾಮ: ಯುದ್ಧ; ಬಳಿಕ: ನಂತರ; ಮೋಹರ: ಉದ್ಧ; ಕೊಡಿ: ನೀಡಿ; ಬಟ್ಟೆ; ಹಾದಿ; ಸಿಲುಕು: ಬಂಧನಕ್ಕೊಳಗಾದುದು; ತಹೆ: ಹಿಂತರು; ಅಣ್ಣ: ಸಹೋದರ; ನೇಮ: ಆಜ್ಞೆ;
ಪದವಿಂಗಡಣೆ:
ಎಲೆ +ಮರುಳೆ +ಗುರುವ್+ಎಮಗೆ +ನೀ +ಹೆ
ಕ್ಕಳಿಸಿ +ನುಡಿದರೆ +ಮೊದಲಲ್+ಅಂಜುವೆನ್
ಉಳಿದ +ಮಾತಿನಲೇನು+ ನಿಮ್ಮೊಡನ್+ಎನಗೆ +ಸಂಗ್ರಾಮ
ಬಳಿಕವ್+ಈಗಳು +ನಿಮ್ಮ +ಮೋಹರ
ದೊಳಗೆ +ಕೊಡಿ +ಬಟ್ಟೆಯನು+ ಸಿಲುಕಿದ
ಫಲುಗುಣನ+ ತಹೆನ್+ಅಣ್ಣದೇವನ +ನೇಮ +ತನಗೆಂದ
ಅಚ್ಚರಿ:
(೧) ಗುರುವನ್ನು ಕರೆದ ಪರಿ – ಎಲೆ ಮರುಳೆ ಗುರುವೆಮಗೆ ನೀ