ಪದ್ಯ ೧೩: ಗಣಿಕೆಯರು ಹೇಗೆ ಜಂಬದ ಮಾತನ್ನು ಆಡಿದರು?

ಒದೆದು ಪದದಲಿ ಕೆಂದಳಿರ ತೋ
ರಿದೆವಶೋಕೆಗೆ ಮದ್ಯಗಂಡೂ
ಷದಲಿ ಬಕುಳದ ಮರನ ಭುಲ್ಲವಿಸಿದೆವು ಕುರುವಕಕೆ
ತುದಿಮೊಲೆಯ ಸೋಂಕಿನಲಿ ಹೂದೋ
ರಿದೆವು ಕಣ್ಣೋರೆಯಲಿ ತಿಲಕವ
ಕದುಕಿದೆವು ನೀವಾವ ಘನಪದವೆಂದರಬಲೆಯರು (ಅರಣ್ಯ ಪರ್ವ, ೧೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶೋಕ ವೃಕ್ಷವನ್ನು ಕಾಲಲ್ಲೊದೆದು ಕೆಂದಳಿರು ಬರುವಂತೆ ಮಾಡಿದೆವು. ಮದ್ಯವನ್ನು ಕುಡಿದು ಮುಕ್ಕುಳಿಸಿ ಉಗುಳಿ ಬಕುಳ ವೃಕ್ಷವನ್ನು ಮೋಹಗೊಳಿಸಿದೆವು, ಮದರಂಗಿಗೆ ಮೊಲೆಯ ತುದಿಯನ್ನು ಸೋಕಿಸಿ ಹೂಬಿಡುವಂತೆ ಮಾಡಿದೆವು, ಓರೆನೋಟದಿಂದ ತಿಲಕ ವೃಕ್ಷವನ್ನು ಕಡೆದೆವು, ಇನ್ನು ನೀವು ಯಾವ ಘನ ಎಂದು ತಮ್ಮ ಬಗ್ಗೆ ಜಂಬದ ಮಾತುಗಳನ್ನು ಗಣಿಕೆಯರು ನುಡಿದರು.

ಅರ್ಥ:
ಒದೆ: ಕಾಲಿಂದ ತಳ್ಳು; ಪದ: ಚರಣ, ಕಾಲು; ಕೆಂದಳಿರ: ಕೆಂಪಾದ ಚಿಗುರು; ತೋರು: ಕಾಣಿಸು; ಮದ್ಯ: ಮಾದಕ ಪಾನೀಯ; ಗಂಡೂಷ: ಬಾಯಿ ಮುಕ್ಕುಳಿಸುವುದು; ಮರ: ತರು; ಭುಲ್ಲವಿಸು: ಅತಿಶಯಿಸು; ಕುರುವಕ: ಮದರಂಗಿ ಗಿಡ; ತುದಿ: ಅಗ್ರಭಾಗ; ಮೊಲೆ: ಸ್ತನ; ಸೋಂಕು: ತಾಗು, ಮುಟ್ಟು; ಹೂ: ಪುಷ್ಪ; ಕಣ್ಣು: ನಯನ; ಓರೆ: ವಕ್ರ, ಡೊಂಕು; ತಿಲಕ: ಮರದ ಹೆಸರು; ಘನ: ಶ್ರೇಷ್ಠ; ಅಬಲೆ: ಹೆಣ್ಣು;

ಪದವಿಂಗಡಣೆ:
ಒದೆದು +ಪದದಲಿ +ಕೆಂದಳಿರ+ ತೋ
ರಿದೆವ್+ಅಶೋಕೆಗೆ +ಮದ್ಯ+ಗಂಡೂ
ಷದಲಿ+ ಬಕುಳದ +ಮರನ +ಭುಲ್ಲವಿಸಿದೆವು +ಕುರುವಕಕೆ
ತುದಿ+ಮೊಲೆಯ +ಸೋಂಕಿನಲಿ+ ಹೂದೋ
ರಿದೆವು +ಕಣ್ಣೋರೆಯಲಿ+ ತಿಲಕವ
ಕದುಕಿದೆವು +ನೀವಾವ +ಘನಪದವೆಂದರ್+ಅಬಲೆಯರು

ಅಚ್ಚರಿ:
(೧) ಉಪಮಾನದ ಪ್ರಯೋಗಕ್ಕ್ ಬಳಸಿದ ಮರಗಳು – ಅಶೋಕ, ಬಕುಳ, ಕುರುವಕ, ತಿಲಕ