ಮರಳಿ ಕರೆಸುವುದೆಂದು ಕಂಬನಿ
ವೆರಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವುದೇನೈ ಪ್ರಾತಿಕಾಮಿಕನೆಂದನಾ ಭೀಮ (ಸಭಾ ಪರ್ವ, ೧೭ ಸಂಧಿ, ೩೧ ಪದ್ಯ)
ತಾತ್ಪರ್ಯ:
ಭೀಮನು ಪ್ರಾತಿಕಾಮಿಕನ ಮಾತನ್ನು ಕೇಳಿ, ಎಲೈ ಪ್ರಾತಿಕಾಮಿಕ, ನಮ್ಮನ್ನು ಮತ್ತೆ ಕರೆಸಿ ಎಂದು ದುರ್ಯೋಧನನು ಧೃತರಾಷ್ಟ್ರನ ಮನಸ್ಸನ್ನು ಕರಗಿಸಿದನೋ? ಅಥವ ಗಾಂಧಾರಿಯು ನಮ್ಮನ್ನು ಕರೆತರಲು ನಿನ್ನನ್ನು ಕಳಿಸಿದಳೋ? ಇಷ್ಟೆಲ್ಲಾ ಆದಮೇಲೆ, ನಮ್ಮನ್ನು ಕರೆಸುವವರು ಭಂಡರೋ ಅಥವ ಅವರು ಕರೆದರೆಂದು ಮತ್ತೆ ಹೋಗುವವರು ಭಂಡರೋ ಹೇಳು ಎಂದು ಪ್ರಾತಿಕಾಮಿಕನಿಗೆ ಭೀಮ ಕೇಳಿದ.
ಅರ್ಥ:
ಮರಳಿ: ಪುನಃ, ಮತ್ತೆ;ಕರೆಸು: ಬರೆಮಾಡು; ಕಂಬನಿ: ಕಣ್ಣೀರು; ಎರಸು: ಚೆಲ್ಲು; ಪಿತ: ತಂದೆ; ಚಿತ್ತ: ಮನಸ್ಸು; ಕರಗಿಸು: ಕನಿಕರ ಪಡು, ನೀರಾಗಿಸು; ಮೇಣ್: ಅಥವ; ಕರೆಸು: ಬರೆಮಾಡು; ಅವದಿರು: ಅವರು; ಭಂಡ: ನಾಚಿಕೆ, ಲಜ್ಜೆ; ಹೋಹರು: ತೆರಳು; ಅರಿ: ತಿಳಿ;
ಪದವಿಂಗಡಣೆ:
ಮರಳಿ +ಕರೆಸುವುದೆಂದು +ಕಂಬನಿವ್
ಎರಸಿ +ಕುರುಪತಿ +ಪಿತನ +ಚಿತ್ತವ
ಕರಗಿಸಿದನೋ +ಮೇಣು +ತಾ +ಕರೆಸಿದಳೊ +ಗಾಂಧಾರಿ
ಕರೆಸುವ್+ಅವದಿರು +ಭಂಡರೋ +ಮೇಣ್
ಮರಳಿ+ ಹೋಹರು+ ಭಂಡರೋ +ನೀನ್
ಅರಿವುದೇನೈ+ ಪ್ರಾತಿಕಾಮಿಕನೆಂದನಾ +ಭೀಮ
ಅಚ್ಚರಿ:
(೧) ಯಾರು ಭಂಡರು ಎಂದು ಹೇಳುವ ಪರಿ – ಕರೆಸುವವದಿರು ಭಂಡರೋ ಮೇಣ್ಮರಳಿ ಹೋಹರು ಭಂಡರೋ
(೨) ಕುರುಪತಿ ಪಿತನ – ಪತಿ, ಪಿತ ಪದದ ಬಳಕೆ