ಚ್ಯವನ ಮುದ್ಗಲ ಕಣ್ವ ಕಠ ಭಾ
ರ್ಗವ ಭರದ್ವಾಜಾಂಗಿರಸ ಗಾ
ಲವ ಪುಲಸ್ತ್ಯ ರುಮಣ್ವ ಗೌತಮ ಯಾಜ್ಞವಲ್ಕ್ಯಮುನಿ
ಧ್ರುವ ವಿಭಾಂಡಕ ಗಾರ್ಗ್ಯ ಘಟಸಂ
ಭವ ಮೃಕಂಡುಸುತಾದಿ ಭೂಮಿ
ಪ್ರವರ ಮುನಿಗಳು ಬಂದು ಕಂಡರು ಧರ್ಮನಂದನನ (ಗದಾ ಪರ್ವ, ೧೩ ಸಂಧಿ, ೨ ಪದ್ಯ)
ತಾತ್ಪರ್ಯ:
ಚ್ಯವನ, ಮುದ್ಗಲ, ಕಣ್ವ, ಕಠ, ಭಾರ್ಗವ, ಭಾರದ್ವಾಜ, ಅಂಗಿರಸ, ಗಾಲವ, ಪುಲಸ್ತ್ಯ, ರುಮಣ್ವ, ಗೌತಮ, ಯಾಜ್ಞವಲ್ಕ್ಯ, ಧ್ರುವ, ವಿಭಾಂಡಕ, ಗಾರ್ಗ್ಯ, ಅಗಸ್ತ್ಯ, ಮಾರ್ಕಂಡೇಯನೇ ಮೊದಲಾದ ಬ್ರಹ್ಮರ್ಷಿಗಳು ಬಂದು ಧರ್ಮಪುತ್ರನನ್ನು ಕಂಡು ಆಶೀರ್ವದಿಸಿದರು.
ಅರ್ಥ:
ಆದಿ: ಮುಂತಾದ; ಭೂಮಿ: ಧರಿತ್ರೀ; ಪ್ರವರ: ಪ್ರಧಾನ ವ್ಯಕ್ತಿ; ಮುನಿ: ಋಷಿ; ಬಂದು: ಆಗಮಿಸು; ಕಂಡು: ನೋಡು; ನಂದನ: ಮಗ; ಸುತ: ಮಗ;
ಪದವಿಂಗಡಣೆ:
ಚ್ಯವನ +ಮುದ್ಗಲ+ ಕಣ್ವ +ಕಠ +ಭಾ
ರ್ಗವ +ಭರದ್ವಾಜ+ಅಂಗಿರಸ +ಗಾ
ಲವ +ಪುಲಸ್ತ್ಯ+ ರುಮಣ್ವ+ ಗೌತಮ +ಯಾಜ್ಞವಲ್ಕ್ಯ+ಮುನಿ
ಧ್ರುವ +ವಿಭಾಂಡಕ +ಗಾರ್ಗ್ಯ +ಘಟಸಂ
ಭವ +ಮೃಕಂಡುಸುತ+ಆದಿ +ಭೂಮಿ
ಪ್ರವರ +ಮುನಿಗಳು +ಬಂದು +ಕಂಡರು +ಧರ್ಮನಂದನನ
ಅಚ್ಚರಿ:
(೧) ೧೭ ಮುನಿಗಳ ಹೆಸರನ್ನು ಹೇಳುವ ಪದ್ಯ