ಪ್ರಭೆಯದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೫ ಪದ್ಯ)
ತಾತ್ಪರ್ಯ:
ಸೂರ್ಯನಿದಿರಲ್ಲಿ ತೇಜಸ್ವಿಗಳಾರು? ಶಿವನಲ್ಲದೆ ಲೋಕಕ್ಕೆ ವಿಭುಗಳಾರು? ವಿಷ್ಣುವಿನಿದಿರಲ್ಲಿ ಇನ್ನಾವ ದೇವತೆ? ಸಮುದ್ರದಿದಿರಿನಲ್ಲಿ ಯಾವ ನದಿ ನಿಲ್ಲಲು ಸಾಧ್ಯ? ದ್ರೋಣನಿರಲು ನಮ್ಮ ಸೈನ್ಯದಲ್ಲಿ ಸುಭಟರು ಇನ್ನಾರು ಎಂದು ದ್ರೋಣರ ಹಿರಿಮೆಯನ್ನು ಕರ್ಣನು ಹೇಳಿದನು.
ಅರ್ಥ:
ಪ್ರಭೆ: ಪ್ರಕಾಶ; ಎದುರು: ಮುಂದೆ; ಅಭವ: ಶಿವ; ಭುವನ: ಭೂಮಿ; ವಿಭು: ಒಡೆಯ, ಅರಸು; ನದಿ: ಸರೋವರ; ವೈಕುಂಠ: ವಿಷ್ಣುವಿನ ವಾಸಸ್ಥಾನ; ಇದಿರು: ಎದುರು; ದೇವತೆ: ದೈವ; ವಿಭವ: ಸಿರಿ, ಸಂಪತ್ತು; ಜಲಧಿ: ಸಾಗರ; ರಭಸ: ವೇಗ; ಬಲ: ಶಕ್ತಿ; ಸುಭಟ: ಪರಾಕ್ರಮಿ;
ಪದವಿಂಗಡಣೆ:
ಪ್ರಭೆಯದಾರಿಗೆ +ಸೂನ್+ಇದಿರಿನೊಳ್
ಅಭವನಿರೆ+ ತಾನಾರು+ ಭುವನಕೆ
ವಿಭುಗಳೈ +ವೈಕುಂಠನಿದಿರಿನೊಳ್+ಆರು +ದೇವತೆಯೈ
ವಿಭವ+ ನದಿಗಳಿಗುಂಟೆ +ಜಲಧಿಯ
ರಭಸದ್+ಇದಿರಲಿ +ನಮ್ಮ +ಬಲದಲಿ
ಸುಭಟರಾರೈ+ ದ್ರೋಣನ್+ಇರುತಿರಲ್+ಎಂದನಾ +ಕರ್ಣ
ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಭೆಯದಾರಿಗೆ ಸೂರ್ಯನಿದಿರಿನೊಳ್; ಅಭವನಿರೆ ತಾನಾರು ಭುವನಕೆ
ವಿಭುಗಳೈ; ವೈಕುಂಠನಿದಿರಿನೊಳಾರು ದೇವತೆಯೈ; ವಿಭವ ನದಿಗಳಿಗುಂಟೆ ಜಲಧಿಯ ರಭಸದಿದಿರಲಿ