ಪದ್ಯ ೩೪: ಕೃಷ್ಣನು ತೊಡೆ ಮುರಿದುದು ತಪ್ಪಲ್ಲವೆಂದು ಏಕೆ ಹೇಳಿದನು?

ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತನುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ನುಡಿಯುತ್ತಾ, ತೊಡೆಯನ್ನು ತೋರಿಸಿ ಕೌರವನು ದ್ರೌಪದಿಯನ್ನು ಜರೆದಾಗ ಅವಳು ತೊಡೆ ಮುರಿದು ಸಾಯಿ ಎಂದು ಶಪಿಸಿದಳು. ಮೈತ್ರೇಯನ ನುಡಿಗೆ ಅನುಗುಣವಾಗಿ ದ್ರೌಪದಿಯೂ ಶಪಿಸಿದಳು. ನಿನ್ನ ತೊಡೆಗಲನ್ನು ಮುರಿಯುವೆನೆಂದು ಕೋಪದಿಂದ ಭೀಮನೂ ಭಾಷೆ ಮಾಡಿದನು. ಪ್ರತಿಜ್ಞೆಯಂತೆ ನಡೆದುಕೊಂಡರೆ ಅದರಲ್ಲೇನು ತಪ್ಪು ಎಂದು ಕೃಷ್ಣನು ಪ್ರಶ್ನಿಸಿದನು.

ಅರ್ಥ:
ಪತಿವ್ರತೆ: ಸಾಧ್ವಿ; ಬಯ್ದು: ಜರಿದು, ನಿಂದಿಸು; ಭೂಪ: ರಾಜ; ತೊಡೆ: ಜಂಘೆ; ತೋರು: ಪ್ರದರ್ಶಿಸು; ಜರೆ: ಬಯ್ಯು; ನುಡಿ: ಮಾತು; ತಪ್ಪು: ಸರಿಯಿಲ್ಲದ್ ಸ್ಥಿತಿ; ಋಷಿ: ಮುನಿ; ವಚನ: ಮಾತು ಅನುಗತಿ: ಸಾವು; ಕೋಪ: ಮುಳಿ; ಕುಡಿ: ಚಿಗುರು; ಪ್ರತಿಜ್ಣೆ: ಪ್ರಮಾಣ; ಸ್ಥಾಪನ: ಇಡು; ಬಳಿಕ: ನಂತರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಆ +ಪತಿವ್ರತೆ+ ಬಯ್ದಳ್+ಈ+ ಕುರು
ಭೂಪ +ತೊಡೆಗಳ +ತೋರಿ +ಜರೆಯಲು
ದ್ರೌಪದಿಯ +ನುಡಿ +ತಪ್ಪುವುದೆ+ ಋಷಿ+ವಚನದ್+ಅನುಗತಿಗೆ
ಕೋಪ +ಕುಡಿಯಿಡಲ್+ಈ+ ವೃಕೋದರನ್
ಆಪನಿತ+ನುಡಿದನು +ಪ್ರತಿಜ್ಞಾ
ಸ್ಥಾಪನಕೆ +ಬಳಿಕೇನ +ಮಾಡುವುದೆಂದನ್+ಅಸುರಾರಿ

ಅಚ್ಚರಿ:
(೧) ಕೋಪ ಹೆಚ್ಚಾಯಿತು ಎಂದು ಹೇಳಲು – ಕೋಪ ಕುಡಿಯಿಡಲೀ ವೃಕೋದರನಾಪನಿತನುಡಿದನು