ಪದ್ಯ ೧: ಯಾವ ಶಂಖಗಳು ಮೊಳಗಿದವು?

ಹಳಚಲನುವಾಯ್ತುಭಯಸೇನಾ
ಜಲಧಿ ಕಳಕಳ ಮಿಗಲು ಮರುತಿ
ಮೊಳಗಿದನು ಪೌಂಡ್ರಕವ ಭೂಪನನಂತವಿಜಯವನು
ಇಳೆ ಹಿಳಿಯೆ ಮಣಿಪುಷ್ಪಕದ ನಿ
ರ್ಮಲ ಸುಘೋಷದೊಳಮಮ ಕೋಳಾ
ಹಳಿಸಿದುದು ಸಹದೇವ ನಕುಲರು ಸಮರಕನುವಾಯ್ತು (ಭೀಷ್ಮ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಎರಡೂ ಸೈನ್ಯಗಳೂ ಯುದ್ಧಕ್ಕೆ ಸಿದ್ಧವಾದವು. ಆಗ ಸಮುದ್ರ ಘೋಷದಂತೆ ಸದ್ದು ಕೇಳಿಸಿತು. ಭೀಮನು ಪೌಂಡ್ರವನ್ನೂ, ಧರ್ಮಜನು ಅನಂತ ವಿಜಯವನ್ನೂ, ನಕುಲ ಸಹದೇವರು ಸುಘೋಷ ಮಣಿಪುಷ್ಪಕಗಳನ್ನೂ ಊದಿದರು.

ಅರ್ಥ:
ಹಳಚು: ತಾಗು, ಬಡಿ, ಆಕ್ರಮಿಸು; ಅನುವು: ರೀತಿ, ಅವಕಾಶ; ಉಭಯ: ಎರಡು; ಸೇನಾ: ಸೈನ್ಯ; ಜಲಧಿ: ಸಾಗರ; ಕಳಕಳ: ಗೊಂದಲ; ಮಿಗಲು: ಹೆಚ್ಚು; ಮಾರುತಿ: ಭೀಮ; ಮೊಳಗು: ಧ್ವನಿ, ಸದ್ದು; ಪೌಂಡ್ರಕ: ರೂಪಾಭಿಮಾನಿ ದೈತ್ಯ ಪೌಂಡ್ರಕವಾಸುದೇವ; ಭೂಪ: ರಾಜ; ಅನಂತ: ಕೊನೆಯಿಲ್ಲದ; ವಿಜಯ: ಗೆಲುವು; ಇಳೆ: ಭೂಮಿ; ಹಿಳಿ: ಹಿಂಡು; ಮಣಿ: ಬೆಲೆಬಾಳುವ ರತ್ನ; ಪುಷ್ಪ: ಹೂವು; ನಿರ್ಮಲ: ಶುದ್ಧತೆ, ಸ್ವಚ್ಛತೆ; ಘೋಷ: ಗಟ್ಟಿಯಾದ ಶಬ್ದ, ಕೂಗು; ಕೋಲಾಹಲ: ಗೊಂದಲ; ಸಮರ: ಯುದ್ಧ; ಅನುವು: ರೀತಿ, ಆಸ್ಪದ;

ಪದವಿಂಗಡಣೆ:
ಹಳಚಲ್+ಅನುವಾಯ್ತ್+ಉಭಯ+ಸೇನಾ
ಜಲಧಿ +ಕಳಕಳ +ಮಿಗಲು +ಮಾರುತಿ
ಮೊಳಗಿದನು +ಪೌಂಡ್ರಕವ +ಭೂಪನ್+ಅನಂತವಿಜಯವನು
ಇಳೆ +ಹಿಳಿಯೆ +ಮಣಿಪುಷ್ಪಕದ +ನಿ
ರ್ಮಲ +ಸುಘೋಷದೊಳ್+ಅಮಮ +ಕೋಳಾ
ಹಳಿಸಿದುದು +ಸಹದೇವ+ ನಕುಲರು +ಸಮರಕ್+ಅನುವಾಯ್ತು

ಅಚ್ಚರಿ:
(೧) ಪೌಂಡ್ರಕ, ಅನಂತವಿಜಯ, ಮಣಿಪುಷ್ಪಕ, ಸುಘೋಷ – ಶಂಖಗಳ ಹೆಸರು

ಪದ್ಯ ೫೯: ಕೃಷ್ಣನು ಯಾವ ರಾಕ್ಷಸರನ್ನು ಸಂಹರಿಸಿದನು?

ಮುರನ ನರಕನ ಹಂಸಡಿಬಿಕರ
ವರಸೃಗಾಲದ ದಂತವಕ್ತ್ರನ
ದುರುಳ ಪೌಂಡ್ರಕ ಪಂಚಜನ ಕುಂಭನ ನಿಕುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ (ಸಭಾ ಪರ್ವ, ೧೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ ಮೊದಲಾದ ದುಷ್ಟ ದೈತ್ಯರನ್ನು ಯುದ್ಧದಲ್ಲಿ ಸಂಹರಿಸಿದನು. ಅವರಿಗೆ ನೀನು ಯಾವ ರೀತಿಯಲ್ಲೂ ಸಮನಲ್ಲ. ಇವನನ್ನು ಹಿಂದೆ ಕೆಣಕಿದವರು ನಿನಗಿಂತ ಬಲಶಾಲಿಗಳೆಂದು ಭೀಷ್ಮರು ಹೇಳಿದರು.

ಅರ್ಥ:
ದುರುಳ: ದುಷ್ಟ; ಅರಿ: ವೈರಿ; ಒರಸು: ಸಾರಿಸು, ನಾಶಮಾಡು, ಅಳಿಸು; ಪಾಡು: ಸ್ಥಿತಿ, ಅವಸ್ಥೆ; ದೈತ್ಯ: ರಾಕ್ಷಸ; ಕೆಣಕು: ರೇಗಿಸು;

ಪದವಿಂಗಡಣೆ:
ಮುರನ+ ನರಕನ+ ಹಂಸ+ಡಿಬಿಕರ
ವರಸೃಗಾಲದ +ದಂತವಕ್ತ್ರನ
ದುರುಳ +ಪೌಂಡ್ರಕ +ಪಂಚಜನ +ಕುಂಭನ +ನಿಕುಂಭಕನ
ಅರಿ +ಹಯಗ್ರೀವಕನ +ಸಾಲ್ವನನ್
ಒರಸಿದನಲಾ +ನಿನ್ನ +ಪಾಡಿನ
ದುರುಳರೇ +ದೈತ್ಯೇಂದ್ರರ್+ಈತನ +ಕೆಣಕಿದವರೆಂದ

ಅಚ್ಚರಿ:
(೧) ರಾಕ್ಷಸರ ಹೆಸರು – ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ

ಪದ್ಯ ೪೯: ಯಾರ ಮಕ್ಕಳು ಕೃಷ್ಣನಿಂದ ಪಟ್ಟಾಭಿಷಿಕ್ತರಾದರು?

ಮಗಧಸುತನೀ ಸಾಲ್ವ ಹಂಸನ
ಮಗ ನಿಶುಂಭನ ಸೂನು ನರಕನ
ಮಗನು ಪೌಂಡ್ರಕ ದಂತವಕ್ತ್ರನ ತನುಜರಿವರೆಲ್ಲ
ಹಗೆಯ ಮಾಡಿ ಮುರಾಂತಕನ ಕಾ
ಳಗದೊಳೆಲ್ಲರನಿಕ್ಕಿ ಪಟ್ಟವ
ಬಿರಿಸಿಕೊಂಡವರಲ್ಲವೇ ಹೇಳೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೪೯ ಪದ್ಯ)

ತಾತ್ಪರ್ಯ:
ಜರಾಸಂಧನ ಮಗ, ಸಾಲ್ವ, ಹಂಸ, ನಿಶುಂಭ, ನರಕ, ಪೌಂಡ್ರಕ, ದಂತವಕ್ತ್ರ ಇವರ ಮಕ್ಕಳೂ ಯುದ್ಧದಲ್ಲಿ ಕೃಷ್ಣನಿಂದ ತಮ್ಮ ತಂದೆಯರನ್ನು ಕಳೆದುಕೊಂಡ ನಂತರ ಕೃಷ್ಣನಿಂದಲೇ ಪಟ್ಟಕ್ಕೆ ಬಂದವರಲ್ಲವೇ ಎಂದು ಭೀಷ್ಮರು ಕೇಳಿದರು.

ಅರ್ಥ:
ಸುತ: ಮಗ; ಮಗಧಸುತ: ಜರಾಸಂಧ; ಹಗೆ: ವೈರತ್ವ; ಮುರಾಂತಕ: ಕೃಷ್ಣ; ಕಾಳಗ: ಯುದ್ಧ;ಇಕ್ಕು: ಸಾಯಿಸು; ಪಟ್ಟ: ಪದವಿ; ಬಿರಿಸು: ಕಟ್ಟು; ಹೇಳು: ತಿಳಿಸು;

ಪದವಿಂಗಡಣೆ:
ಮಗಧಸುತನ್+ಈ+ ಸಾಲ್ವ +ಹಂಸನ
ಮಗ +ನಿಶುಂಭನ+ ಸೂನು +ನರಕನ
ಮಗನು +ಪೌಂಡ್ರಕ +ದಂತವಕ್ತ್ರನ+ ತನುಜರ್+ಇವರೆಲ್ಲ
ಹಗೆಯ +ಮಾಡಿ +ಮುರಾಂತಕನ+ ಕಾ
ಳಗದೊಳ್+ಎಲ್ಲರನ್+ಇಕ್ಕಿ +ಪಟ್ಟವ
ಬಿರಿಸಿಕೊಂಡವರ್+ಅಲ್ಲವೇ +ಹೇಳೆಂದನಾ +ಭೀಷ್ಮ

ಅಚ್ಚರಿ:
(೧) ಮಗ, ಸೂನು, ತನುಜ – ಸಮನಾರ್ಥಕ ಪದ
(೨) ಮಗ – ೧-೩ ಸಾಲಿನ ಮೊದಲ ಪದ

ಪದ್ಯ ೩೮: ಮತ್ತಾವರನ್ನು ಕೃಷ್ಣನು ಸಂಹರಿಸಿದನು?

ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ (ಉದ್ಯೋಗ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಷ್ಟು ಸಾಲದೇನೋ ಎಂಬಂತೆ, ಕಾಲಯವನ, ದಂತವಕ್ತ್ರ, ಮುರ, ನರಕ, ಕುಂಭ, ಸಾಲ್ವ, ಪೌಂಡ್ರಕ, ಡಿಬಿಕ, ಹಂಸರೆಲ್ಲರನ್ನು ಅವರ ಸೈನ್ಯಗಳನ್ನು ಸಂಹಾರ ಮಾಡಿದೆ. ನಂತರ ಬಾಣಾಸುರನ ಸಾವಿರ ತೋಳುಗಳನ್ನು ಕತ್ತರಿಸಿದೆ. ಅದಕ್ಕೆ ಮೊದಲು ಶಿವನೊಡನೆ ಯುದ್ಧ ಮಾಡಬೇಕಾಯಿತು ಎಂದು ಕೃಷ್ಣನು ಹೇಳಿದನು.

ಅರ್ಥ:
ಕಾಳಗ: ಯುದ್ಧ; ಒರಸು:ಸಾರಿಸು, ನಾಶಮಾಡು, ಅಳಿಸು; ತರಿ: ಕಡಿ, ಕತ್ತರಿಸು; ಧಾಳಧೂಳಿ: ವಿಪ್ಲವ, ಚೆಲ್ಲಾಪಿಲ್ಲಿಯಾಗುವಿಕೆ; ಆಹವ: ಯುದ್ಧ; ಇಂದು: ಚಂದ್ರ; ಮೌಳಿ: ತಲೆ; ಮುಳಿಸು: ಕೋಪ;

ಪದವಿಂಗಡಣೆ:
ಕಾಲಯವನನ+ ದಂತವಕ್ತ್ರನ
ಸೀಳಿದೆವು +ಮುರ +ನರಕ +ಕುಂಭನ
ಸಾಲುವನ +ಪೌಂಡ್ರಕನ +ಡಿಬಿಕನ +ಹಂಸ +ಮೋಹರವ
ಕಾಳಗದೊಳ್+ಇಟ್ಟ್+ಒರಸಿ+ ಬಾಣನ
ತೋಳ +ತರಿವಂದಾಯ್ತು+ ಧಾಳಾ
ಧಾಳಿಯ + ಆಹವವ್+ಇಂದುಮೌಳಿಯೊಳ್+ಎಮಗೆ +ಮುಳಿಸಿನಲಿ

ಅಚ್ಚರಿ:
(೧) ಶಿವನನ್ನು ಇಂದುಮೌಳಿ ಎಂದು ಕರೆದಿರುವುದು
(೨) ೧೦ ದಾನವರ ಹೆಸರನ್ನು ೩ ಸಾಲುಗಳಲ್ಲಿ ಹೇಳಿರುವುದು