ಪದ್ಯ ೯೨: ಕೀಚಕನ ಅಂತ್ಯವು ಹೇಗಾಯಿತು?

ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬರಿದು ವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ (ವಿರಾಟ ಪರ್ವ, ೩ ಸಂಧಿ, ೯೨ ಪದ್ಯ)

ತಾತ್ಪರ್ಯ:
ಭೀಮನು ಹಿಮ್ಮೆಟ್ಟಿ, ಕೀಚಕನ ವಿಶಾಲವಾದ ಎದೆಯನ್ನು ಮತ್ತೆ ತಿವಿಯಲು ಎದೆಯು ಸೀಳಿತು, ಕೀಚಕನು ಕರುಳನ್ನು ಹೊಟ್ಟೆಯಿಂದ ತೆಗೆದನು, ಕಣ್ಣುಗುಡ್ಡೆ ನೆಟ್ಟುಕೊಂಡಿತು, ದೇಹವು ಆಚೆ ಈಚೆ ಅಲುಗಾಡಿ ಒಮ್ಮೆಲೆ ಜೋರಾಗಿ ಕೆಳಕ್ಕೆ ಬಿದ್ದು ಪಕ್ಕಕ್ಕೆ ತಿರುಗಿತು. ಕೀಚಕನ ಪ್ರಾಣವು ಆತನ ದೇಹದಿಂದ ಹಾರಿಹೋಯಿತು.

ಅರ್ಥ:
ತಿರುಗಿ: ಸುತ್ತು, ದಿಕ್ಕನ್ನು ಬದಲಾಯಿಸು; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪವನಜ: ಭೀಮ, ವಾಯುಪುತ್ರ; ಮರಳಿ: ಪುನಃ; ತಿವಿ: ಚುಚ್ಚು; ಪೇರುರ: ವಿಶಾಲವಾದ ಎದೆ; ಎದೆ: ಹೃದಯ; ಜರ್ಝರಿತ: ಭಗ್ನ, ಚೂರು; ಕಾರು: ಅಗೆದದ್ದು, ಕೊಲ್ಲಿ; ಕರುಳು: ಪಚನಾಂಗದ ಭಾಗ; ಬಿರಿ: ಸೀಳು; ಆಲಿ: ಕಣ್ಣು ಗುಡ್ಡೆ; ಒಲೆ: ತೂಗಾಡು; ಕಣ್ಣು: ನಯನ; ಉರುಗು: ಬಾಗು; ಧೊಪ್ಪನೆ: ಜೋರಾಗಿ, ಒಮ್ಮೆಲೆ; ಕೆಡೆ: ಬೀಳು; ನಿಮಿಷ: ಕ್ಷಣಮಾತ್ರ; ಹೊರಳು: ಉರುಳು, ತಿರುಗು; ಹರಣ: ಜೀವ, ಪ್ರಾಣ; ಕಳುಹು: ತೆರಳು; ಕಳೆ: ತೊರೆ; ಕಾಯ: ದೇಹ;

ಪದವಿಂಗಡಣೆ:
ತಿರುಗಿ +ಪೈಸರವೋಗಿ +ಪವನಜ
ಮರಳಿ+ ತಿವಿದನು +ಕೀಚಕನ+ ಪೇ
ರುರವನ್+ಎದೆ +ಜರ್ಝರಿತವಾಗಲು +ಕಾರಿದನು +ಕರುಳ
ಬರಿದುವ್ + ಆಲಿಗಳ್+ಒಲೆದೊಲೆದು +ಕಣ್ಣ್
ಉರುಗಿ+ ಧೊಪ್ಪನೆ +ಕೆಡೆದು +ನಿಮಿಷಕೆ
ಹೊರಳಿ +ಹರಣವ+ ಕಳುಹಿ +ಕಳೆದುದು +ಕಾಯ +ಕೀಚಕನ

ಅಚ್ಚರಿ:
(೧) ಕ ಕಾರದ ಸಾಲು ಪದ – ಕಳುಹಿ ಕಳೆದುದು ಕಾಯ ಕೀಚಕನ