ಪದ್ಯ ೬೧: ಶಲ್ಯನು ಧರ್ಮಜನನ್ನು ಹೇಗೆ ಮೂದಲಿಸಿದನು?

ರಥಕೆ ಬಂದು ಪಸಾಯವನು ಸಾ
ರಥಿಗೆ ಕೊಟ್ಟನು ಚಾಪಶರವನು
ರಥದೊಳಗೆ ತುಂಬಿದನು ನಂಬಿಸಿದನು ಸುಯೋಧನನ
ಪೃಥೆಯ ಮಕ್ಕಳ ರಣಪರಾಕ್ರಮ
ವ್ಯಥೆ ಕಣಾ ಕರ್ಣಾದಿ ಸುಭಟ
ವ್ಯಥೆಯ ನಿಲಿಸುವೆನೆನುತ ಮೂದಲಿಸಿದನು ಧರ್ಮಜನ (ಶಲ್ಯ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ಶಲ್ಯನು ರಥವನ್ನೇರಿ ಸಾರಥಿಗೆ ಉಡುಗೊರೆಯನ್ನು ಕೊಟ್ಟು ಬಿಲ್ಲು ಬಾಣಗಳನ್ನು ರಥದಲ್ಲಿ ತುಂಬಿಸಿ, ಸುಯೋಧನನಿಗೆ ನಂಬುಗೆ ಕೊಟ್ಟು, ಕುಂತಿಯ ಮಕ್ಕಳದು ವೃಥಾ ಪರಾಕ್ರಮ, ಕರ್ಣಾದಿ ವೀರರ ಮರಣದ ವ್ಯಥೆಯನ್ನು ನಿಲ್ಲಿಸುತ್ತೇನೆ ಎಂದು ಧರ್ಮಜನನ್ನು ಮೂದಲಿಸಿದನು.

ಅರ್ಥ:
ರಥ: ಬಂಡಿ; ಪಸಾಯ: ಉಡುಗೊರೆ, ಬಹುಮಾನ; ಸಾರಥಿ: ಸೂತ; ಕೊಡು: ನೀಡು; ಚಾಪ: ಬಿಲ್ಲು; ಶರ: ಬಾಣ; ರಥ: ಬಂಡಿ; ತುಂಬು: ಭರ್ತಿಮಾಡು; ನಂಬು: ವಿಶ್ವಾಸವಿಡು; ಪೃಥೆ: ಕುಂತಿ; ಮಕ್ಕಳು: ಪುತ್ರರು; ರಣ: ಯುದ್ಧ; ಪರಾಕ್ರಮ: ಶೂರ; ವ್ಯಥೆ: ದುಃಖ; ಆದಿ: ಮುಂತಾದ; ಸುಭಟ: ಪರಾಕ್ರಮಿ; ನಿಲಿಸು: ತಡೆ; ಮೂದಲಿಸು: ಹಂಗಿಸು;

ಪದವಿಂಗಡಣೆ:
ರಥಕೆ +ಬಂದು +ಪಸಾಯವನು +ಸಾ
ರಥಿಗೆ +ಕೊಟ್ಟನು +ಚಾಪ+ಶರವನು
ರಥದೊಳಗೆ +ತುಂಬಿದನು +ನಂಬಿಸಿದನು +ಸುಯೋಧನನ
ಪೃಥೆಯ +ಮಕ್ಕಳ +ರಣ+ಪರಾಕ್ರಮ
ವ್ಯಥೆ +ಕಣಾ +ಕರ್ಣಾದಿ +ಸುಭಟ
ವ್ಯಥೆಯ +ನಿಲಿಸುವೆನೆನುತ +ಮೂದಲಿಸಿದನು +ಧರ್ಮಜನ

ಅಚ್ಚರಿ:
(೧) ಪಾಂಡವರನ್ನು ಮೂದಲಿಸುವ ಪರಿ – ಪೃಥೆಯ ಮಕ್ಕಳ ರಣಪರಾಕ್ರಮ ವ್ಯಥೆ ಕಣಾ

ಪದ್ಯ ೨೩: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹೊಕ್ಕನು?

ರಥವ ಸಂವರಿಸಿದನು ನಿಜ ಸಾ
ರಥಿಯ ಬೋಳೈಸಿದನು ಬಳಿಕತಿ
ರಥ ಮಹಾರಥ ರಾಜಿಗಿತ್ತನು ರಣಕೆ ವೀಳೆಯವ
ಪೃಥೆಯ ಮಕ್ಕಳ ಕರೆ ಮಹೀಸಂ
ಪ್ರಥಿತಬಲರನು ಕರೆಯೆನುತ ನಿ
ರ್ಮಥಿತರಿಪು ಪರಬಲವ ಹೊಕ್ಕನು ಬಿಟ್ಟ ಸೂಟಿಯಲಿ (ದ್ರೋಣ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೋಣನು ರಥವನ್ನು ಸರಿಯಾಗಿ ಸಿದ್ಧಗೊಳಿಸಿದನು. ಸಾರಥಿಯನ್ನು ಮನ್ನಿಸಿದನು. ಅತಿರಥ, ಮಹಾರಥರಿಗೆ ರಣವೀಳೆಯವನ್ನು ಕೊಟ್ಟನು. ಕುಂತಿಯ ಮಕ್ಕಳನ್ನು ಕರೆಯಿರಿ, ಭೂಮಿಯಲ್ಲಿ ಪ್ರಖ್ಯಾತಿ ಪಡೆದ ಬಲಶಾಲಿಗಳನ್ನು ನನ್ನೊಡನೆ ಯುದ್ಧಕ್ಕೆ ಕರೆಯಿರಿ ಎಂದು ಶತ್ರು ವಿನಾಶಕನಾದ ದ್ರೋನನು ಪಾಂಡವರ ಸೈನ್ಯವನ್ನು ಹೊಕ್ಕನು.

ಅರ್ಥ:
ರಥ: ಬಂಡಿ; ಸಂವರಿಸು: ಸಂಗ್ರಹಿಸು; ಸಾರಥಿ: ಸೂತ; ಬೋಳೈಸು: ಸಂತೈಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಮಹಾರಥ: ಮಹಾ ಪರಾಕ್ರಮಿ; ರಾಜಿ: ಹೊಂದಾಣಿಕೆ; ವೀಳೆ: ತಾಂಬೂಲ; ಪೃಥೆ: ಕುಂತಿ; ಮಕ್ಕಳು: ಸುತರು; ಕರೆ: ಬರೆಮಾಡು; ಮಹೀ: ಭೂಮಿ; ಸಂಪ್ರಥಿತ: ಅತಿ ಪ್ರಸಿದ್ಧವಾದ; ಬಲರು: ಪರಾಕ್ರಮಿಗಳು; ಕರೆ: ಬರೆಮಾಡು; ರಿಪು: ವೈರಿ; ಪರಬಲ: ಶತ್ರು ಸೈನ್ಯ; ಹೊಕ್ಕು: ಸೇರು; ಸೂಟಿ: ವೇಗ;

ಪದವಿಂಗಡಣೆ:
ರಥವ +ಸಂವರಿಸಿದನು +ನಿಜ+ ಸಾ
ರಥಿಯ +ಬೋಳೈಸಿದನು +ಬಳಿಕ್+ಅತಿ
ರಥ +ಮಹಾರಥ +ರಾಜಿಗಿತ್ತನು +ರಣಕೆ +ವೀಳೆಯವ
ಪೃಥೆಯ +ಮಕ್ಕಳ +ಕರೆ +ಮಹೀ+ಸಂ
ಪ್ರಥಿತ+ಬಲರನು +ಕರೆ+ಎನುತ +ನಿ
ರ್ಮಥಿತ+ ರಿಪು +ಪರಬಲವ +ಹೊಕ್ಕನು +ಬಿಟ್ಟ +ಸೂಟಿಯಲಿ

ಅಚ್ಚರಿ:
(೧) ಅತಿರಥ, ಮಹಾರಥ; ಸಂಪ್ರಥಿತ, ನಿರ್ಮಥಿತ – ಪ್ರಾಸ ಪದಗಳು
(೨) ದ್ರೋಣನನ್ನು ಕರೆದ ಪರಿ – ನಿರ್ಮಥಿತ ರಿಪು

ಪದ್ಯ ೨೨: ಮಾತಲಿಯು ಅರ್ಜುನನನ್ನು ಹೇಗೆ ಹೊಗಳಿದನು?

ರಥಮಹೇಂದ್ರನದೀತನೆಮ್ಮತಿ
ರಥನಲಾ ನೆರೆನೋಂತು ಪಡೆದಳೊ
ಪೃಥೆಯೆನುತ ಕವಿದುದು ಮುನಿವ್ರಜ ಮಿಕ್ಕವರ ನಗುತ
ಮಥಿತರಿಪುವವಧಾನ ಲೋಕ
ಪ್ರಥಿತ ನಿರುಪಮವೆಂಬ ಸುರಸಾ
ರಥಿಯ ನೆಲನುಗ್ಗಡಣೆಯಲಿ ನಗುತಿಳಿದನಾರಥವ (ಅರಣ್ಯ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಪಾಂಡವರ ಪರಿವಾರದಲ್ಲಿದ್ದ ಮುನಿಗಳು, ಇದು ಇಂದ್ರನ ರಥ, ಇದರಲ್ಲಿರುವವನು ಕುಂತಿಯು ವ್ರತಗಳನ್ನು ಮಾಡಿ ಪಡೆದ ಮಗನಾದ ಅರ್ಜುನನೆಂದು ರಥವನ್ನು ಬಳಲಿಸಿದರು. ಆಗ ಮಾತಲಿಯು ಶತುನಾಶಕನೇ, ಲೋಕದಲ್ಲಿ ಹೋಲಿಕೆಯೇ ಇಲ್ಲದಂತಹ ಪ್ರಖ್ಯಾತನೇ ಅವಧಾರು ಎಂದು ಹೊಗಳುತ್ತಿರಲು ಅರ್ಜುನನು ನಗುತ್ತಾ ರಥವನ್ನಿಳಿದನು.

ಅರ್ಥ:
ರಥ: ಬಂಡಿ; ಮಹೇಂದ್ರ: ಇಂದ್ರ; ನೆರೆ: ಕೂಡು; ಪಡೆ: ಹೊಂದು; ಪೃಥೆ: ಕುಂತಿ; ಅತಿರಥ: ಶೂರ; ಕವಿ: ಆವರಿಸು; ಮುನಿ: ಋಷಿ; ವ್ರಜ: ಗುಂಪು; ಮಿಕ್ಕವರು: ಉಳಿದ; ನಗು: ಸಂತಸ; ಮಥಿತ: ಸೋಲಿಸು; ರಿಪು: ವೈರಿ; ಅವಧಾರು: ಕೇಳು; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ನಿರುಪಮ: ಸಾಟಿಯಿಲ್ಲದ, ಅತಿಶಯವಾದ; ಸುರ: ದೇವತೆ; ಸಾರಥಿ: ರಥವನ್ನು ಓಡಿಸುವವ; ನೆಲ: ಭೂಮಿ; ಉಗ್ಗಡ: ಅತಿಶಯ; ನಗುತ: ಸಂತಸ; ಇಳಿ: ಕೆಳೆಗೆ ಬಂದು;

ಪದವಿಂಗಡಣೆ:
ರಥ+ಮಹೇಂದ್ರನದ್+ಈತನ್+ಎಮ್ಮ್+ಅತಿ
ರಥನಲಾ+ ನೆರೆನೋಂತು +ಪಡೆದಳೊ
ಪೃಥೆ+ಎನುತ +ಕವಿದುದು +ಮುನಿವ್ರಜ+ ಮಿಕ್ಕವರ+ ನಗುತ
ಮಥಿತ+ರಿಪುವ್+ಅವಧಾನ +ಲೋಕ
ಪ್ರಥಿತ +ನಿರುಪಮವೆಂಬ +ಸುರ+ಸಾ
ರಥಿಯ +ನೆಲನ್+ಉಗ್ಗಡಣೆಯಲಿ +ನಗುತ್+ಇಳಿದನ್+ಆ+ರಥವ

ಅಚ್ಚರಿ:
(೧) ಮಾತಲಿಯನ್ನು ಸುರಸಾರಥಿ ಎಂದು ಕರೆದಿರುವುದು
(೨) ರಥ, ಅತಿರಥ; ಮಥಿತ, ಪ್ರಥಿತ – ಪ್ರಾಸ ಪದಗಳು

ಪದ್ಯ ೪೭: ಕರ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ರಥದ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ (ಕರ್ಣ ಪರ್ವ, ೨೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕರ್ಣನು ರಥವನ್ನೆತ್ತಿ ಸಿದ್ಧಪಡಿಸಿಕೊಂಡನು. ಅತಿರಥ ಭಯಂಕರನಾದ ಕರ್ಣನು ಕೈಕಾಲುಗಳನ್ನು ತೊಳೆದುಕೊಂಡು, “ಭೂಮಿಯು ನನಗೆ ಮಾಡಿದ ಅಪಕಾರವು ಲೋಕಪ್ರಸಿದ್ಧವಾಯಿತು, ಒಳ್ಳೆಯದು, ಕುಂತಿಯ ಮಕ್ಕಳೇ ಬದುಕಲಿ, ಎನ್ನುತ್ತಾ ನಕ್ಕು ವೀಳೆಯನ್ನು ಹಾಕಿಕೊಂಡನು.

ಅರ್ಥ:
ರಥ: ಬಂಡಿ; ಸಂತೈಸು: ಕಾಪಾಡು, ನಿವಾರಿಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭೀಕರ, ಉಗ್ರ; ಏರು: ಮೇಲೇಳು; ನಿಜ: ತನ್ನ ಸ್ವಂತ, ದಿಟ; ಹರುಷ: ಸಂತೋಷ; ತೊಳೆ: ಸ್ವಚ್ಛಗೊಳಿಸು; ಚರಣ: ಪಾದ; ಕರತಳ: ಅಂಗೈ; ಪೃಥಿವಿ: ಭೂಮಿ; ಅಪಕಾರ: ಕೆಡಕು ಮಾಡುವವ, ದ್ರೋಹ; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ಸಾಕು: ಇನ್ನು ಬೇಡ, ಪೋಷಿಸು; ಬದುಕು: ಜೀವಿಸು; ಮಕ್ಕಳು: ತನುಜರು; ಕೊಂಡು: ಹಿಡಿದು; ನಗುತ: ಸಂತಸ; ವೀಳೆ: ತಾಂಬೂಲ;

ಪದವಿಂಗಡಣೆ:
ರಥದ +ಸಂತೈಸಿದನು +ಬಳಿಕ್+ಅತಿ
ರಥ +ಭಯಂಕರನ್+ಏರಿದನು +ನಿಜ
ರಥವನ್+ಅತಿ+ಹರುಷದಲಿ +ತೊಳೆದನು +ಚರಣ +ಕರತಳವ
ಪೃಥಿವಿ +ನೆನದ್+ಅಪಕಾರ +ಲೋಕ
ಪ್ರಥಿತವಾಯಿತು +ಸಾಕು +ಬದುಕಲಿ
ಪೃಥೆಯ +ಮಕ್ಕಳೆನುತ್ತ+ ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ೧-೩ ಸಾಲಿನ ಮೊದಲ ಪದ “ರಥ”, ೪-೬ ಸಾಲು “ಪೃಥಿ, ಪೃಥ”
(೨) ಕರ್ಣನ ನೋವಿನ ನುಡಿ – ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ