ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿಸಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವ್ಯಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ (ದ್ರೋಣ ಪರ್ವ, ೨ ಸಂಧಿ, ೩೧ ಪದ್ಯ)
ತಾತ್ಪರ್ಯ:
ದ್ರೋಣನು ರಥವನ್ನು ಅತಿ ವೇಗದಿಂದ ಬಿಟ್ಟು ಅಜೇಯರೆನ್ನಿಸಿಕೊಂಡಿದ್ದ ಮಹಾರಥರನ್ನು ಅಟ್ಟಿಸಿಕೊಂಡು ಹೋದನು. ಭುಜಸಾಹಸವಿಲ್ಲದ ಭಟರು ದ್ರೋಣನ ರಭಸಕ್ಕೆ ನಿಲ್ಲಲು ಸಾಧ್ಯವೇ? ಭೂಮಿ ತಗ್ಗಿತು, ಭೂಮಿಯನ್ನು ಹೊತ್ತಿದ ಆಮೆಯ ನೋವನ್ನು ಯಾರು ಕೇಳಬೇಕು! ಮಹಾರಥರ ನಡುವೆ ದ್ರೋಣನು ಮಳೆಯ ನಡುವೆ ಉರಿಹೊಕ್ಕಹಾಗೆ ನುಗ್ಗಿದನು.
ಅರ್ಥ:
ರಥ: ಬಂಡಿ; ಬಿಟ್ಟು: ಬಿಡು; ಸೂಠಿ: ವೇಗ; ಮಥಿತ: ಕಡೆಯಲ್ಪಟ್ಟ; ರಿಪು: ವೈರಿ; ಅಟ್ಟು: ಬೆನ್ನಟ್ಟುವಿಕೆ; ಭುಜ: ಬಾಹು; ಶಿಥಿಲ: ನಿಶ್ಶಕ್ತವಾದುದು; ಸಾಹಸ: ಪರಾಕ್ರಮ; ನಿಲುವು: ಸ್ಥಿತಿ, ಅವಸ್ಥೆ; ಉರವಣೆ: ಆತುರ, ಅವಸರ; ಪೃಥಿವಿ: ಭೂಮಿ; ನೆಗ್ಗು: ಕುಗ್ಗು, ಕುಸಿ; ಹೊತ್ತು: ಹೊರು, ಧರಿಸು; ಕಮಠ: ಕೂರ್ಮ; ವ್ಯಥೆ: ನೋವು; ಉಸುರು: ಹೇಳು; ಮಹಾರಥ: ಪರಾಕ್ರಮಿ, ಶೂರ; ಹೊದರು: ಗುಂಪು; ಹೊಕ್ಕು: ಸೇರು; ಬಲು: ಹೆಚು; ಮಳೆ: ವರ್ಷ;
ಪದವಿಂಗಡಣೆ:
ರಥವ+ ಬಿಟ್ಟನು +ಸೂಠಿಯಲಿ+ ನಿ
ರ್ಮಥಿತ +ರಿಪುಗಳನ್+ಅಟ್ಟಿಸಿದನು +ಭುಜ
ಶಿಥಿಲ+ ಸಾಹಸರೇನ +ನಿಲುವರು+ ದ್ರೋಣನ್+ಉರವಣೆಗೆ
ಪೃಥಿವಿ +ನೆಗ್ಗಿತು +ಹೊತ್ತ +ಕಮಠನ
ವ್ಯಥೆಯನಾರ್+ಉಸುರುವರು +ಸುಮಹಾ
ರಥರ+ ಹೊದರಲಿ+ ಹೊಕ್ಕನ್+ಉರಿ +ಬಲು +ಮಳೆಯ +ಹೊಕ್ಕಂತೆ
ಅಚ್ಚರಿ:
(೧) ಉಪಮಾನದ ಪ್ರಯೋಗ – ಸುಮಹಾರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ
(೨) ಭೂಮಿಯ ಸ್ಥಿತಿ – ಪೃಥಿವಿ ನೆಗ್ಗಿತು ಹೊತ್ತ ಕಮಠನ ವ್ಯಥೆಯನಾರುಸುರುವರು