ಪದ್ಯ ೩೧: ದ್ರೋಣನು ಹೇಗೆ ನುಗ್ಗಿದನು?

ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿಸಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವ್ಯಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ (ದ್ರೋಣ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರೋಣನು ರಥವನ್ನು ಅತಿ ವೇಗದಿಂದ ಬಿಟ್ಟು ಅಜೇಯರೆನ್ನಿಸಿಕೊಂಡಿದ್ದ ಮಹಾರಥರನ್ನು ಅಟ್ಟಿಸಿಕೊಂಡು ಹೋದನು. ಭುಜಸಾಹಸವಿಲ್ಲದ ಭಟರು ದ್ರೋಣನ ರಭಸಕ್ಕೆ ನಿಲ್ಲಲು ಸಾಧ್ಯವೇ? ಭೂಮಿ ತಗ್ಗಿತು, ಭೂಮಿಯನ್ನು ಹೊತ್ತಿದ ಆಮೆಯ ನೋವನ್ನು ಯಾರು ಕೇಳಬೇಕು! ಮಹಾರಥರ ನಡುವೆ ದ್ರೋಣನು ಮಳೆಯ ನಡುವೆ ಉರಿಹೊಕ್ಕಹಾಗೆ ನುಗ್ಗಿದನು.

ಅರ್ಥ:
ರಥ: ಬಂಡಿ; ಬಿಟ್ಟು: ಬಿಡು; ಸೂಠಿ: ವೇಗ; ಮಥಿತ: ಕಡೆಯಲ್ಪಟ್ಟ; ರಿಪು: ವೈರಿ; ಅಟ್ಟು: ಬೆನ್ನಟ್ಟುವಿಕೆ; ಭುಜ: ಬಾಹು; ಶಿಥಿಲ: ನಿಶ್ಶಕ್ತವಾದುದು; ಸಾಹಸ: ಪರಾಕ್ರಮ; ನಿಲುವು: ಸ್ಥಿತಿ, ಅವಸ್ಥೆ; ಉರವಣೆ: ಆತುರ, ಅವಸರ; ಪೃಥಿವಿ: ಭೂಮಿ; ನೆಗ್ಗು: ಕುಗ್ಗು, ಕುಸಿ; ಹೊತ್ತು: ಹೊರು, ಧರಿಸು; ಕಮಠ: ಕೂರ್ಮ; ವ್ಯಥೆ: ನೋವು; ಉಸುರು: ಹೇಳು; ಮಹಾರಥ: ಪರಾಕ್ರಮಿ, ಶೂರ; ಹೊದರು: ಗುಂಪು; ಹೊಕ್ಕು: ಸೇರು; ಬಲು: ಹೆಚು; ಮಳೆ: ವರ್ಷ;

ಪದವಿಂಗಡಣೆ:
ರಥವ+ ಬಿಟ್ಟನು +ಸೂಠಿಯಲಿ+ ನಿ
ರ್ಮಥಿತ +ರಿಪುಗಳನ್+ಅಟ್ಟಿಸಿದನು +ಭುಜ
ಶಿಥಿಲ+ ಸಾಹಸರೇನ +ನಿಲುವರು+ ದ್ರೋಣನ್+ಉರವಣೆಗೆ
ಪೃಥಿವಿ +ನೆಗ್ಗಿತು +ಹೊತ್ತ +ಕಮಠನ
ವ್ಯಥೆಯನಾರ್+ಉಸುರುವರು +ಸುಮಹಾ
ರಥರ+ ಹೊದರಲಿ+ ಹೊಕ್ಕನ್+ಉರಿ +ಬಲು +ಮಳೆಯ +ಹೊಕ್ಕಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುಮಹಾರಥರ ಹೊದರಲಿ ಹೊಕ್ಕನುರಿ ಬಲು ಮಳೆಯ ಹೊಕ್ಕಂತೆ
(೨) ಭೂಮಿಯ ಸ್ಥಿತಿ – ಪೃಥಿವಿ ನೆಗ್ಗಿತು ಹೊತ್ತ ಕಮಠನ ವ್ಯಥೆಯನಾರುಸುರುವರು

ಪದ್ಯ ೪೭: ಕರ್ಣನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ರಥದ ಸಂತೈಸಿದನು ಬಳಿಕತಿ
ರಥ ಭಯಂಕರನೇರಿದನು ನಿಜ
ರಥವನತಿಹರುಷದಲಿ ತೊಳೆದನು ಚರಣ ಕರತಳವ
ಪೃಥಿವಿ ನೆನದಪಕಾರ ಲೋಕ
ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ (ಕರ್ಣ ಪರ್ವ, ೨೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕರ್ಣನು ರಥವನ್ನೆತ್ತಿ ಸಿದ್ಧಪಡಿಸಿಕೊಂಡನು. ಅತಿರಥ ಭಯಂಕರನಾದ ಕರ್ಣನು ಕೈಕಾಲುಗಳನ್ನು ತೊಳೆದುಕೊಂಡು, “ಭೂಮಿಯು ನನಗೆ ಮಾಡಿದ ಅಪಕಾರವು ಲೋಕಪ್ರಸಿದ್ಧವಾಯಿತು, ಒಳ್ಳೆಯದು, ಕುಂತಿಯ ಮಕ್ಕಳೇ ಬದುಕಲಿ, ಎನ್ನುತ್ತಾ ನಕ್ಕು ವೀಳೆಯನ್ನು ಹಾಕಿಕೊಂಡನು.

ಅರ್ಥ:
ರಥ: ಬಂಡಿ; ಸಂತೈಸು: ಕಾಪಾಡು, ನಿವಾರಿಸು; ಬಳಿಕ: ನಂತರ; ಅತಿರಥ: ಪರಾಕ್ರಮಿ; ಭಯಂಕರ: ಭೀಕರ, ಉಗ್ರ; ಏರು: ಮೇಲೇಳು; ನಿಜ: ತನ್ನ ಸ್ವಂತ, ದಿಟ; ಹರುಷ: ಸಂತೋಷ; ತೊಳೆ: ಸ್ವಚ್ಛಗೊಳಿಸು; ಚರಣ: ಪಾದ; ಕರತಳ: ಅಂಗೈ; ಪೃಥಿವಿ: ಭೂಮಿ; ಅಪಕಾರ: ಕೆಡಕು ಮಾಡುವವ, ದ್ರೋಹ; ಲೋಕ: ಜಗತ್ತು; ಪ್ರಥಿತ: ಹೆಸರುವಾಸಿಯಾದ; ಸಾಕು: ಇನ್ನು ಬೇಡ, ಪೋಷಿಸು; ಬದುಕು: ಜೀವಿಸು; ಮಕ್ಕಳು: ತನುಜರು; ಕೊಂಡು: ಹಿಡಿದು; ನಗುತ: ಸಂತಸ; ವೀಳೆ: ತಾಂಬೂಲ;

ಪದವಿಂಗಡಣೆ:
ರಥದ +ಸಂತೈಸಿದನು +ಬಳಿಕ್+ಅತಿ
ರಥ +ಭಯಂಕರನ್+ಏರಿದನು +ನಿಜ
ರಥವನ್+ಅತಿ+ಹರುಷದಲಿ +ತೊಳೆದನು +ಚರಣ +ಕರತಳವ
ಪೃಥಿವಿ +ನೆನದ್+ಅಪಕಾರ +ಲೋಕ
ಪ್ರಥಿತವಾಯಿತು +ಸಾಕು +ಬದುಕಲಿ
ಪೃಥೆಯ +ಮಕ್ಕಳೆನುತ್ತ+ ಕೊಂಡನು +ನಗುತ +ವೀಳೆಯವ

ಅಚ್ಚರಿ:
(೧) ೧-೩ ಸಾಲಿನ ಮೊದಲ ಪದ “ರಥ”, ೪-೬ ಸಾಲು “ಪೃಥಿ, ಪೃಥ”
(೨) ಕರ್ಣನ ನೋವಿನ ನುಡಿ – ಪೃಥಿವಿ ನೆನದಪಕಾರ ಲೋಕ ಪ್ರಥಿತವಾಯಿತು ಸಾಕು ಬದುಕಲಿ
ಪೃಥೆಯ ಮಕ್ಕಳೆನುತ್ತ ಕೊಂಡನು ನಗುತ ವೀಳೆಯವ