ಪದ್ಯ ೪೩: ಸರ್ಪವು ಧರ್ಮಜನಿಗೆ ಯಾವ ಪ್ರಶ್ನೆಯನ್ನು ಕೇಳಿತು?

ಏನಹನು ನಿನಗೀತ ನೀನಾ
ರೇನು ನಿನ್ನಭಿಧಾನ ವಿಪ್ರನ
ಸೂನುವೋ ಕ್ಷತ್ರಿಯನೊ ವೈಶ್ಯನೊ ಶೂದ್ರಸಂಭವನೊ
ಏನು ನಿನಗೀ ಬನಕೆ ಬರವು ನಿ
ದಾನವನು ಹೇಳೆನಲು ಕುಂತಿಯ
ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯ (ಅರಣ್ಯ ಪರ್ವ, ೧೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಧರ್ಮಜನ ಮಾತನ್ನು ಕೇಳಿ ಸರ್ಪವು, ನಿನಗೆ ಇವನು ಏನಾಗಬೇಕು? ನೀನಾರು? ನಿನ್ನ ಹೆಸರೇನು, ನೀನು ಬ್ರಾಹ್ಮಣನೋ, ಕ್ಷತ್ರಿಯನೋ, ವೈಶ್ಯನೋ, ಶೂದ್ರನೋ? ಈ ಕಾಡಿಗೇಕೆ ಬಂದೆ ಎಂದು ಕೇಳಲು, ಧರ್ಮರಾಯನು ತನ್ನ ವೃತ್ತಾಂತವನ್ನು ಸರ್ಪಕ್ಕೆ ಹೇಳಿದನು.

ಅರ್ಥ:
ಏನಹನು: ಏನಾಗಬೇಕು; ಅಭಿಧಾನ: ಹೆಸರು; ವಿಪ್ರ: ಬ್ರಾಹ್ಮಣ; ಬನ: ಕಾದು; ಬರವು: ಆಗಮನ್; ನಿದಾನ: ಮೂಲಕಾರಣ; ಹೇಳು: ತಿಳಿಸು; ಸೂನು: ಮಗ; ನುಡಿ: ಮಾತಾಡು; ಪೂರ್ವಾಪರ: ಹಿಂದಿನ ಮತ್ತು ಮುಂದಿನ; ಸಂಗತಿ: ಸಮಾಚಾರ; ಸಂಭವ: ಹುಟ್ಟು;

ಪದವಿಂಗಡಣೆ:
ಏನಹನು +ನಿನಗೀತ+ ನೀನಾರ್
ಏನು+ ನಿನ್+ಅಭಿಧಾನ +ವಿಪ್ರನ
ಸೂನುವೋ+ ಕ್ಷತ್ರಿಯನೊ +ವೈಶ್ಯನೊ +ಶೂದ್ರ+ಸಂಭವನೊ
ಏನು+ ನಿನಗೀ+ ಬನಕೆ +ಬರವು +ನಿ
ದಾನವನು +ಹೇಳೆನಲು+ ಕುಂತಿಯ
ಸೂನು +ನುಡಿದನು +ತನ್ನ +ಪೂರ್ವಾಪರದ +ಸಂಗತಿಯ

ಅಚ್ಚರಿ:
(೧) ನಾಲ್ಕು ವರ್ಣಗಳನ್ನು ಹೆಸರಿಸುವ ಪದ್ಯ

ಪದ್ಯ ೧೯: ಧರ್ಮಜನು ಯಾವ ವನಕ್ಕೆ ಹೊರಟನು?

ಕೇಳಲಷ್ಟಾವಕ್ರ ಚರಿತವ
ಹೇಳಿದನು ಲೋಮಶ ಮುನೀಂದ್ರ ನೃ
ಪಾಲಕಂಗರುಹಿದನು ಪೂರ್ವಾಪರದ ಸಂಗತಿಯ
ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು ಗಂಧಮಾದನ
ಶೈಲವನದಲಿ ವಾಸವೆಂದವನೀಶ ಹೊರವಂಟ (ಅರಣ್ಯ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಷ್ಟಾವಕ್ರನ ಚರಿತ್ರೆಯನ್ನು ಹೇಳೆಂದು ಕೇಳಲು ಲೋಮಶನು ಆ ಕಥೆಯನ್ನೆಲ್ಲವನ್ನೂ ಹೇಳಿದನು. ಪಾಂಡವರಿದ್ದ ಅಡವಿಯಲ್ಲಿ ಹಣ್ಣು ಹೂವುಗಳು ಪಕ್ಷಿ ಮೃಗಗಳು ಸವೆದು ಹೋಗಲು, ಗಂಧಮಾದನಗಿರಿಯ ವನಕ್ಕೆ ಹೋಗೋಣವೆಂದು ಧರ್ಮಜನು ಹೊರಟನು.

ಅರ್ಥ:
ಕೇಳು: ಆಲಿಸು; ಚರಿತ: ಕಥೆ; ಮುನಿ: ಋಷಿ; ನೃಪಾಲ: ರಾಜ; ಅರುಹು: ತಿಳಿಸು, ಹೇಳು; ಪೂರ್ವಾಪರ: ಹಿಂದು ಮುಂದು; ಸಂಗತಿ: ವಿಷಯ; ಭಾಳಡವಿ: ದೊಡ್ಡ ಕಾಡು; ಬಯಲು: ಬರಿದಾದ ಜಾಗ; ಖಗ: ಪಕ್ಷಿ; ಮೃಗ: ಪ್ರಾಣಿ; ಜಾಲ: ಗುಂಪು; ಸವೆ: ಉಂಟಾಗು; ಶೈಲ: ಬೆಟ್ಟ; ವಾಸ: ಜೀವಿಸು; ಅವನೀಶ: ರಾಜ; ಹೊರವಂಟ: ತೆರಳು;

ಪದವಿಂಗಡಣೆ:
ಕೇಳಲ್+ಅಷ್ಟಾವಕ್ರ +ಚರಿತವ
ಹೇಳಿದನು +ಲೋಮಶ +ಮುನೀಂದ್ರ +ನೃ
ಪಾಲಕಂಗ್+ಅರುಹಿದನು +ಪೂರ್ವಾಪರದ+ ಸಂಗತಿಯ
ಭಾಳಡವಿ+ ಬಯಲಾಯ್ತು +ಖಗ+ಮೃಗ
ಜಾಲ +ಸವೆದುದು +ಗಂಧಮಾದನ
ಶೈಲವನದಲಿ +ವಾಸವೆಂದ್+ಅವನೀಶ +ಹೊರವಂಟ

ಅಚ್ಚರಿ:
(೧) ಅಡವಿಯು ಬರಡಾಯಿತು ಎಂದು ಹೇಳಲು – ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು