ಏನಹನು ನಿನಗೀತ ನೀನಾ
ರೇನು ನಿನ್ನಭಿಧಾನ ವಿಪ್ರನ
ಸೂನುವೋ ಕ್ಷತ್ರಿಯನೊ ವೈಶ್ಯನೊ ಶೂದ್ರಸಂಭವನೊ
ಏನು ನಿನಗೀ ಬನಕೆ ಬರವು ನಿ
ದಾನವನು ಹೇಳೆನಲು ಕುಂತಿಯ
ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯ (ಅರಣ್ಯ ಪರ್ವ, ೧೪ ಸಂಧಿ, ೪೩ ಪದ್ಯ)
ತಾತ್ಪರ್ಯ:
ಧರ್ಮಜನ ಮಾತನ್ನು ಕೇಳಿ ಸರ್ಪವು, ನಿನಗೆ ಇವನು ಏನಾಗಬೇಕು? ನೀನಾರು? ನಿನ್ನ ಹೆಸರೇನು, ನೀನು ಬ್ರಾಹ್ಮಣನೋ, ಕ್ಷತ್ರಿಯನೋ, ವೈಶ್ಯನೋ, ಶೂದ್ರನೋ? ಈ ಕಾಡಿಗೇಕೆ ಬಂದೆ ಎಂದು ಕೇಳಲು, ಧರ್ಮರಾಯನು ತನ್ನ ವೃತ್ತಾಂತವನ್ನು ಸರ್ಪಕ್ಕೆ ಹೇಳಿದನು.
ಅರ್ಥ:
ಏನಹನು: ಏನಾಗಬೇಕು; ಅಭಿಧಾನ: ಹೆಸರು; ವಿಪ್ರ: ಬ್ರಾಹ್ಮಣ; ಬನ: ಕಾದು; ಬರವು: ಆಗಮನ್; ನಿದಾನ: ಮೂಲಕಾರಣ; ಹೇಳು: ತಿಳಿಸು; ಸೂನು: ಮಗ; ನುಡಿ: ಮಾತಾಡು; ಪೂರ್ವಾಪರ: ಹಿಂದಿನ ಮತ್ತು ಮುಂದಿನ; ಸಂಗತಿ: ಸಮಾಚಾರ; ಸಂಭವ: ಹುಟ್ಟು;
ಪದವಿಂಗಡಣೆ:
ಏನಹನು +ನಿನಗೀತ+ ನೀನಾರ್
ಏನು+ ನಿನ್+ಅಭಿಧಾನ +ವಿಪ್ರನ
ಸೂನುವೋ+ ಕ್ಷತ್ರಿಯನೊ +ವೈಶ್ಯನೊ +ಶೂದ್ರ+ಸಂಭವನೊ
ಏನು+ ನಿನಗೀ+ ಬನಕೆ +ಬರವು +ನಿ
ದಾನವನು +ಹೇಳೆನಲು+ ಕುಂತಿಯ
ಸೂನು +ನುಡಿದನು +ತನ್ನ +ಪೂರ್ವಾಪರದ +ಸಂಗತಿಯ
ಅಚ್ಚರಿ:
(೧) ನಾಲ್ಕು ವರ್ಣಗಳನ್ನು ಹೆಸರಿಸುವ ಪದ್ಯ