ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೭ ಪದ್ಯ)
ತಾತ್ಪರ್ಯ:
ಕೌರವ ಸೈನ್ಯವು ನಮ್ಮ ಮೇಲೆ ಬರುವುದನ್ನು ಬಿಡಲಿಲ್ಲ, ಕೊಯ್ಲಾದ ಮೇಲೆ ಹೊಲದಲ್ಲಿ ಅಲ್ಲಿ ಇಲ್ಲಿ ಬಿದ್ದ ತೆನೆಗಳಂತಿರುವ ಯೋಧರು ಒಟ್ಟಾದರು. ಅವರಿರಲಿ, ಕೌರವನು ಸತ್ತನೋ, ಗಾಯಗೊಂಡು ಬಳಲಿರುವನೋ ಎಲ್ಲಿಗೆ ಹೋದ ಎಲ್ಲಿದ್ದಾನೆ ಎಂದು ಭೀಮನು ದುರ್ಯೋಧನನನ್ನು ಹುಡುಕುತ್ತಾ ಹೋದನು.
ಅರ್ಥ:
ಬಿಡು: ತೊರೆ; ಹಕ್ಕಲು: ಬತ್ತ, ರಾಗಿ, ಜೋಳ ಮುಂತಾದುವನ್ನು ಕುಯ್ಯುವಾಗ ಭೂಮಿಗೆ ಬಿದ್ದ ತೆನೆ; ಗಡಿ: ಎಲ್ಲೆ; ಭಟ: ಸೈನ್ಯ; ಒಗ್ಗು: ಒಟ್ಟುಗೂಡು; ದೊರೆ: ರಾಜ; ಮಡಿ: ಸತ್ತ; ಬಳಲು: ಆಯಾಸ; ಮಿಗೆ: ಹೆಚ್ಚು; ಪೂರಾಯ: ಪರಿಪೂರ್ಣ; ಘಾಯ: ಪೆಟ್ಟು; ಪಡೆ: ಸೈನ್ಯ; ಜಂಜಡ: ತೊಂದರೆ, ಕ್ಲೇಶ; ನಿಲಲು: ನಿಲ್ಲು; ಒಡೆಯ: ನಾಯಕ; ನೋಡು: ವೀಕ್ಷಿಸು; ಒಡನೊಡನೆ: ಒಮ್ಮೆಲೆ; ಪವಮಾನಸುತ: ವಾಯುಪುತ್ರ (ಭೀಮ); ಅರಸು: ಹುಡುಕು;
ಪದವಿಂಗಡಣೆ:
ಬಿಡದಲಾ +ಕುರುಸೈನ್ಯ +ಹಕ್ಕಲು
ಗಡಿಯ +ಭಟರ್+ಒಗ್ಗಾಯ್ತಲಾ +ದೊರೆ
ಮಡಿದನೋ +ಬಳಲಿದನೊ+ ಮಿಗೆ +ಪೂರಾಯ+ಘಾಯದಲಿ
ಪಡೆಯ +ಜಂಜಡ +ನಿಲಲಿ +ಕೌರವರ್
ಒಡೆಯನಾವೆಡೆ +ನೋಡು +ನೋಡೆಂದ್
ಒಡನೊಡನೆ +ಪವಮಾನಸುತನ್+ಅರಸಿದನು +ಕುರುಪತಿಯ
ಅಚ್ಚರಿ:
(೧) ಉಪಮಾನದ ಪ್ರಯೋಗ – ಹಕ್ಕಲು ಗಡಿಯ ಭಟರೊಗ್ಗಾಯ್ತಲಾ