ಪದ್ಯ ೩೬: ಭೀಮ ಸುಪ್ರತೀಕ ಗಜದ ಮಧ್ಯೆ ಹೇಗೆ ಯುದ್ಧ ನಡೆಯಿತು?

ಹೊಯ್ದು ಹಿಂಗದ ಮುನ್ನ ಭೀಮನ
ಕೈದುಡುಕಿದರೆ ಮುರಿದು ಹಿಂದಕೆ
ಹಾಯ್ದಡೊಡೆಮುರಿಯಿತ್ತು ಕುಸಿದರೆ ಕಾಲೊಳೊಡೆಯವುಚಿ
ಮೈದೆಗೆದರಿಟ್ಟಣಿಸಿ ಪೂತ್ಕೃತಿ
ಗೈದು ಸುಭಟನ ಸಿಂಹನಾದಕೆ
ಮುಯ್ದೆಗೆದು ಕರಿ ಕಾದುತಿರ್ದುದು ಭೀಮಸೇನನಲಿ (ದ್ರೋಣ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭೀಮನು ಸುಪ್ರತೀಕ ಗಜವನ್ನು ಹೊಡೆದು ಹಿಂದಕ್ಕೆ ಹೋಗುವ ಮೊದಲು ಅದು ಅವನ ಕೈ ತುಡುಕಿತು. ಭೀಮನು ಹಿಮ್ದಕ್ಕೆ ಹೋದರೆ ಜೊತೆಗೇ ನುತ್ತಿತು. ಭೀಮನು ಕುಸಿದರೆ ಅದು ಕಾಲಲ್ಲಿ ಮೆಟ್ಟಿತು, ಹಿಂದಕ್ಕೆ ಸರಿದರೆ ಅಟ್ಟಿ ಬಂತು, ಭೀಮನು ಸಿಂಹನಾದ ಮಾಡಿದರೆ ಅದೂ ಪೂತ್ಕೃತಿ ಮಾಡಿತು.

ಅರ್ಥ:
ಹೊಯ್ದು: ಹೊಡೆ; ಹಿಂಗು: ಕಡಿಮೆಯಾಗು; ಮುನ್ನ: ಮೊದಲು; ಕೈ: ಹಸ್ತ; ತುಡುಕು: ಬೇಗನೆ ಹಿಡಿ, ಹೋರಾಡು, ಸೆಣಸು; ಮುರಿ: ಸೀಳು; ಹಿಂದೆ: ಹಿಂಭಾಗ; ಒಡೆ: ಸೀಳು, ಬಿರಿ; ಸೀಳು: ಮುರಿ; ಕುಸಿ: ಬೀಳು; ಕಾಲು: ಪಾದ; ಅವುಚು: ಹಿಸುಕು; ಮೈ: ತನು, ದೇಹ; ತೆಗೆ: ಈಚೆಗೆ ತರು; ಅಟ್ಟಣಿಸು: ಹಿಂಬಾಲಿಸು; ಪೂತು: ಭಲೇ, ಭೇಷ್; ಸುಭಟ: ಪರಾಕ್ರಮಿ; ಸಿಂಹ: ಕೇಸರಿ; ನಾದ: ಶಬ್ದ; ಸಿಂಹನಾದ: ಗರ್ಜನೆ; ಮುಯ್: ಭುಜ; ಕರಿ: ಆನೆ; ಕಾದು: ಹೋರಾದು;

ಪದವಿಂಗಡಣೆ:
ಹೊಯ್ದು +ಹಿಂಗದ +ಮುನ್ನ +ಭೀಮನ
ಕೈ+ತುಡುಕಿದರೆ +ಮುರಿದು +ಹಿಂದಕೆ
ಹಾಯ್ದಡ್+ಒಡೆ+ಮುರಿಯಿತ್ತು +ಕುಸಿದರೆ+ ಕಾಲೊಳ್+ಒಡೆ+ಅವುಚಿ
ಮೈ+ತೆಗೆದರ್+ಅಟ್ಟಣಿಸಿ +ಪೂತ್ಕೃತಿ
ಗೈದು +ಸುಭಟನ+ ಸಿಂಹನಾದಕೆ
ಮುಯ್ದೆಗೆದು+ ಕರಿ+ ಕಾದುತಿರ್ದುದು +ಭೀಮಸೇನನಲಿ

ಅಚ್ಚರಿ:
(೧) ಸಿಂಹನಾದ, ಪೂತ್ಕೃತಿ – ಪದಗಳ ಬಳಕೆ
(೨) ತುಡುಕು, ಕುಸಿ, ಅವುಚಿ, ಅಟ್ಟಣಿಸಿ, ಹೊಯ್ದು – ಹೋರಾಟವನ್ನು ತಿಳಿಸುವ ಪದಗಳು

ಪದ್ಯ ೬: ಬಾಣದ ಹೊಗೆಯು ಯಾವುದನ್ನು ಆವರಿಸಿತು?

ಹೊರೆಯವರು ಮರನಾದರಾ ರಥ
ತುರಗತತಿ ಲಟಕಟಿಸಿದವು ನಿ
ಬ್ಬರದ ಬೆರಗಿನೊಳದ್ದು ಹೋದನು ಶಲ್ಯ ನಿಮಿಷದಲಿ
ಉರಿ ಛಡಾಳಿಸಿ ಪೂತ್ಕೃತಿಯ ಪಂ
ಜರದೊಳಗೆ ಪಲ್ಲವಿಸಿತುಬ್ಬಿದ
ಹೊರಳಿಹೊಗೆಯಂಬರವ ತುಂಬಿತು ಭೂಪ ಕೇಳೆಂದ (ಕರ್ಣ ಪರ್ವ, ೨೪ ಸಂಧಿ, ೬ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಪ್ರಭಾವದಿಂದ ಅಕ್ಕಪಕ್ಕದವರ ಮೈಗಳು ಮರಗಟ್ಟಿದವು. ರಥದ ಕುದುರೆಗಳು ಆಯಾಸಗೊಂಡವು. ಶಲ್ಯನು ಅತಿಶಯ ವಿಸ್ಮಯದಲ್ಲಿ ಮುಳುಗಿಹೋದನು. ಉರಿ ಸುತ್ತಲೂ ಹಬ್ಬಿತು. ಹೊಗೆಯು ಆಗಸವನ್ನೇ ತುಂಬಿತು.

ಅರ್ಥ:
ಹೊರೆ: ರಕ್ಷಣೆ, ಆಶ್ರಯ, ಸಮೀಪ; ಮರನಾದರು: ಗಟ್ಟಿಯಾಗು, ಬಿರುಸಾದ; ರಥ: ಬಂಡಿ; ತುರಗ: ಕುದುರೆ; ತತಿ: ಗುಂಪು, ಸಮೂಹ; ಲಟಕಟಿಸು: ಉದ್ರೇಕಗೊಳ್ಳು; ನಿಬ್ಬರ: ಅತಿಶಯ, ಹೆಚ್ಚಳ; ಬೆರಗು: ವಿಸ್ಮಯ, ಸೋಜಿಗ; ಅದ್ದು: ತೋಯ್ದು; ನಿಮಿಷ: ಕಾಲ ಪ್ರಮಾಣ; ಉರಿ: ಬೆಂಕಿಯ ಕಿಡಿ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಪೂತ: ತೂರಿದ; ಕೃತಿ: ಕೆಲಸ; ಪಂಜರ: ಹಕ್ಕಿ, ಪ್ರಾಣಿಗಳನ್ನು ಕೂಡುವ ಸಾಧನ; ಪಲ್ಲವಿಸು: ವಿಕಸಿಸು; ಉಬ್ಬು: ಹೆಚ್ಚಾಗು, ಹಿಗ್ಗು; ಹೊರಳು: ತಿರುವು, ಬಾಗು; ಹೊಗೆ: ಧೂಮ; ಅಂಬರ: ಆಗಸ; ತುಂಬು: ಪೂರ್ತಿಗೊಳ್ಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊರೆಯವರು +ಮರನಾದರ್+ಆ+ ರಥ
ತುರಗ+ತತಿ +ಲಟಕಟಿಸಿದವು+ ನಿ
ಬ್ಬರದ +ಬೆರಗಿನೊಳ್+ಅದ್ದು +ಹೋದನು +ಶಲ್ಯ +ನಿಮಿಷದಲಿ
ಉರಿ+ ಛಡಾಳಿಸಿ +ಪೂತ್ಕೃತಿಯ+ ಪಂ
ಜರದೊಳಗೆ +ಪಲ್ಲವಿಸಿತ್+ಉಬ್ಬಿದ
ಹೊರಳಿ+ಹೊಗೆ+ಅಂಬರವ+ ತುಂಬಿತು +ಭೂಪ +ಕೇಳೆಂದ

ಅಚ್ಚರಿ:
(೧) ಪ ಕಾರದ ತ್ರಿವಳಿ ಪದ – ಪೂತ್ಕೃತಿಯ ಪಂಜರದೊಳಗೆ ಪಲ್ಲವಿಸಿತುಬ್ಬಿದ