ಎಂದು ಕೈಗೊಟ್ಟಬಲೆಯನು ಹರಿ
ತಂದನಾ ಸಂಗ್ರಾಮಭೂಮಿಗೆ
ಹಿಂದೆ ಬರಲಷ್ಟಾದಶಾಕ್ಷೋಹಿಣಿಯ ನಾರಿಯರು
ಮುಂದೆ ಹೆಣದಿನಿಹಿಗಳು ಖಗಮೃಗ
ವೃಂದ ಚೆಲ್ಲಿತು ಭೂತ ಪೂತನಿ
ವೃಂದ ಕೆದರಿತು ಹೊಕ್ಕರಿವರದ್ಭುತರಣಾಂಗಣವ (ಗದಾ ಪರ್ವ, ೧೨ ಸಂಧಿ, ೪ ಪದ್ಯ)
ತಾತ್ಪರ್ಯ:
ಹೀಗೆ ಹೇಳಿ, ಶ್ರೀಕೃಷ್ಣನು ಗಾಂಧಾರಿಯ ಕೈಹಿಡಿದುಕೊಂದು ರಣಭೂಮಿಗೆ ಬಂದನು. ಹದಿನೆಂಟು ಅಕ್ಷೋಹಿಣೀ ಸೇನೆಯ ಯೋಧರ ಪತ್ನಿಯರೂ ಹಿಂಬಾಲಿಸಿದರು. ಅವರು ಬರುತ್ತಿದ್ದಮ್ತೆ ಅವರ ಮುಂದೆ ಸೇರಿದ್ದ ಹೆಣವನ್ನು ತಿನ್ನುವ ಪ್ರಾಣಿ, ಪಕ್ಷಿ, ಭೂತ, ರಾಕ್ಷಸಿಗಳ ಗುಂಪು ಚದುರಿಹೋಯಿತು.
ಅರ್ಥ:
ಕೈಗೊಟ್ಟು: ಹಸ್ತವನ್ನು ಚಾಚು; ಅಬಲೆ: ಹೆಣ್ಣು; ಹರಿ: ಕೃಷ್ಣ; ತಂದು: ಬರೆಮಾಡು; ಸಂಗ್ರಾಮಭೂಮಿ: ರಣಭೂಮಿ; ಹಿಂದೆ: ನಡೆದುಹೋದ; ಬರಲು: ಆಗಮಿಸು; ಅಷ್ಟಾದಶ: ಹದಿನೆಂಟು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನಾರಿ: ಹೆಣ್ಣು; ಮುಂದೆ: ಎದುರು; ಹೆಣ: ಜೀವವಿಲ್ಲದ ಶರೀರ; ತಿನಿಹಿ: ತಿನ್ನುವ; ಖಗ: ಪಕ್ಷಿ; ಮೃಗ: ಪ್ರಾಣಿ; ವೃಂದ: ಗುಂಪು; ಚೆಲ್ಲು: ಹರಡು; ಭೂತ: ಪಿಶಾಚಿ; ಪೂತನಿ: ರಾಕ್ಷಸಿ; ಕೆದರು: ಹರಡು; ಹೊಕ್ಕು: ಸೇರು; ಅದ್ಭುತ: ಆಶ್ಚರ್ಯ; ರಣಾಂಗಣ: ಯುದ್ಧಭೂಮಿ;
ಪದವಿಂಗಡಣೆ:
ಎಂದು +ಕೈಗೊಟ್ಟ್+ಅಬಲೆಯನು +ಹರಿ
ತಂದನಾ+ ಸಂಗ್ರಾಮಭೂಮಿಗೆ
ಹಿಂದೆ +ಬರಲ್+ಅಷ್ಟಾದಶ+ಅಕ್ಷೋಹಿಣಿಯ+ ನಾರಿಯರು
ಮುಂದೆ+ ಹೆಣ+ತಿನಿಹಿಗಳು +ಖಗ+ಮೃಗ
ವೃಂದ +ಚೆಲ್ಲಿತು +ಭೂತ +ಪೂತನಿ
ವೃಂದ +ಕೆದರಿತು +ಹೊಕ್ಕರ್+ಇವರ್+ಅದ್ಭುತ+ರಣಾಂಗಣವ
ಅಚ್ಚರಿ:
(೧) ರಣರಂಗದ ಚಿತ್ರಣ – ಹೆಣದಿನಿಹಿಗಳು ಖಗಮೃಗ ವೃಂದ ಚೆಲ್ಲಿತು ಭೂತ ಪೂತನಿ ವೃಂದ ಕೆದರಿತು
(೨) ಚೆಲ್ಲು, ಕೆದರು – ಸಾಮ್ಯಾರ್ಥ ಪದಗಳು