ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಲ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಯನರಮನೆಗೆ (ಗದಾ ಪರ್ವ, ೪ ಸಂಧಿ, ೫೩ ಪದ್ಯ)
ತಾತ್ಪರ್ಯ:
ಭೀಮನು ಉತ್ತಮವಾದ ಬಟ್ಟೆಗಳು, ವೀರ ನೂಪುರ, ಮುತ್ತಿನ ಏಕಾವಳಿ, ಕರ್ಣಾಭರಣ, ಉಂಗುರಗಳನ್ನು ಇವರಿಗೆ ಉಡುಗೊರೆಯಾಗಿ ನೀಡಿದನು. ಕಣ್ಣುಗಳು ಹೊಳೆಯುತ್ತಿರಲು, ರೋಮಾಂಚನಗೊಂಡು ಅತಿಶಯ ಸಂತೋಷದಿಂದ ಧರ್ಮಜನ ಅರಮನೆಗೆ ಬಂದನು.
ಅರ್ಥ:
ಅಂಗ: ದೇಹದ ಭಾಗ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ; ಉತ್ತಮ: ಶ್ರೇಷ್ಠ; ಅಂಬರ: ಬಟ್ಟೆ; ವೀರ: ಶೂರ; ನೂಪುರ: ಕಾಲಿನ ಗೆಜ್ಜೆ; ಮುತ್ತು: ಮೌಕ್ತಿಕ; ಆಭರಣ: ಒಡವೆ; ಕರ್ಣ: ಕಿವಿ; ಕರ್ಣಾಭರಣ: ಓಲೆ; ಮುದ್ರಿಕೆ: ಸಂಕೇತವನ್ನು ಕೆತ್ತಿದ ಉಂಗುರ; ಹೊತ್ತು: ಪಡೆದು; ಹರುಷ: ಸಂತಸ; ಹೊಳೆ: ಪ್ರಕಾಶ; ಕಂಗಳು: ಕಣ್ಣು; ತೆತ್ತಿಸು: ಜೋಡಿಸು, ಕೂಡಿಸು; ಪುಳಕ: ರೋಮಾಂಚನ; ಸಘಾಡ: ರಭಸ; ಸುಮ್ಮಾನ: ಸಂತಸ; ಬಂದು: ಆಗಮಿಸು; ರಾಯ: ರಾಜ; ಅರಮನೆ: ರಾಜರ ಆಲಯ;
ಪದವಿಂಗಡಣೆ:
ಇತ್ತನ್+ಅವದಿರಿಗ್+ಅಂಗಚಿತ್ತವನ್
ಉತ್ತಮ+ಅಂಬರ +ವೀರ +ನೂಪುರ
ಮುತ್ತಿನ್+ಏಕಾವಳಿಯ +ಕರ್ಣಾಭರಣ+ ಮುದ್ರಿಕೆಯ
ಹೊತ್ತ +ಹರುಷದ +ಹೊಳೆವ +ಕಂಗಳ
ತೆತ್ತಿಸಿದ +ಪುಳಕದ +ಸಘಾಡಿಕೆ
ವೆತ್ತ +ಸುಮ್ಮಾನದಲಿ +ಬಂದನು +ರಾಯನ್+ಅರಮನೆಗೆ
ಅಚ್ಚರಿ:
(೧) ೧ ಸಾಲು ಒಂದೇ ಪದವಾಗಿ ರಚನೆ – ಇತ್ತನವದಿರಿಗಂಗಚಿತ್ತವನುತ್ತಮಾಂಬರ
(೨) ಹ ಕಾರದ ತ್ರಿವಳಿ ಪದ – ಹೊತ್ತ ಹರುಷದ ಹೊಳೆವ