ಪುರಹರನು ಕರೆದರ್ಜುನನ ಸುರ
ಪುರಕೆ ಹೋಗುತೆ ನೀನು ಬಳಿಕಾ
ಸುರಸಮಿತಿಗಳ ವೈರಿಗಳ ವಧಿಸೆಂದು ಬೆಸಸುತ್ತ
ಹರಿಯಜರುಸಹಿತ ಭವ ರಜತಾ
ಚಲಕೆ ಬಿಜಯಂಗೈದನಿತ್ತಲು
ನರನು ಸೈವೆರಗಾಗಿ ಚಿಂತಾಚಿತ್ರದಂತಿರ್ದ (ಅರಣ್ಯ ಪರ್ವ, ೭ ಸಂಧಿ, ೧೧೧ ಪದ್ಯ)
ತಾತ್ಪರ್ಯ:
ಶಿವನು ಅರ್ಜುನನನ್ನು ಕರೆದು, ನೀನು ಅಮರಾವತಿಗೆ ಹೋಗಿ ದೇವಗಣಗಳ ವೈರಿಗಳಾದ ಅಸುರರನ್ನು ಸಂಹರಿಸು ಎಂದು ಹೇಳಿ ಬ್ರಹ್ಮ, ವಿಷ್ಣುಗಳೊಂದಿಗೆ ಹಿಮಾಲಯಕ್ಕೆ ತೆರಳಿದನು. ಅರ್ಜುನನು ಅತಿಶಯವಾಗಿ ವಿಸ್ಮಯಗೊಂಡು ಚಿಂತೆಯ ಚಿತ್ರದಂತಿದ್ದನು.
ಅರ್ಥ:
ಪುರಹರ: ಈಶ್ವರ; ಕರೆ: ಬರೆಮಾಡು; ಸುರಪುರ: ಅಮರಾವತಿ; ಸುರ: ದೇವತೆ; ಹೋಗು: ತೆರಳು; ಬಳಿಕ: ನಂತರ; ಸಮಿತಿ: ಗುಂಪು; ವೈರಿ: ಶತ್ರು; ವಧಿಸು: ಸಂಹರಿಸು; ಬೆಸಸು: ಹೇಳು; ಹರಿ: ವಿಷ್ಣು; ಅಜ: ಬ್ರಹ್ಮ; ಸಹಿತ: ಜೊತೆ; ಭವ: ಶಿವ; ರಜತಾಚಲ: ಹಿಮಾಲಯ; ಬಿಜಯಂಗೈ: ದಯಮಾಡಿಸು; ನರ: ಅರ್ಜುನ; ಸೈವೆರಗು: ಆತಿಯಾದ ತಳಮಳ; ಚಿಂತೆ: ಯೋಚನೆ;
ಪದವಿಂಗಡಣೆ:
ಪುರಹರನು +ಕರೆದ್+ಅರ್ಜುನನ +ಸುರ
ಪುರಕೆ +ಹೋಗುತೆ +ನೀನು +ಬಳಿಕ್
ಆ+ಸುರಸಮಿತಿಗಳ +ವೈರಿಗಳ+ ವಧಿಸೆಂದು +ಬೆಸಸುತ್ತ
ಹರಿ+ಅಜರು+ಸಹಿತ+ ಭವ+ ರಜತಾ
ಚಲಕೆ +ಬಿಜಯಂಗೈದನ್+ಇತ್ತಲು
ನರನು +ಸೈವೆರಗಾಗಿ+ ಚಿಂತಾಚಿತ್ರದಂತಿರ್ದ
ಅಚ್ಚರಿ:
(೧) ಅರ್ಜುನನ ಸ್ಥಿತಿ – ನರನು ಸೈವೆರಗಾಗಿ ಚಿಂತಾಚಿತ್ರದಂತಿರ್ದ