ಪದ್ಯ ೩೮: ಕೌರವನನ್ನು ಅಮರಗಣ ಹೇಗೆ ಹೊಗಳಿತು?

ಮೇಲೆ ಕಳವಳವಾಯ್ತು ದಿಕ್ಕಿನ
ಮೂಲೆ ಬಿರಿಯೆ ಪಿಶಾಚರಾಕ್ಷಸ
ಜಾಲ ವಿದ್ಯಾಧರ ಮಹೋರಗ ಯಕ್ಷ ಕಿನ್ನರರು
ಆಳು ನೀನಹೆ ನಳ ನಹುಷ ಭೂ
ಪಾಲಕುಲದಲಭಂಗನಾದೆ ಕ
ರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ (ಗದಾ ಪರ್ವ, ೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ಮಹಾಕೋಲಾಹಲವಾಯಿತು. ಪಿಶಾಚರು, ರಾಕ್ಷಸರು, ವಿದ್ಯಾಧರರು, ಉರಗರು, ಯಕ್ಷಕಿನ್ನನರು, ವೀರನೆಂದರೆ ನೀನೇ, ನಲ ನಹುಷದ ವಂಶದಲ್ಲಿ ಹುಟ್ಟಿ ವಿಜಯಿಯಾದೆ. ಕೌರವ, ನೀನು ಕರಾಳ ಬಾಹುಬಲವನ್ನುಳ್ಳವನು ಎಂದು ಕೂಗಿದರು.

ಅರ್ಥ:
ಕಳವಳ: ಗೊಂದಲ; ದಿಕ್ಕು: ದಿಶೆ; ಮೂಲೆ: ಕೊನೆ; ಬಿರಿ: ಹೊಡೆ, ಸೀಳು; ಪಿಶಾಚ: ದೆವ್ವ; ರಾಕ್ಷಸ: ಅಸುರ; ಜಾಲ: ಬಲೆ, ಸಮೂಹ; ಉರಗ: ಹಾವು; ಆಳು: ಪರಾಕ್ರಮಿ, ಶೂರ; ಭೂಪಾಲಕ: ರಾಜ; ಕುಲ: ವಂಶ; ಭಂಗ: ಸೋಲು, ಮುರಿ; ಅಭಂಗ: ಜಯಶಾಲಿ; ಕರಾಳ: ದುಷ್ಟ; ಭುಜಬಲ: ಪರಾಕ್ರಮಿ; ಕೊಂಡಾಡು: ಹೊಗಳು; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಮೇಲೆ +ಕಳವಳವಾಯ್ತು +ದಿಕ್ಕಿನ
ಮೂಲೆ +ಬಿರಿಯೆ +ಪಿಶಾಚ+ರಾಕ್ಷಸ
ಜಾಲ +ವಿದ್ಯಾಧರ +ಮಹ+ಉರಗ +ಯಕ್ಷ+ ಕಿನ್ನರರು
ಆಳು +ನೀನಹೆ +ನಳ+ ನಹುಷ +ಭೂ
ಪಾಲ+ಕುಲದಲ್+ಅಭಂಗನಾದೆ +ಕ
ರಾಳ+ಭುಜಬಲ +ನೀನೆನುತ +ಕೊಂಡಾಡಿತ್+ಅಮರಗಣಾ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಭೂಪಾಲಕುಲದಲಭಂಗನಾದೆ ಕರಾಳಭುಜಬಲ ನೀನೆನುತ ಕೊಂಡಾಡಿತಮರಗಣಾ