ಪದ್ಯ ೬೭: ಕರ್ಣಾದಿಗಳು ಏನೆಂದು ಗರ್ಜಿಸಿದರು?

ಸಾಕು ನೀ ಚಿಂತಿಸಲು ಬೇಡ ಪಿ
ನಾಕಧರನಡಹಾಯ್ದಡೆಯು ನಾ
ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು
ನೂಕಿ ನೋಡಾ ಸೈಂಧವನನೇ
ಕೈಕವೀರರು ಕಾವೆವೆಂದು
ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ (ದ್ರೋಣ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಆಗ ಕರ್ಣಾದಿಗಳು ಜೋರಾಗಿ ಗರ್ಜಿಸುತ್ತಾ, ಸಾಕು, ನೀನು ಚಿಂತೆ ಮಾಡಬೇಡ, ಶಿವನೇ ಎದುರಾಗಿ ಬಂದರೂ ಯುದ್ಧಮಾಡಬಲ್ಲ ವೀರರು ನಾವಿದ್ದೇವೆ, ಇನ್ನು ಕೃಷ್ಣಾರ್ಜುನರ ಪಾಡೆನು, ಅವರು ನಮಗೆ ಲೆಕ್ಕವೇ? ಸೈಂಧವನನ್ನು ನಾವು ಕಾಪಾಡುತ್ತೇವೆ, ಅವನನ್ನು ರಣರಂಗಕ್ಕೆ ನೂಕಿಇರಿ, ನಾವು ರಕ್ಷಿಸುತ್ತೇವೆ, ಜಗತ್ತಿನಲ್ಲಿ ನಾವು ಏಕೈಕ ವೀರರು ಎಂದು ಕೂಗಿದರು.

ಅರ್ಥ:
ಸಾಕು: ನಿಲ್ಲಿಸು; ಚಿಂತಿಸು: ಯೋಚಿಸು; ಬೇಡ: ತಡೆ; ಪಿನಾಕ: ತ್ರಿಶೂಲ; ಪಿನಾಕಧರ: ಶಿವ; ಅಡಹಾಯ್ದು: ಅಡ್ಡಬಾ, ಇದಿರಾಗು; ಆಕೆವಾಳ: ವೀರ, ಪರಾಕ್ರಮಿ; ರಣ: ಯುದ್ಧ; ಪಾಡು: ಸ್ಥಿತಿ; ನೂಕು: ತಳ್ಳು; ಏಕೈಕ: ಒಬ್ಬನೇ; ವೀರ: ಪರಾಕ್ರಮಿ; ಕಾವು: ರಕ್ಷಿಸು; ಉದ್ರೇಕ: ಉದ್ವೇಗ, ಆವೇಗ; ಮಿಗೆ: ಹೆಚ್ಚು; ಗರ್ಜಿಸು: ಆರ್ಭಟಿಸು; ಆದಿ: ಮುಂತಾದ;

ಪದವಿಂಗಡಣೆ:
ಸಾಕು +ನೀ +ಚಿಂತಿಸಲು +ಬೇಡ +ಪಿ
ನಾಕಧರನ್+ಅಡಹಾಯ್ದಡೆಯು +ನಾವ್
ಆಕೆವಾಳರು +ರಣಕೆ +ಕೃಷ್ಣಾರ್ಜುನರ +ಪಾಡೇನು
ನೂಕಿ +ನೋಡಾ +ಸೈಂಧವನನ್
ಏಕೈಕವೀರರು +ಕಾವೆವೆಂದ್
ಉದ್ರೇಕ +ಮಿಗೆ +ಗರ್ಜಿಸಿತು +ಕರ್ಣಾದಿಗಳು +ತಮತಮಗೆ

ಅಚ್ಚರಿ:
(೧) ಕರ್ಣಾದಿಗಳು ತಮ್ಮ ಪರಾಕ್ರಮವನ್ನು ಹೊಗಳಿದ ಪರಿ – ಪಿನಾಕಧರನಡಹಾಯ್ದಡೆಯು ನಾವಾಕೆವಾಳರು; ಏಕೈಕವೀರರು ಕಾವೆವೆಂದುದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು

ಪದ್ಯ ೬: ಅರ್ಜುನನೇಕೆ ತಾಳ್ಮೆಯನ್ನು ಕಳೆದುಕೊಂಡನು?

ಲೋಕ ಶಿಕ್ಷಕರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿಂತೆ ಪಿ
ನಾಕ ಧರನಡಹಾಯ್ದರೆಯು ಬಿಡೆವೆಮ್ಮ ವಾಸಿಗಳ
ಈ ಕಳಂಬವಿದೆಮ್ಮದೆನುತವ
ನೌಕಹದ ನೆಳಲಿನಲಿ ನಿಂದು ಪಿ
ನಾಕಿ ನುಡಿದನು ಕಡಿದ ನೀತನ ಮನದ ಸೈರಣೆಯ (ಅರಣ್ಯ ಪರ್ವ, ೭ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಶಿವನು, ನಾವೇನೂ ಲೋಕಕ್ಕೆ ಬುದ್ಧಿಹೇಳುವ ಶಿಕ್ಷರರಲ್ಲವಲ್ಲ, ನಮಗೇಕೆ ನಿಮ್ಮ ತಪಸ್ಸಿನ ಚಿಂತೆ? ಆದರೊಂದನ್ನು ನೆನಪಿಡು, ಶಿವನೇ ಬಂದು ತಡೆದರೂ ನಮ್ಮ ಪದ್ದತಿಗಳನ್ನು ನಾವು ಬಿಡುವವರಲ್ಲ. ಈ ಹಂದಿಯನ್ನು ಕೊಂದ ಬಾಣ ನಮ್ಮದು, ಎಂದು ಮರದ ನೆರಳಲ್ಲಿ ನಿಂತು ಹೇಳಿದನು. ಅರ್ಜುನನ ತಾಳ್ಮೆ ಮುರಿದು ಹೋಯಿತು.

ಅರ್ಥ:
ಲೋಕ: ಜಗತ್ತು; ಶಿಕ್ಷಕ: ಆಚಾರ್ಯ; ತಪ: ತಪಸ್ಸು; ಚಿಂತೆ: ಯೋಚನೆ; ಪಿನಾಕ: ತ್ರಿಶೂಲ; ಧರ: ಧರಿಸಿದವ; ಅಡಹಾಯ್ದು: ಮಧ್ಯ ಪ್ರವೇಶ; ಬಿಡು: ತೊರೆ, ತ್ಯಜಿಸು; ವಾಸಿ: ಪ್ರತಿಜ್ಞೆ, ಶಪಥ; ಕಳಂಬ: ಬಾಣ, ಅಂಬು; ಔಕು: ಒತ್ತು, ಹಿಚುಕು; ನೆಳಲು: ನೆರಳು; ನಿಂದು: ನಿಲ್ಲು; ಪಿನಾಕಿ: ಶಿವ; ನುಡಿ: ಮಾತಾಡು; ಕಡಿದ: ನಾಶಮಾಡಿದ; ಮನ: ಮನಸ್ಸು; ಸೈರಣೆ: ತಾಳ್ಮೆ, ಸಹನೆ;

ಪದವಿಂಗಡಣೆ:
ಲೋಕ +ಶಿಕ್ಷಕರಲ್ಲಲೇ+ ನಮ
ಗೇಕೆ +ನಿಮ್ಮಯ +ತಪದ +ಚಿಂತೆ +ಪಿ
ನಾಕ +ಧರನ್+ಅಡಹಾಯ್ದರೆಯು +ಬಿಡೆವ್+ಎಮ್ಮ +ವಾಸಿಗಳ
ಈ +ಕಳಂಬವಿದ್+ಎಮ್ಮದ್+ಎನುತವನ್
ಔಕಹದ+ ನೆಳಲಿನಲಿ +ನಿಂದು +ಪಿ
ನಾಕಿ ನುಡಿದನು ಕಡಿದ ನೀತನ ಮನದ ಸೈರಣೆಯ

ಅಚ್ಚರಿ:
(೧) ಪಿನಾಕಧರ, ಪಿನಾಕಿ – ಶಿವನನ್ನು ಕರೆದ ಬಗೆ;