ಬಳಿಕ ಮತ್ಸ್ಯದ ಬಸುರಲುದಿಸಿದ
ನಳಿನ ಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೨೩ ಪದ್ಯ)
ತಾತ್ಪರ್ಯ:
ಮತ್ಸ್ಯದ ಗರ್ಭದಿಂದುದಿಸಿದ ಮತ್ಸ್ಯಗಂಧಿಯು ತರುಣಿಯಾಗಲು ಒಮ್ಮೆ ಪರಾಶರಮಹರ್ಷಿಯು ಅವಳಲ್ಲಿ ಆಕರ್ಷಿತಗೊಂಡನು. ಅವರಿಬ್ಬರ ಮಗನಾಗಿ, ಶ್ಯಾಮವರ್ಣದವನೂ, ಪಿಂಗಳ ಜಟೆಯನ್ನುಳ್ಳ ವೇದವ್ಯಾಸರು ಜನಿಸಿದರು.
ಅರ್ಥ:
ಬಳಿಕ: ನಂತರ; ಮತ್ಸ್ಯ: ಮೀನು; ಬಸುರು: ಹೊಟ್ಟೆ; ಉದಿಸು: ಹುಟ್ಟು; ನಳಿನ: ಕಮಲ; ಲೊಚನ: ಕಣ್ಣು; ಬೆಳೆ: ವೃದ್ಧಿಸು; ಸಂಗ: ಜೋಡಿ; ವ್ರತಿ: ಯೋಗಿ, ತಪಸ್ವಿ; ಇಳಿ: ಕೆಳಕ್ಕೆ ಬಾ; ಅಭ್ರ:ಮೋಡ; ಶ್ಯಾಮ: ಕಪ್ಪು ಬಣ್ಣ; ಉರು: ಹೆಚ್ಚು; ಪಿಂಗಳ: ಕಂದು ಬಣ್ಣದ; ಜಟಾ: ಜಟೆ; ಬದ್ಧ: ಕಟ್ಟಿದ, ಬಿಗಿದ; ಮುನಿ: ಋಷಿ;
ಪದವಿಂಗಡಣೆ:
ಬಳಿಕ +ಮತ್ಸ್ಯದ+ ಬಸುರಲ್+ಉದಿಸಿದ
ನಳಿನ +ಲೋಚನೆ +ಮತ್ಸ್ಯಗಂಧಿನಿ
ಬೆಳೆವುತಿರ್ದಳು +ಸಂಗವಾಯ್ತು +ಪರಾಶರವ್ರತಿಯ
ಬಳಿಕ +ಯೋಜನಗಂಧಿಯಲ್ಲಿಂದ್
ಇಳಿದನ್+ಅಭ್ರ+ಶ್ಯಾಮನ್+ಉರು +ಪಿಂ
ಗಳ +ಜಟಾ+ಪರಿಬದ್ಧ+ ವೇದವ್ಯಾಸ +ಮುನಿರಾಯ
ಅಚ್ಚರಿ:
(೧) ವೇದವ್ಯಾಸರನ್ನು ವರ್ಣಿಸಿದ ಪರಿ – ಅಭ್ರಶ್ಯಾಮನುರು ಪಿಂಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ