ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದನಾ ಧರಿಸುವೆನೆಯೆಂದ (ಅರಣ್ಯ ಪರ್ವ, ೨೨ ಸಂಧಿ, ೧೯ ಪದ್ಯ)
ತಾತ್ಪರ್ಯ:
ಭಾನುಮತಿಯ ಮಾತನ್ನು ಕೇಳಿದ ದುರ್ಯೋಧನನು, ಎಲೈ ಭಾನುಮತಿ, ನೀನು ಹೇಳಿದ ಮರಣದ ಮಾರ್ಗಗಳು ದುರ್ಮರಣಕ್ಕೆ ಸಾಧನಗಳು, ಪವಿತ್ರವಾದ ದರ್ಭೆಯ ಹಾಸಿನ ಮೇಲೆ ಮಲಗಿ ಪ್ರಾಯೋಪವೇಶದಿಂದ ಈ ದೇಹವನ್ನು ಕಳೆದುಕೊಳ್ಳುತ್ತೇನೆ, ಅರಸುತನಕ್ಕೆ ಬೆಂಕಿ ಬೀಳಲಿ, ಪಾಂಡುಪುತ್ರರ ಕರುಣೆಯಿಂದ ಉಳಿದಿರುವ ಈ ದೇಹದಲ್ಲಿ ನಾನು ಇರಬಲ್ಲೆನೆ? ಎಂದು ಕೇಳಿದನು.
ಅರ್ಥ:
ತರುಣಿ: ಹೆಣ್ಣು; ಹೆಸರಿಸು: ಹೇಳು; ದುರ್ಮರಣ: ಅಸ್ವಾಭಾವಿಕವಾದ ಸಾವು; ಸಾಧನ: ಕಾರಣ, ಹೇತು, ನಿಮಿತ್ತ; ಅಮಲ: ನಿರ್ಮಲ; ದರ್ಭೆ:ಕುಶ, ಹುಲ್ಲು; ದರ್ಭಾಸ್ತರಣ: ದರ್ಭೆಯಿಂದ ಮಾಡಿದ ಚಾಪೆ; ಪಾವನ: ನಿರ್ಮಲ; ಪ್ರಾಯೋಪವೇಶ: ಆಹಾರವಿಲ್ಲದೆ ದೇಹವನ್ನು ಬಿಡುವುದು; ಪರಿಹರ: ನಿವಾರಣೆ, ಪರಿಹಾರ; ದೇಹ: ಕಾಯ; ಸುಡು: ದಹಿಸು; ಅರಸು: ರಾಜ; ಕರುಣ: ದಯೆ; ಕಲುಷ: ಕಳಂಕ; ಕಾಯ: ದೇಹ; ಧರಿಸು: ಉಡು,ಹೊರು;
ಪದವಿಂಗಡಣೆ:
ತರುಣಿ +ನೀ +ಹೆಸರಿಸಿದವಿವು +ದು
ರ್ಮರಣ+ ಸಾಧನವ್+ಅಮಲ +ದರ್ಭಾ
ಸ್ತರಣವಿದು +ಪಾವನವಲಾ +ಪ್ರಾಯೋಪವೇಶದಲಿ
ಪರಿಹರಿಸುವೆನು+ ದೇಹವನು +ಸುಡಲ್
ಅರಸುತನವನು +ಪಾಂಡುಪುತ್ರರ
ಕರುಣ +ಕಲುಷಿತ +ಕಾಯವಿದನಾ +ಧರಿಸುವೆನೆಯೆಂದ
ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣ ಕಲುಷಿತ ಕಾಯವಿದನಾ
(೨) ಪಾವನವಾದ ಮರಣ ಪದ್ದತಿ – ಅಮಲ ದರ್ಭಾಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ