ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ (ದ್ರೋಣ ಪರ್ವ, ೧೩ ಸಂಧಿ, ೩೮ ಪದ್ಯ)
ತಾತ್ಪರ್ಯ:
ಇದನ್ನು ನೋಡಿದ ದುರ್ಯೋಧನನ ತಮ್ಮನಾದ ದುರ್ಜಯನನ್ನು ಕರೆದು, ಬೇಗ ತೇರನ್ನು ತಂದು ಕರ್ಣನಿಗೆ ಕೊಡ ಹೇಳು. ಕುಶಲನೂ, ಕೈಚಳಕವಿರುವವನೂ ಆದ ಸಾರಥಿಯನ್ನು ಬರಹೇಳು. ಕರ್ಣ ಸೋಲುವವನಲ್ಲ, ಹಿಮ್ದಿದ್ದ ಸಾರಥಿಯೆಂದ ಅವನಿಗೆ ಈ ಗತಿಯಾಯಿತು. ವೀರನಾದ ಕರ್ಣನಲ್ಲಿ ಶೌರ್ಯ ಸಮುದ್ರನಾದ ಕರ್ಣನೆಲ್ಲಿ ಎಂದು ಆಜ್ಞೆ ಮಾಡಿದನು.
ಅರ್ಥ:
ತೇರು: ಬಂಡಿ; ಚಾಚು: ಹರಡು; ಸಾರಥಿ: ಸೂತ; ಬರಹೇಳು: ಆಗಮಿಸು; ಹಿಂದಣ: ಹಿಂಬದಿ; ದೆಸೆ: ದಿಕ್ಕು; ಬಂದು: ಆಗಮಿಸು; ಸೋಲು: ಪರಾಭವ; ವೀರ: ಶೂರ; ಶೌರ್ಯ: ಪರಾಕ್ರಮ; ಪಾರಾವಾರ: ಸಮುದ್ರ, ಕಡಲು; ಧಾರುಣೀಪತಿ: ರಾಜ; ಬೆಸಸು: ಕಾರ್ಯ; ಅನುಜ: ತಮ್ಮ;
ಪದವಿಂಗಡಣೆ:
ತೇರ +ಚಾಚಲಿ +ಬೇಗ +ಬಲುಗೈ
ಸಾರಥಿಯ +ಬರಹೇಳು +ಹಿಂದಣ
ಸಾರಥಿಯ +ದೆಸೆಯಿಂದ +ಬಂದುದು +ಕರ್ಣ +ಸೋಲುವನೆ
ವೀರನಾವೆಡೆ+ ಶೌರ್ಯ +ಪಾರಾ
ವಾರನ್+ಆವೆಡೆ+ಎನುತ +ಕೌರವ
ಧಾರುಣೀಪತಿ +ಬೆಸಸಿದನು +ತನ್ನನುಜ +ದುರ್ಜಯಗೆ
ಅಚ್ಚರಿ:
(೧) ಕರ್ಣನ ಶೌರ್ಯವನ್ನು ವರ್ಣಿಸುವ ಪರಿ – ವೀರನಾವೆಡೆ ಶೌರ್ಯ ಪಾರಾವಾರನಾವೆಡೆಯೆನುತ