ಪದ್ಯ ೫೬: ಕುಬೇರನ ಭಟರ ಸ್ಥಿತಿ ಹೇಗಿತ್ತು?

ಗಾಯವಡೆದರು ಕೆಲರು ಕೆಲರಸು
ಬೀಯವದುದು ಬಿಡುದಲೆಯ ಬಲು
ನಾಯಕರು ಸಂತೈಸಿದರು ಕೌಬೇರ ಭವನದಲಿ
ವಾಯುಸುತನೀ ವಿಜಯಸಿರಿಯ ಪ
ಸಾಯಿತಂಗಭಿಷೇಕವೆಂದು ಗ
ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ (ಅರಣ್ಯ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕುಬೇರನ ಭಟರಲ್ಲಿ ಕೆಲವರಿಗೆ ಗಾಯವಾಯಿತು. ಕೆಲವರು ಮೃತರಾದರು, ಓಡಿ ಹೋದ ಕೆಲವರು ಕುಬೇರನ ಆಸ್ಥಾನದಲ್ಲಿ ಸೇರಲು ಅಲ್ಲಿ ನೆರೆದಿದ್ದ ಕುಬೇರನ ನಾಯಕರು ಸಮಾಧಾನ ಪಡಿಸಿದರು. ಭೀಮನು ತನ್ನ ವಿಜಯದಲ್ಲಿ ಸಹಚರನಾದ ಆಪ್ತನಿಗೆ ಅಭಿಷೇಕವನ್ನು ಮಾಡುವೆನೆಂದು ಗದೆಯನ್ನು ಸರೋವರದಲ್ಲಿ ತೊಳೆದು ದಡದ ಮೇಲಿಟ್ಟನು.

ಅರ್ಥ:
ಗಾಯ: ಪೆಟ್ಟು; ಕೆಲರು: ಸ್ವಲ್ಪ ಜನ; ಅಸು: ಪ್ರಾಣ; ಬೀಯವಾಗು: ಕಳೆದುಕೊಳ್ಳು; ಬಿಡುದಲೆ: ಬಿರಿಹೋಯ್ದ ಕೂದಲಿನ ತಲೆ; ಬಲು: ಬಹಳ; ನಾಯಕ: ಒಡೆಯ; ಸಂತೈಸು: ಸಮಾಧಾನ ಪಡಿಸು; ಭವನ: ಆಲಯ; ವಾಯುಸುತ: ಭೀಮ; ಸುತ: ಮಗ; ವಿಜಯ: ಗೆಲುವು; ಸಿರಿ: ಐಶ್ವರ್ಯ; ಪಸಾಯ: ಬಹುಮಾನ; ಅಂಗ: ದೇಹದ ಭಾಗ; ಅಭಿಷೇಕ: ಮಜ್ಜನ; ಗದೆ: ಮುದ್ಗರ; ಆಯುಧ: ಶಸ್ತ್ರ; ಅಲುಬು: ಕಾಲುತೊಳೆದ ನೀರು; ಕೊಳ: ಸರೋವರ; ಚಾಚು: ಹರಡು; ತಡಿ: ದಡ, ತಟ;

ಪದವಿಂಗಡಣೆ:
ಗಾಯವಡೆದರು +ಕೆಲರು +ಕೆಲರ್+ಅಸು
ಬೀಯವದುದು +ಬಿಡುದಲೆಯ +ಬಲು
ನಾಯಕರು +ಸಂತೈಸಿದರು+ ಕೌಬೇರ+ ಭವನದಲಿ
ವಾಯುಸುತನ್+ಈ+ ವಿಜಯ+ಸಿರಿಯ +ಪ
ಸಾಯಿತ್+ಅಂಗ್+ಅಭಿಷೇಕವ್+ಎಂದು +ಗ
ದಾ+ಯುಧವನ್+ಅಲುಬಿದನು +ಕೊಳನಲಿ+ ಚಾಚಿದನು +ತಡಿಗೆ

ಅಚ್ಚರಿ:
(೧) ವಿಜಯವನ್ನು ಆಚರಿಸುವ ಪರಿ – ವಾಯುಸುತನೀ ವಿಜಯಸಿರಿಯ ಪಸಾಯಿತಂಗಭಿಷೇಕವೆಂದು