ಅರಸ ಕೇಳಾಕ್ಷಣದೊಳನಿಲ
ಸ್ಮರಣೆಯನು ಹರಿ ಮಾಡಿದನು ಸಂ
ಚರಿಸಿದನು ತತ್ತನುಜನಂಗೋಪಾಂಗವೀಥಿಯಲಿ
ತರತರದ ನಾಡಿಗಳೊಳಗೆವಿ
ಸ್ತರಿಸಿ ಮೂಲಾಧಾರದಲಿ ಚೇ
ತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ (ಗದಾ ಪರ್ವ, ೭ ಸಂಧಿ, ೪೭ ಪದ್ಯ)
ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಆ ಸಮಯದಲ್ಲಿ ಶ್ರೀಕೃಷ್ಣನು ವಾಯುದೇವನನ್ನು ಸ್ಮರಿಸಿದನು. ಆತನು ತನ್ನ ಮಗನ ಅಂಗೋಪಾಂಗಗಳಲ್ಲಿ ಎಲ್ಲಾ ನಾಡಿಗಳಲ್ಲೂ ಆಡಿ, ಮೂಲಾಧಾರದಲ್ಲಿ ಚೇತನವನ್ನು ನೀಡಿದನು, ಭೀಮನು ಸಜೀವನಾದನು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಣ: ಸಮಯ; ಅನಿಲ: ವಾಯು; ಸ್ಮರಣೆ: ಜ್ಞಾಪಕ; ಹರಿ: ಕೃಷ್ಣ; ಸಂಚರಿಸು: ಹರಿದಾಡು; ತನುಜ: ಮಗ; ಅಂಗೋಪಾಂಗ: ದೇಹದ ಅಂಗಗಳು; ವೀಥಿ: ಮಾರ್ಗ, ದಾರಿ; ತರತರ: ಹಲವಾರು; ನಾಡಿ: ಧಮನಿ; ವಿಸ್ತರಿಸು: ಹರಡು; ಮೂಲಾಧಾರ: ಕುಂಡಲಿನಿಯ ಮೂಲ ಸ್ಥಾನ; ಚೇತರಿಸು: ಎಚ್ಚರಿಸು; ಅಂಗ: ದೇಹದ ಭಾಗ; ಜೀವ: ಪ್ರಾಣ; ಸಮೀರ: ವಾಯು; ಪಸರಿಸು: ಹರಡು; ಅಗೆ: ಅಂಕುರ;
ಪದವಿಂಗಡಣೆ:
ಅರಸ +ಕೇಳ್+ಆ+ ಕ್ಷಣದೊಳ್+ಅನಿಲ
ಸ್ಮರಣೆಯನು +ಹರಿ +ಮಾಡಿದನು +ಸಂ
ಚರಿಸಿದನು +ತತ್+ತನುಜನ್+ಅಂಗೋಪಾಂಗ+ವೀಥಿಯಲಿ
ತರತರದ +ನಾಡಿಗಳೊಳ್+ಅಗೆ+ವಿ
ಸ್ತರಿಸಿ +ಮೂಲಾಧಾರದಲಿ +ಚೇ
ತರಿಸಿ +ಸರ್ವಾಂಗದಲಿ +ಜೀವ+ಸಮೀರ +ಪಸರಿಸಿದ
ಅಚ್ಚರಿ:
(೧) ಜೀವ ತುಂಬಿದ ಪರಿ – ತರತರದ ನಾಡಿಗಳೊಳಗೆವಿಸ್ತರಿಸಿ ಮೂಲಾಧಾರದಲಿ ಚೇತರಿಸಿ ಸರ್ವಾಂಗದಲಿ ಜೀವಸಮೀರ ಪಸರಿಸಿದ
(೨) ಅನಿಲ, ಸಮೀರ – ಸಮಾನಾರ್ಥಕ ಪದ