ಪದ್ಯ ೩೬: ಊರ್ವಶಿಯು ತನ್ನ ಕೋಪವನ್ನು ಹೇಗೆ ತೋರ್ಪಡಿಸಿದಳು?

ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲುವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ (ಅರಣ್ಯ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಊರ್ವಶಿಯ ಕೋಪವು ಇಮ್ಮಡಿಸಿತು, ಲಜ್ಜೆಯನ್ನು ತೊರೆದಳು, ಹಲವು ರೀತಿಯ ಛಲಗಳು ಆಕೆಯಲ್ಲಿ ಹುಟ್ಟಿದವು, ದುಃಖವು ಕೆರಳಿತು, ಆಶೆ ಜಾರಿ ಹೋಯಿತು, ಉಸಿರು ಬಿಸಿಯಾಗಿ ಅದರ ತಾಪವೇರಿತು, ಕಣ್ಣು ಕೆಂಪಾದವು, ರೋಷವು ಅಧಿಕವಾಯಿತು.

ಅರ್ಥ:
ರೋಷ: ಕೋಪ; ಈರೆಲೆ: ಎರಡು ಎಲೆ, ಇಮ್ಮಡಿಸು; ಲಜ್ಜೆ: ನಾಚಿಕೆ; ಮೀಸಲು: ಪ್ರತ್ಯೇಕ, ತೆಗೆದಿರಿಸು; ಅಳಿ: ನಾಶವಾಗು; ಬಲು: ಹಲವಾರು; ವಿಧ: ರೀತಿ; ಬಹು: ಬಹಳ; ವಾಸಿ: ಛಲ, ಹಠ; ಪಲ್ಲವಿಸು: ಚಿಗುರು; ಕೆಲ್ಲವಿಸು: ಉದ್ರೇಕಗೊಳ್ಳು, ಕೆರಳು; ಅನುತಾಪ: ಪಶ್ಚಾತ್ತಾಪ, ದುಃಖ; ಆಶೆ: ಇಚ್ಛೆ, ಹಂಬಲ; ಪೈಸರ: ಜಾರುವುದು; ಕಡು: ಬಹಳ; ಝಳ:ಶಾಖ, ಉಷ್ಣತೆ; ಸೂಸು: ಹೊರಹೊಮ್ಮು; ಸುಯ್ಲು: ನಿಟ್ಟುಸಿರು; ಕಂಗಳು: ಕಣ್ಣು, ನಯನ; ಕೇಸುರಿ: ಕೆಂಪು; ಮುಕ್ಕುಳಿಸು: ಹೊರಹಾಕು; ಹೆಕ್ಕಳ: ಹೆಚ್ಚಳ, ಅತಿಶಯ; ಕಾಮಿನಿ: ಹೆಣ್ಣು;

ಪದವಿಂಗಡಣೆ:
ರೋಷವ್+ಈರೆಲೆಯಾಯ್ತು +ಲಜ್ಜೆಯ
ಮೀಸಲ್+ಅಳಿದುದು +ಬಲುವಿಧದ+ ಬಹು
ವಾಸಿಗಳು +ಪಲ್ಲವಿಸಿದವು +ಕೆಲ್ಲವಿಸಿತ್+ಅನುತಾಪ
ಆಶೆ +ಪೈಸರವೋಯ್ತು +ಕಡು +ಝಳ
ಸೂಸಿದುದು +ಸುಯ್ಲಿನಲಿ +ಕಂಗಳು
ಕೇಸುರಿಯ +ಮುಕ್ಕುಳಿಸಿದವು+ ಹೆಕ್ಕಳಿಸಿ+ ಕಾಮಿನಿಯ

ಅಚ್ಚರಿ:
(೧) ರೋಷವನ್ನು ಚಿತ್ರಿಸುವ ಪರಿ – ಸುಯ್ಲಿನಲಿ ಕಂಗಳು ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ
(೨) ರೋಷವು ಹೆಚ್ಚಾಯಿತು ಎಂದು ಹೇಳುವ ಪರಿ – ರೋಷವೀರೆಲೆಯಾಯ್ತು

ಪದ್ಯ ೧೦೧: ಕುಂತಿಯು ಗಜಗೌರಿವ್ರತವನ್ನು ಎಲ್ಲಿ ಕುಳಿತು ಮಾಡಿದಳು?

ಇಂದುಮುಖಿ ಸುರಗಜದ ಮೇಲಣ
ಯಿಂದ್ರನೇರುವ ಗದ್ದುಗೆಗೆ ನಡೆ
ತಂದು ಕುಳ್ಳಿರೆ ಚಿಮ್ಮಿದರು ಚಾಮರವನಮರಿಯರು
ತಂದು ಸುರಪನ ಛತ್ರವನು ನಲ
ವಿಂದ ಪಲ್ಲವಿಸಿದರು ಕುಂತಿಯು
ಇಂದುಧರನರಸಿಯನು ನೋಂತಳು ರಾಯ ಕೇಳೆಂದ (ಆದಿ ಪರ್ವ, ೨೧ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಕುಂತಿಯನ್ನು ಐರಾವತದ ಮೇಲಕ್ಕೆ ಎತ್ತಿ ಆಕೆ ಇಂದ್ರನು ಕೂರುವ ಆಸನದಲ್ಲಿ ಕುಂತಿಯು ಕೂರಲು, ದೇವತಾಸ್ತ್ರೀಯರು ಆಕೆಗೆ ಚಾಮರವನ್ನು ಬೀಸಿದರು, ದೇವೇಂದ್ರನಿಗೆ ಹಿಡಿಯುವ ಛತ್ರಿಯನ್ನು ಆಕೆಯ ಮೇಲೆ ಹಿಡಿದರು, ಆನಂತರ ಕುಂತಿಯು ಗಜಗೌರಿವ್ರತವನ್ನು ಮಾಡಿದಳು.

ಅರ್ಥ:
ಇಂದುಮುಖಿ: ಚಂದ್ರನಂತ ಮುಖದವಳು, ಸುಂದರಿ; ಸುರಗಜ: ಐರಾವತ; ಮೇಲೆ: ತುದಿ, ಅಗ್ರ; ಇಂದ್ರ: ಶಕ್ರ; ಗದ್ದುಗೆ: ಪೀಠ, ಭದ್ರಾಸನ; ಕುಳ್ಳಿರೆ: ಕೂರಲು; ಚಿಮ್ಮು:ಎರಚು; ಚಾಮರ: ಬೀಸಣಿಗೆ; ಅಮರಿ: ಸುರಸ್ತ್ರೀ, ಅಪ್ಸರೆ; ಸುರಪ: ಇಂದ್ರ; ಛತ್ರ:ಕೊಡೆ; ನಲವು: ಸಂತೋಷ; ಪಲ್ಲವಿಸು: ಚಿಗುರು; ಇಂದು: ಚಂದ್ರ; ಇಂದುಧರ: ಶಿವ; ಅರಸಿ: ರಾಣಿ; ನೋಂತು: ವ್ರತ; ರಾಯ: ರಾಜ;

ಪದವಿಂಗಡಣೆ:
ಇಂದುಮುಖಿ+ ಸುರಗಜದ+ ಮೇಲಣ
ಯಿಂದ್ರನ್+ಏರುವ +ಗದ್ದುಗೆಗೆ +ನಡೆ
ತಂದು +ಕುಳ್ಳಿರೆ +ಚಿಮ್ಮಿದರು+ ಚಾಮರವನ್+ಅಮರಿಯರು
ತಂದು +ಸುರಪನ +ಛತ್ರವನು +ನಲ
ವಿಂದ +ಪಲ್ಲವಿಸಿದರು +ಕುಂತಿಯು
ಇಂದುಧರನ್+ಅರಸಿಯನು +ನೋಂತಳು +ರಾಯ +ಕೇಳೆಂದ

ಅಚ್ಚರಿ:
(೧) ಇಂದು – ೧, ೬ ಸಾಲಿನ ಮೊದಲ ಪದ
(೨) ಪಾರ್ವತಿಯನ್ನು ಇಂದುಧರನರಸಿ ಎಂದು ವರ್ಣಿಸಿರುವುದು
(೩) ಛತ್ರವನ್ನು ತೆಗೆದ ಬಗೆ – ಛತ್ರವನು ನಲವಿಂದ ಪಲ್ಲವಿಸಿದರು – ಸಂತೋಷದಿಂದ ತೆಗೆದರು