ಪದ್ಯ ೮೯: ರಾಜನು ಯಾವ ಮಾರ್ಗದಿಂದ ವಿದ್ಯೆಯನ್ನುಗಳಿಸಬೇಕು?

ಅರಸ ಕೇಳೈ ಮಾರ್ಗ ಮೂರಾ
ಗಿರುತಿಹುದು ಸಂಪೂರ್ಣಧನ ಗುರು
ಪರಿಚರಿಯ ಪರಿವರ್ತನೆಗಳೆಂಬಿನಿತನತಿಗಳೆದು
ತಿರುಗಿ ಬಂದೊಡೆ ನಾಲ್ಕನೆಯ ಮತ
ದೊರಕಲರಿವುದೆ ಕಲೆಗಳನು ಸಂ
ವರಿಸುವ ನರೋತ್ತಮರಿಗವನೀಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕೊಡಬೇಕಾದ ಧನವನ್ನು ನೀಡಿ, ಗುರುಗಳ ಸೇವೆ ಮಾಡಿ ಅದರಿಂದ ವಿದ್ಯಾರ್ಜನೆ ಎನ್ನುವ ಮೂರು ಮಾರ್ಗಗಳು ವಿದ್ಯಾರ್ಜನೆಗೆ ಇವೆ. ಇವನ್ನು ಬಿಟ್ಟು ನಾಲ್ಕನೆಯ ದಾರಿ ಇಲ್ಲ. ರಾಜರು ಈ ಮೂರು ಮಾರ್ಗಗಳಿಂದಲೇ ವಿದ್ಯೆಯನ್ನು ಕಲಿಯಬೇಕು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಾರ್ಗ: ದಾರಿ; ಮೂರು: ತ್ರಿ, ತ್ರಯ; ಸಂಪೂರ್ಣ: ಎಲ್ಲಾ; ಧನ: ಐಶ್ವರ್ಯ; ಗುರು: ಆಚಾರ್ಯ; ಪರಿಚರ:ಸೇವಕ; ಪರಿಚರಿಯ: ಸೇವೆ; ಪರಿವರ್ತನೆ:ಬದಲಾವಣೆ; ಇನಿತು: ಸ್ವಲ್ಪ, ಈ ಸ್ಥಿತಿ; ತಿರುಗಿ: ಮತ್ತೆ; ಬಂದೊಡೆ: ಬಂದರೆ; ನಾಲ್ಕು: ಚತುರ್; ಮತ: ಅಭಿಪ್ರಾಯ; ದೊರಕು: ಸಿಕ್ಕು; ಅರಿ: ತಿಳಿ; ಕಲೆ: ವಿದ್ಯೆ, ಲಲಿತವಿದ್ಯೆ, ಕುಶಲವಿದ್ಯೆ, ಸೂಕ್ಷ್ಮ ಪರಿಮಾಣದ ವಸ್ತು; ಸಂವರಿಸು: ಸಜ್ಜು ಮಾಡು, ಕಾಪಾಡು; ನರ: ಮನುಷ್ಯ; ಉತ್ತಮ: ಶ್ರೇಷ್ಠ; ಅವನೀಪಾಲ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಮಾರ್ಗ +ಮೂರಾ
ಗಿರುತಿಹುದು +ಸಂಪೂರ್ಣ+ಧನ+ ಗುರು
ಪರಿಚರಿಯ+ ಪರಿವರ್ತನೆಗಳೆಂಬ್+ಇನಿತನ್+ಅತಿಗಳೆದು
ತಿರುಗಿ +ಬಂದೊಡೆ +ನಾಲ್ಕನೆಯ +ಮತ
ದೊರಕಲ್+ಅರಿವುದೆ +ಕಲೆಗಳನು +ಸಂ
ವರಿಸುವ +ನರೋತ್ತಮರಿಗ್+ಅವನೀಪಾಲ+ ಕೇಳೆಂದ

ಅಚ್ಚರಿ:
(೧) ಅರಸ, ಅವನೀಪಾಲ – ಸಮಾನಾರ್ಥಕ ಪದ
(೨) ಇನಿತನತಿ – ಪದದ ಬಳಕೆ