ಪದ್ಯ ೧೩: ಪಾಂಡವರ ಆಯಾಸ ಹೇಗೆ ದೂರವಾಯಿತು?

ಮರಳಿ ಕಾಮ್ಯಕವನದ ದಳ ಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದಿ
ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯಾಯ್ತೆನುತ ಮೈಯಿಕ್ಕಿದನು ಭೂಪ (ಅರಣ್ಯ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನಾವು ಮತ್ತೆ ಕಾಮ್ಯಕವನದಲ್ಲೇ ಬೀಡು ಬಿಟ್ಟೆವು. ನಮ್ಮ ವನವಾಸದ ತಿರುಗಾಟದ ವಿವರವದು. ಎಲೈ ಕರುಣಾಶಾಲಿಯೇ, ನಿಮ್ಮ ಪಾದಕಮಲಗಳ ದರುಶನದಿಂದ ನಮ್ಮ ಆಯಾಸ ಪರಂಪರೆ ಕೊನೆಗೊಂಡಿತು ಎಂದು ಹೇಳಿ ಧರ್ಮಜನು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮರಳಿ: ಮತ್ತೆ, ಹಿಂದಿರುಗು; ವನ: ಕಾಡು; ದಳ: ಗುಂಪು; ಮಂದಿರ: ಆಲ್ಯ; ನೆಲೆ: ಸ್ಥಾನ; ವಿಸ್ತರಣ: ವಿಶಾಲ; ಹಿಂದೆ: ಪೂರ್ವ; ವಿಪಿನ: ಕಾಡು; ಪರಿಭ್ರಮಣ: ಸುತ್ತಾಡು, ಅಲೆದಾಟ; ಕರುಣಿ: ದಯೆ; ಅಡಿ: ಹೆಜ್ಜೆ, ತಳ; ಅಂಘ್ರಿ: ಪಾದ; ಕಮಲ: ತಾವರೆ; ದರುಶನ: ದೃಷ್ಟಿ, ಗೋಚರ; ಆಯಾಸ: ಬಳಲಿಕೆ, ಶ್ರಮ; ಪಾರಂಪರೆ: ಸಂಪ್ರದಾಯ; ಬಿಡುಗಡೆ: ಬಂಧನದಿಂದ ಪಾರಾಗುವಿಕೆ; ಮೈಯಿಕ್ಕು: ನಮಸ್ಕರಿಸು; ಭೂಪ: ರಾಜ;

ಪದವಿಂಗಡಣೆ:
ಮರಳಿ +ಕಾಮ್ಯಕವನದ+ ದಳ +ಮಂ
ದಿರವನೇ+ ನೆಲೆ +ಮಾಡಿದೆವು +ವಿ
ಸ್ತರಣವಿದು +ಹಿಂದಾದ +ವಿಪಿನಾಂತರ +ಪರಿಭ್ರಮದಿ
ಕರುಣಿ +ನಿಮ್ಮಡಿ+ಅಂಘ್ರಿ+ಕಮಲದ
ದರುಶನದಿನ್+ಆಯಾಸ +ಪಾರಂ
ಪರೆಗೆ +ಬಿಡುಗಡೆಯಾಯ್ತ್+ಎನುತ+ ಮೈಯಿಕ್ಕಿದನು +ಭೂಪ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸುವ ಪರಿ – ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂಪರೆಗೆ ಬಿಡುಗಡೆಯಾಯ್ತೆ