ಮರಳಿ ಕಾಮ್ಯಕವನದ ದಳ ಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದಿ
ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯಾಯ್ತೆನುತ ಮೈಯಿಕ್ಕಿದನು ಭೂಪ (ಅರಣ್ಯ ಪರ್ವ, ೧೫ ಸಂಧಿ, ೧೩ ಪದ್ಯ)
ತಾತ್ಪರ್ಯ:
ಹೇ ಕೃಷ್ಣ, ನಾವು ಮತ್ತೆ ಕಾಮ್ಯಕವನದಲ್ಲೇ ಬೀಡು ಬಿಟ್ಟೆವು. ನಮ್ಮ ವನವಾಸದ ತಿರುಗಾಟದ ವಿವರವದು. ಎಲೈ ಕರುಣಾಶಾಲಿಯೇ, ನಿಮ್ಮ ಪಾದಕಮಲಗಳ ದರುಶನದಿಂದ ನಮ್ಮ ಆಯಾಸ ಪರಂಪರೆ ಕೊನೆಗೊಂಡಿತು ಎಂದು ಹೇಳಿ ಧರ್ಮಜನು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.
ಅರ್ಥ:
ಮರಳಿ: ಮತ್ತೆ, ಹಿಂದಿರುಗು; ವನ: ಕಾಡು; ದಳ: ಗುಂಪು; ಮಂದಿರ: ಆಲ್ಯ; ನೆಲೆ: ಸ್ಥಾನ; ವಿಸ್ತರಣ: ವಿಶಾಲ; ಹಿಂದೆ: ಪೂರ್ವ; ವಿಪಿನ: ಕಾಡು; ಪರಿಭ್ರಮಣ: ಸುತ್ತಾಡು, ಅಲೆದಾಟ; ಕರುಣಿ: ದಯೆ; ಅಡಿ: ಹೆಜ್ಜೆ, ತಳ; ಅಂಘ್ರಿ: ಪಾದ; ಕಮಲ: ತಾವರೆ; ದರುಶನ: ದೃಷ್ಟಿ, ಗೋಚರ; ಆಯಾಸ: ಬಳಲಿಕೆ, ಶ್ರಮ; ಪಾರಂಪರೆ: ಸಂಪ್ರದಾಯ; ಬಿಡುಗಡೆ: ಬಂಧನದಿಂದ ಪಾರಾಗುವಿಕೆ; ಮೈಯಿಕ್ಕು: ನಮಸ್ಕರಿಸು; ಭೂಪ: ರಾಜ;
ಪದವಿಂಗಡಣೆ:
ಮರಳಿ +ಕಾಮ್ಯಕವನದ+ ದಳ +ಮಂ
ದಿರವನೇ+ ನೆಲೆ +ಮಾಡಿದೆವು +ವಿ
ಸ್ತರಣವಿದು +ಹಿಂದಾದ +ವಿಪಿನಾಂತರ +ಪರಿಭ್ರಮದಿ
ಕರುಣಿ +ನಿಮ್ಮಡಿ+ಅಂಘ್ರಿ+ಕಮಲದ
ದರುಶನದಿನ್+ಆಯಾಸ +ಪಾರಂ
ಪರೆಗೆ +ಬಿಡುಗಡೆಯಾಯ್ತ್+ಎನುತ+ ಮೈಯಿಕ್ಕಿದನು +ಭೂಪ
ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸುವ ಪರಿ – ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂಪರೆಗೆ ಬಿಡುಗಡೆಯಾಯ್ತೆ