ಕಪಟವನು ನೆರೆ ಮಾಡಿ ಜೂಜಿನೊ
ಳು ಪರಿಕಾರ್ಯವ ಜೈಸಿ ಕೊಡುವೆನು
ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ
ಅಪದೆಸೆಗೆ ಭಯಗೊಳ್ಳದಿರು ನಿ
ಷ್ಕೃಪೆಯಲಿರು ಗುರು ಭೀಷ್ಮ ವಿದುರಾ
ದ್ಯಪಸದರ ಕೈಕೊಳ್ಳದಿರು ನೀನೆಂದನಾ ಶಕುನಿ (ಸಭಾ ಪರ್ವ, ೧೩ ಸಂಧಿ, ೧೯ ಪದ್ಯ)
ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರಿಸುತ್ತಾ, ದುರ್ಯೋಧನ ಜೂಜಿನಲ್ಲಿ ಕಪಟವನ್ನು ಮಾಡಿ ನಾನು ನಿನಗೆ ಜಯವನ್ನು ದೊರಕಿಸಿಕೊಡುತ್ತೇನೆ. ಮೋಸದಲ್ಲಿ ನನ್ನಷ್ಟು ನಿಪುಣರಾದವರು ಈ ಲೋಕದಲ್ಲೇ ಇಲ್ಲ. ಅಪಕೀರ್ತಿಗೆ ನೀನು ಹೆದರಬೇಡ. ನಿಷ್ಕರುಣೆಯಿಂದ ವರ್ತಿಸು. ಭೀಷ್ಮ ವಿದುರ ಮೊದಲಾದ ಅಯೋಗ್ಯರನ್ನು ನೀನು ಅನುಸರಿಸಬೇಡ ಎಂದನು.
ಅರ್ಥ:
ಕಪಟ: ಮೋಸ; ನೆರೆ: ಹೆಚ್ಚು; ಜೂಜು: ದ್ಯೂತ ಕ್ರೀಡೆ; ಪರಿ: ಪರಿಹರಿಸು, ನಾಶಮಾಡು, ಚಲಿಸು; ಕಾರ್ಯ: ಕೆಲಸ; ಜೈಸಿ: ಗೆದ್ದು; ನಿಪುಣ: ಚಾಣಾಕ್ಷ; ಲೋಕ: ಜಗತ್ತು; ಕೈತವ: ಕಪಟ, ವಂಚನೆ; ಅಪದೆಸೆ: ದುರದೃಷ್ಟ; ಭಯ: ಅಂಜಿಕೆ; ನಿಷ್ಕೃಪೆ; ದಯೆಯಿಲ್ಲದ; ಗುರು: ಆಚಾರ್ಯ; ಆದಿ: ಮುಂತಾದ; ಸದರ: ಸಲಿಗೆ, ಸಸಾರ; ಕೈಕೊಳ್ಳು: ಪಡೆ, ದೊರಕು, ಸ್ವೀಕರಿಸು;
ಪದವಿಂಗಡಣೆ:
ಕಪಟವನು +ನೆರೆ +ಮಾಡಿ +ಜೂಜಿನೊ
ಳು +ಪರಿಕಾರ್ಯವ +ಜೈಸಿ +ಕೊಡುವೆನು
ನಿಪುಣರೆನ್ನಂದದಲಿ+ ಲೋಕದೊಳಿಲ್ಲ+ ಕೈತವದ
ಅಪದೆಸೆಗೆ+ ಭಯಗೊಳ್ಳದಿರು +ನಿ
ಷ್ಕೃಪೆಯಲಿರು+ ಗುರು +ಭೀಷ್ಮ +ವಿದುರಾ
ದ್ಯಪ+ಸದರ+ ಕೈಕೊಳ್ಳದಿರು +ನೀನೆಂದನಾ +ಶಕುನಿ
ಅಚ್ಚರಿ:
(೧) ಶಕುನಿಯ ನಿಪುಣತೆ – ನಿಪುಣರೆನ್ನಂದದಲಿ ಲೋಕದೊಳಿಲ್ಲ ಕೈತವದ