ಪದ್ಯ ೨೩: ವೇದವ್ಯಾಸರು ಯಾರಲ್ಲಿ ಜನಿಸಿದರು?

ಬಳಿಕ ಮತ್ಸ್ಯದ ಬಸುರಲುದಿಸಿದ
ನಳಿನ ಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮತ್ಸ್ಯದ ಗರ್ಭದಿಂದುದಿಸಿದ ಮತ್ಸ್ಯಗಂಧಿಯು ತರುಣಿಯಾಗಲು ಒಮ್ಮೆ ಪರಾಶರಮಹರ್ಷಿಯು ಅವಳಲ್ಲಿ ಆಕರ್ಷಿತಗೊಂಡನು. ಅವರಿಬ್ಬರ ಮಗನಾಗಿ, ಶ್ಯಾಮವರ್ಣದವನೂ, ಪಿಂಗಳ ಜಟೆಯನ್ನುಳ್ಳ ವೇದವ್ಯಾಸರು ಜನಿಸಿದರು.

ಅರ್ಥ:
ಬಳಿಕ: ನಂತರ; ಮತ್ಸ್ಯ: ಮೀನು; ಬಸುರು: ಹೊಟ್ಟೆ; ಉದಿಸು: ಹುಟ್ಟು; ನಳಿನ: ಕಮಲ; ಲೊಚನ: ಕಣ್ಣು; ಬೆಳೆ: ವೃದ್ಧಿಸು; ಸಂಗ: ಜೋಡಿ; ವ್ರತಿ: ಯೋಗಿ, ತಪಸ್ವಿ; ಇಳಿ: ಕೆಳಕ್ಕೆ ಬಾ; ಅಭ್ರ:ಮೋಡ; ಶ್ಯಾಮ: ಕಪ್ಪು ಬಣ್ಣ; ಉರು: ಹೆಚ್ಚು; ಪಿಂಗಳ: ಕಂದು ಬಣ್ಣದ; ಜಟಾ: ಜಟೆ; ಬದ್ಧ: ಕಟ್ಟಿದ, ಬಿಗಿದ; ಮುನಿ: ಋಷಿ;

ಪದವಿಂಗಡಣೆ:
ಬಳಿಕ +ಮತ್ಸ್ಯದ+ ಬಸುರಲ್+ಉದಿಸಿದ
ನಳಿನ +ಲೋಚನೆ +ಮತ್ಸ್ಯಗಂಧಿನಿ
ಬೆಳೆವುತಿರ್ದಳು +ಸಂಗವಾಯ್ತು +ಪರಾಶರವ್ರತಿಯ
ಬಳಿಕ +ಯೋಜನಗಂಧಿಯಲ್ಲಿಂದ್
ಇಳಿದನ್+ಅಭ್ರ+ಶ್ಯಾಮನ್+ಉರು +ಪಿಂ
ಗಳ +ಜಟಾ+ಪರಿಬದ್ಧ+ ವೇದವ್ಯಾಸ +ಮುನಿರಾಯ

ಅಚ್ಚರಿ:
(೧) ವೇದವ್ಯಾಸರನ್ನು ವರ್ಣಿಸಿದ ಪರಿ – ಅಭ್ರಶ್ಯಾಮನುರು ಪಿಂಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ

ಪದ್ಯ ೧೪: ಕೃಷ್ಣನು ಯಾವ ಮುನಿಗಳನ್ನು ಕಂಡನು?

ಮರಳಿದಳು ತರಳಾಕ್ಷಿ ಮುರರಿಪು
ಬರುತಲಾ ಬಟ್ಟೆಯಲಿ ಕಂಡನು
ವರ ಭರದ್ವಾಜಾಖ್ಯ ಗೌತಮ ಕಣ್ವಮುನಿವರರ
ಉರಗಮಾಲಿ ಮತಂಗ ಗಾರ್ಗ್ಯಾಂ
ಗಿರಸ ನಾರದ ಶುಕ ಪರಾಶರ
ಪರಶುರಾಮ ಶ್ವೇತಕೇತು ಪ್ರಮುಖ ಮುನಿವರರ (ಉದ್ಯೋಗ ಪರ್ವ, ೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಚಂಚಲಕಣ್ಣುಳ್ಳವಳಾದ ದ್ರೌಪದಿಯು ಕೃಷ್ಣನ ಅಭಯವನ್ನು ಪಡೆದು ಮರಳಿದಳು. ಕೃಷ್ಣನು ತನ್ನ ಮಾರ್ಗದಲ್ಲಿ ಬರುತ್ತಾ ಶ್ರೇಷ್ಠರಾದ ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು ಮುನಿಗಳನ್ನು ಕಂಡನು.

ಅರ್ಥ:
ಮರಳು: ಹಿಂದಿರುಗು; ತರಳ:ಚಂಚಲವಾದ; ಅಕ್ಷಿ: ಕಣ್ಣು; ರಿಪು: ವೈರಿ; ಬಟ್ಟೆ: ಹಾದಿ, ಮಾರ್ಗ; ಬರುತ: ಆಗಮಿಸು; ಕಂಡನು: ನೋಡಿದನು; ಪ್ರಮುಖ: ಮುಖ್ಯ; ಮುನಿ: ಋಷಿ; ವರ: ಶ್ರೇಷ್ಠ; ಆಖ್ಯ: ಹೆಸರು

ಪದವಿಂಗಡಣೆ:
ಮರಳಿದಳು +ತರಳಾಕ್ಷಿ +ಮುರರಿಪು
ಬರುತಲಾ +ಬಟ್ಟೆಯಲಿ+ ಕಂಡನು
ವರ +ಭರದ್ವಾಜ+ಆಖ್ಯ+ ಗೌತಮ+ ಕಣ್ವಮುನಿವರರ
ಉರಗಮಾಲಿ +ಮತಂಗ +ಗಾರ್ಗ್ಯ+ಅಂ
ಗಿರಸ+ ನಾರದ +ಶುಕ +ಪರಾಶರ
ಪರಶುರಾಮ +ಶ್ವೇತಕೇತು+ ಪ್ರಮುಖ +ಮುನಿವರರ

ಅಚ್ಚರಿ:
(೧) ಮುನಿಗಳ ಹೆಸರುಳ್ಳ ಪದ್ಯ: ಭರದ್ವಾಜ, ಗೌತಮ, ಕಣ್ವ, ಉರಗಮಾಲಿ, ಮತಂಗ, ಗಾರ್ಗ್ಯ, ಅಂಗಿರಸ, ನಾರದ, ಶುಕ, ಪರಾಶರ, ಪರಶುರಾಮ, ಶ್ವೇತಕೇತು
(೨) ದ್ರೌಪದಿಯನ್ನು ತರಳಾಕ್ಷಿ ಎಂದು ಕರೆದಿರುವುದು