ಪದ್ಯ ೧೬: ಧರ್ಮಜನು ಯಾರನ್ನು ಮತ್ತೆ ಕಳುಹಿಸಿದನು?

ಜಡಿಯಲೆರಡಳ್ಳೆಗಳು ಕೊರಳೈ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ (ಅರಣ್ಯ ಪರ್ವ, ೨೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎರಡು ಅಳ್ಳೆಗಳೂ ಜಡಿಯುವಂತೆ ಕೊರಳಿನವರೆಗೆ ನೀರನ್ನು ಕುಡಿದು, ಕಮಲದೆಲೆಯಲ್ಲಿ ಸಹೋದರರಿಗೆ ನೀರನ್ನು ತುಂಬಿಕೋಂಡು, ಹಿಂದಿರುಗಿ ದಡಕ್ಕೆ ಹತ್ತಿ ನಕುಲನು ಪರವಶನಾಗಿ ಮರಣಹೊಂದಿದನು. ನಕುಲನು ಬರುವುದು ತಡವಾಯಿತೆಂದು ಧರ್ಮಜನು ಸಹದೇವನನ್ನು ಕಳುಹಿಸಿದನು.

ಅರ್ಥ:
ಜಡಿ: ತುಂಬು; ಅಳ್ಳೆ: ಪಕ್ಕೆ; ಕೊರಳು: ಗಂಟಲು; ಕುಡಿ: ಪಾನಮಾಡು; ಉದಕ: ನೀರು; ಅಬುಜ: ತಾವರೆ; ಎಲೆ: ಪರ್ಣ; ಹಿಡಿದು: ಗ್ರಹಿಸು; ಅನಿಬರಿಗೆ: ಅಷ್ಟು ಜನರಿಗೆ; ಅಮಳ: ನಿರ್ಮಲ; ಜಲ: ನೀರು; ಮರಳಿ: ಹಿಂದಿರುಗು; ನಿಮಿಷ: ಕ್ಷಣಮಾತ್ರ; ತಡಿ: ದಡ; ಅಡರು: ಮೇಲಕ್ಕೆ ಹತ್ತು; ಧೊಪ್ಪನೆ: ಜೋರಾಗಿ; ಅವನಿ: ಭೂಮಿ; ಕೆಡೆ: ಬೀಳು, ಕುಸಿ; ಪರವಶ: ಮೂರ್ಛೆ; ತಡೆ: ತಡ, ವಿಳಂಬ; ಅಟ್ಟು: ಬೆನ್ನುಹತ್ತಿ ಹೋಗು; ನೃಪತಿ: ರಾಜ;

ಪದವಿಂಗಡಣೆ:
ಜಡಿಯಲ್+ಎರಡ್+ಅಳ್ಳೆಗಳು+ ಕೊರಳೈ
ಕುಡಿದನ್+ಉದಕವನ್+ಅಬುಜದ್+ಎಲೆಯಲಿ
ಹಿಡಿದನ್+ಅನಿಬರಿಗ್+ಅಮಳ +ಜಲವನು +ಮರಳಿ +ನಿಮಿಷದಲಿ
ತಡಿಯನ್+ಅಡರಿದು +ಧೊಪ್ಪನ್+ಅವನಿಗೆ
ಕೆಡೆದು +ಪರವಶನಾದನ್+ಇತ್ತಲು
ತಡೆದನ್+ಏಕೆಂದ್+ಅಟ್ಟಿದನು +ಸಹದೇವನನು +ನೃಪತಿ

ಅಚ್ಚರಿ:
(೧) ಉದಕ, ಜಲ – ಸಮನಾರ್ಥಕ ಪದ
(೨) ೨ನೇ ಸಾಲು ಒಂದೇ ಪದವಾಗಿರುವುದು – ಕುಡಿದನುದಕವನಬುಜದೆಲೆಯಲಿ

ಪದ್ಯ ೩೨: ಕೃಷ್ಣನನ್ನು ಕಂಡು ಪಾಂಡವರು ಏನು ಮಾಡಿದರು?

ಮುಗುಳು ನಗೆಗಳ ಹೊಂಗುವಂಗದ
ನಗೆ ಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ (ಅರಣ್ಯ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರ ಮುಖಗಳು ಮ್ಗುಳು ನಗೆಯಿಂದ ಅರಳಿದವು, ದೇಹವು ಉತ್ಸಾಹ ಭರಿತವಾದವು, ಕಣ್ಣುಗಳಲ್ಲಿ ಆನಂದಬಾಷ್ಪಗಳು ಉದುರಿದವು. ಹರ್ಷವು ಮೈದುಂಬಿತು. ಭಕ್ತಿ ಪರವಶರಾದರು, ಅವರು ಮುಗ್ಧಭಾವದಿಂದ ಧೌಮ್ಯನೇ ಮೊದಲಾದವರೊಡನೆ ಶ್ರೀಕೃಷ್ಣನಿಗೆ ನಮಿಸಿದರು.

ಅರ್ಥ:
ಮುಗುಳು ನಗೆ: ಮಂದಸ್ಮಿತ; ಹೊಂಗು: ಉತ್ಸಾಹ, ಹುರುಪು; ಅಂಗ: ಅವಯವ; ನಗೆ: ಸಂತಸ; ಮೊಗ: ಮುಖ; ಆನಂದ: ಹರ್ಷ; ಬಿಂದು: ಹನಿ, ತೊಟ್ಟು; ಒಗು: ಹೊರಹೊಮ್ಮುವಿಕೆ; ಕಂಗಳು: ನಯನ; ಹರುಷ: ಆನಂದ; ಸ್ಪಂದ: ಮಿಡಿಯುವಿಕೆ; ಸಂಪುಟ: ಭರಣಿ, ಕರಂಡಕ; ಬಗೆ: ಆಲೋಚನೆ, ಯೋಚನೆ; ಬೆರಸು: ಕೂಡಿರುವಿಕೆ; ಪರವಶ: ಬೇರೆಯವರಿಗೆ ಅಧೀನವಾಗಿರುವಿಕೆ; ಎಡೆಗೊಳ್ಳು: ಅವಕಾಶಮಾಡಿಕೊಡು; ಅಮಳ: ನಿರ್ಮಲ; ಜನ್ಮ: ಹುಟ್ಟು; ಮುಗುದ: ಕಪಟವನ್ನು ತಿಳಿಯದವನು; ಎರಗು: ನಮಸ್ಕರಿಸು; ಆದಿ: ಮುಂತಾದ; ಸಹಿತ: ಜೊತೆ;

ಪದವಿಂಗಡಣೆ:
ಮುಗುಳು +ನಗೆಗಳ +ಹೊಂಗುವ್+ಅಂಗದ
ನಗೆ +ಮೊಗದೊಳ್+ಆನಂದ +ಬಿಂದುಗಳ್
ಒಗುವ +ಕಂಗಳ +ಹೊತ್ತ +ಹರುಷಸ್ಪಂದ +ಸಂಪುಟದ
ಬಗೆಯ+ ಬೆರಸದ+ ಪರವಶದೊಳ್+ಆ
ನಗೆಯೊಳ್+ಎಡಗೊಂಡ್+ಅಮಳ +ಜನ್ಮದ
ಮುಗುದ +ಪಾಂಡವರ್+ಎರಗಿದರು +ಧೌಮ್ಯಾದಿಗಳು +ಸಹಿತ

ಅಚ್ಚರಿ:
(೧) ನಗೆಗಳ ವಿವರಣೆ – ಮುಗುಳು ನಗೆ, ಹೊಂಗುವಂಗದ ನಗೆ, ಮೊಗದೊಳಾನಂದ, ಹೊತ್ತ ಹರುಷಸ್ಪಂದ

ಪದ್ಯ ೩೦:ದುರ್ಯೋಧನನನ್ನು ಪಾಳೆಯಕ್ಕೆ ಹೇಗೆ ತಂದರು?

ಇತ್ತ ಪರವಶವಾದ ರಾಯನ
ತೆತ್ತಿಗರು ದಂಡಿಗೆಯೊಳೀತನ
ನೆತ್ತಿ ತಂದರು ಪಾಳೆಯಕೆ ದುಃಸ್ಥಿತಿಯ ಮೇಳೆಯಕೆ
ತೆತ್ತನೇ ಮಗನಸುವನಕಟ ಎ
ನುತ್ತ ಚಿಂತಾರಾಗದಲಿ ಕಡ
ಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ (ಕರ್ಣ ಪರ್ವ, ೨೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಕರ್ಣನ ಸಾವನ್ನು ನೋಡಿ ದುಃಖಸಾಗರದಲ್ಲಿ ಮೂರ್ಛಿತನಾಗಿದ್ದ ದುರ್ಯೋಧನನನ್ನು ಪಲ್ಲಕ್ಕಿಯಲ್ಲಿ ಅವ್ಯವಸ್ಥೆಯಲ್ಲಿ ಕೂಡಿದ್ದ ಕೌರವರ ಪಾಳೆಯಕ್ಕೆ ತಂದರು, ಸೂರ್ಯನು ತನ್ನ ಮಗನ ಸಾವನ್ನು ವೀಕ್ಷಿಸಿ ದುಃಖಭರಿತನಾಗಿ ನನ್ನ ಮಗನು ದೇಹವನ್ನು ಬಿಟ್ಟನೇ ಎಂದು ಚಿಂತಿಸುತ್ತಾ ಸಮುದ್ರದಲ್ಲಿ ಧುಮುಕಲು ಹೋದನು.

ಅರ್ಥ:
ಪರವಶ:ಬೇರೆಯವರಿಗೆ ಅಧೀನವಾಗಿರುವಿಕೆ, ಅಧೀನತೆ; ರಾಯ: ರಾಜ; ತೆತ್ತು:ಸಂಬಂಧಿಸಿರು; ದಂಡಿಗೆ: ಪಲ್ಲಕ್ಕಿ; ಎತ್ತು: ಮೇಲಕ್ಕೆತ್ತು; ತಂದರು: ಬರೆಮಾಡು; ಪಾಳೆ: ಬಿಡಾರ; ದುಃಸ್ಥಿತಿ: ಅವ್ಯವಸ್ಥೆ; ಮೇಳಯ: ಗುಂಪು; ತೆತ್ತು: ಬಿಡು; ಮಗ: ಸುತ; ಅಸು: ಪ್ರಾಣ; ಅಕಟ: ಅಯ್ಯೋ; ಚಿಂತೆ; ಯೋಚನೆ; ಕಡಲು: ಸಾಗರ; ಹಾಯ್ದು: ಜಾರು, ಲಂಘಿಸು; ಬಿಸುಟ: ಹೊರಹಾಕು; ಅಂಬುಜ: ಕಮಲ; ಅಂಬುಜಮಿತ್ರ: ಸೂರ್ಯ; ಅಂಬರ: ಗಗನ;

ಪದವಿಂಗಡಣೆ:
ಇತ್ತ +ಪರವಶವಾದ +ರಾಯನ
ತೆತ್ತಿಗರು+ ದಂಡಿಗೆಯೊಳ್+ಈತನನ್
ಎತ್ತಿ +ತಂದರು +ಪಾಳೆಯಕೆ +ದುಃಸ್ಥಿತಿಯ +ಮೇಳೆಯಕೆ
ತೆತ್ತನೇ+ ಮಗನ್+ಅಸುವನ್+ಅಕಟ+ ಎ
ನುತ್ತ +ಚಿಂತಾರಾಗದಲಿ +ಕಡ
ಲತ್ತ +ಹಾಯ್ದನು +ಬಿಸುಟನ್+ಅಂಬುಜಮಿತ್ರನ್+ಅಂಬರವ

ಅಚ್ಚರಿ:
(೧) ಸೂರ್ಯನನ್ನು ಅಂಬುಜಮಿತ್ರ ಎಂದು ಕರೆದಿರುವುದು
(೨) ಸೂರ್ಯಾಸ್ತವಾಯಿತು ಎಂದು ಹೇಳಲು – ಕಡಲತ್ತ ಹಾಯ್ದನು ಬಿಸುಟನಂಬುಜಮಿತ್ರನಂಬರವ
(೩) ಕೌರವರ ಪಾಳೆಯವನ್ನು ವಿವರಿಸುವ ಪದ – ದುಃಸ್ಥಿತಿಯ ಮೇಳೆಯಕೆ
(೪) ಚಿಂತೆಯಲ್ಲೂ ಸಂಗೀತವನ್ನು ಹುಡುಕುವ ಕವಿಯ ಪದ ಪ್ರಯೋಗ – ಚಿಂತಾರಾಗ