ಪದ್ಯ ೧೪: ದ್ರೋಣನು ಯುದ್ಧಕ್ಕೆ ಹೇಗೆ ತಯಾರಾದನು?

ವಿನುತ ಸಂಧ್ಯಾವಂದನಾದಿಯ
ನನುಕರಿಸಿ ಹರಿಪದ ಪಯೋಜವ
ನೆನೆದು ವಿರಚಿತ ದೇವವಿಪ್ರಾನಳ ಸಮಾರ್ಚನನು
ಕನಕ ಕವಚವ ತೊಟ್ಟು ಗಡ್ಡದ
ಘನತೆಯನು ಗಂಟಿಕ್ಕಿ ವರಕಾಂ
ಚನಮಯದ ಯಜ್ಞೋಪವೀತವನಿಳುಹಿದನು ದ್ರೋಣ (ದ್ರೋಣ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಎದ್ದು ಸ್ನಾನ ಸಂಧ್ಯಾವಂದನೆ ಮೊದಲಾದವನ್ನು ಮಾದಿ, ಶ್ರೀಕೃಷ್ಣನ ಪಾದ ಕಮಲಗಳನ್ನು ಸ್ಮರಿಸಿದನು. ದೇವತೆಗಳು ಬ್ರಾಹ್ಮಣರನ್ನು ಅರ್ಚಿಸಿದನು. ಹೇಮ ಕವಚವನ್ನು ಧರಿಸಿ, ಗಡ್ಡವನ್ನು ಗಂಟಿಟ್ಟು, ಬಂಗಾರದ ಯಜ್ಞೋಪವೀತವನ್ನು ಕೆಳಗಿಳಿಸಿದನು.

ಅರ್ಥ:
ವಿನುತ: ನಿರ್ಮಲ; ಸಂಧ್ಯಾವಂದನ: ಸಂಧ್ಯೆಯ ಕಾಲದ ಪೂಜೆ; ಆದಿ: ಮುಂತಾದ; ಅನುಕರಿಸು: ಪ್ರತಿಫಲ ಕೊಡು; ಹರಿಪದ: ಕೃಷ್ಣನ ಪಾದ; ಪಯೋಜ: ಕಮಲ; ನೆನೆ: ಜ್ಞಾಪಿಸು, ಮನನ ಮಾದು; ವಿರಚಿತ: ನಿರ್ಮಿಸಿದ; ದೇವ: ಅಮರ; ವಿಪ್ರ: ಬ್ರಾಹ್ಮಣ; ಅರ್ಚಿಸು: ಪೂಜಿಸು; ಕನಕ: ಚಿನ್ನ; ಕವಚ: ಹೊದಿಕೆ; ತೊಟ್ಟು: ಧರಿಸು; ಗಡ್ಡ:ದವಡೆ; ಗಂಟು: ಸೇರಿಸಿ ಕಟ್ಟಿದುದು; ವರ: ಶ್ರೇಷ್ಠ; ಕಾಂಚನ: ಚಿನ್ನ; ಯಜ್ಞೋಪವೀತ: ಜನಿವಾರ; ಇಳುಹು: ಕೆಳಗೆ ಇಳಿಸು;

ಪದವಿಂಗಡಣೆ:
ವಿನುತ +ಸಂಧ್ಯಾವಂದನಾದಿಯನ್
ಅನುಕರಿಸಿ+ ಹರಿಪದ +ಪಯೋಜವ
ನೆನೆದು +ವಿರಚಿತ +ದೇವ+ವಿಪ್ರಾನಳ +ಸಮಾರ್ಚನನು
ಕನಕ +ಕವಚವ +ತೊಟ್ಟು +ಗಡ್ಡದ
ಘನತೆಯನು +ಗಂಟಿಕ್ಕಿ +ವರ+ಕಾಂ
ಚನಮಯದ +ಯಜ್ಞೋಪವೀತವನ್+ಇಳುಹಿದನು +ದ್ರೋಣ

ಅಚ್ಚರಿ:
(೧) ಪಾದಪದ್ಮ ಎಂದು ಹೇಳುವ ಪರಿ – ಪದಪಯೋಜ
(೨) ಕನಕ, ಕಾಂಚನ – ಚಿನ್ನದ ಸಮಾನಾರ್ಥಕ ಪದ

ಪದ್ಯ ೯: ಕೀಚಕನೇಕೆ ನಡುಗಿದನು?

ಕುಡಿತೆಗಂಗಳ ಚಪಳೆಯುಂಗುರ
ವಿಡಿಯನಡುವಿನ ನೀರೆ ಹಂಸೆಯ
ನಡೆಯ ನವಿಲಿನ ಮೌಳಿಕಾತಿ ಪಯೋಜ ಪರಿಮಳದ
ಕಡು ಚೆಲುವೆ ಬರಲವನು ತನು ನಡ
ನಡುಗಿನಿಂದನದಾವ ಹೆಂಗುಸು
ಪಡೆದಳೀ ಚೆಲುವಿಕೆಯನೆನುತಡಿಗಡಿಗೆ ಬೆರಗಾದ (ವಿರಾಟ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ಬೊಗಸೆಕಣ್ಣಿನ ಚೆಲುವೆ, ನಾಲ್ಕು ಬೆರಳುಗಳಿಂದ ಹಿಡಿಮಾಡಿದರೆ ಅಷ್ಟು ಚಿಕ್ಕ ನಡುವಿನ ಸುಂದರಿ, ಹಂಸಗಮನೆ, ನವಿಲಿನ ತಲೆಯಂತಹ ತಲೆಯುಳ್ಳವಳು, ಕಮಲಗಂಧಿನಿಯಾದ ಬಹಳ ಸುಂದರಿಯಾದ ದ್ರೌಪದಿಯು ಬರಲು, ಇನ್ನಾವ ಹೆಂಗಸು ಇವಳ ಸೌಂದರ್ಯವನ್ನು ಹೊಂದಲು ಸಾಧ್ಯ ಎನ್ನಿಸಿ ಕೀಚಕನು ನಡುಗಿದನು.

ಅರ್ಥ:
ಕುಡಿತೆ: ಬೊಗಸೆ, ಸೇರೆ; ಕಂಗಳು: ಕಣ್ಣು; ಚಪಲೆ: ಚಂಚಲ ಸ್ವಭಾವ; ಉಂಗುರ: ಬೆರಳಲ್ಲಿ ಧರಿಸುವ ಆಭರಣ; ವಿಡಿ: ಹಿಡಿ, ಗ್ರಹಿಸು; ನಡು: ಮಧ್ಯ; ನೀರೆ: ಸ್ತ್ರೀ, ಚೆಲುವೆ; ಹಂಸ: ಮರಾಲ; ನಡೆ: ಓಡಾಟ; ಮೌಳಿ: ಶಿರ; ನವಿಲು: ಮಯೂರ; ಕಾತಿ: ಗರತಿ; ಪಯೋಜ: ಕಮಲ; ಪರಿಮಳ: ಸುಗಂಧ; ಕಡು: ಬಹಳ; ಚೆಲುವು: ಅಂದ; ಬರಲು: ಆಗಮಿಸು; ತನು: ದೇಹ; ನಡುಗು: ಕಂಪಿಸು; ನಿಂದು: ನಿಲ್ಲು; ಹೆಂಗುಸು: ಸ್ತ್ರೀ; ಪಡೆ: ಹೊಂದು, ತಾಳು; ಚೆಲುವು: ಸೌಂದರ್ಯ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಬೆರಗು: ಆಶ್ಚರ್ಯ;

ಪದವಿಂಗಡಣೆ:
ಕುಡಿತೆ+ಕಂಗಳ +ಚಪಳೆ+ಉಂಗುರ
ವಿಡಿಯ+ನಡುವಿನ+ ನೀರೆ+ ಹಂಸೆಯ
ನಡೆಯ+ ನವಿಲಿನ+ ಮೌಳಿ+ಕಾತಿ +ಪಯೋಜ +ಪರಿಮಳದ
ಕಡು +ಚೆಲುವೆ +ಬರಲವನು +ತನು +ನಡ
ನಡುಗಿ+ನಿಂದನ್+ಅದಾವ +ಹೆಂಗುಸು
ಪಡೆದಳೀ +ಚೆಲುವಿಕೆಯನ್+ಎನುತ್+ಅಡಿಗಡಿಗೆ +ಬೆರಗಾದ

ಅಚ್ಚರಿ:
(೧) ದ್ರೌಪದಿಯ ಸೌಂದರ್ಯವನ್ನು ವಿವರಿಸುವ ಪರಿ – ಕುಡಿತೆಗಂಗಳ ಚಪಳೆ; ಉಂಗುರ ವಿಡಿಯನಡುವಿನ ನೀರೆ; ಹಂಸೆಯ ನಡೆಯ, ನವಿಲಿನ ಮೌಳಿಕಾತಿ, ಪಯೋಜ ಪರಿಮಳದ ಕಡು ಚೆಲುವೆ

ಪದ್ಯ ೩೫: ದ್ರೌಪದಿಯು ಹೇಗೆ ಆನಂದಿಸಿದಳು?

ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕವಾರಿಯೊ
ಳೊಬ್ಬುಳಿಯೊಳೊಡೆ ಹಾಯ್ದು ನಿಂದವು ನಯನವಾರಿಗಳು
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ (ಅರಣ್ಯ ಪರ್ವ, ೧೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಕಾಡುತ್ತಿದ್ದ ದುಃಖದ ಕೊಬ್ಬು ಮುರಿಯಿತು. ಅವಳು ಸಂತಸದಿಮ್ದ ಉಬ್ಬಿದಳು. ರೋಮಾಂಚನದ ಎಲ್ಲೆ ಮೀರಿ ಹೊಡೆದು ಕಣ್ಣುಗಳಲ್ಲಿ ಆನಂದಭಾಷ್ಮವಾಗಿ ನಿಮ್ದವು. ಸಭ್ಯತೆಯ ಬಳ್ಳಿ ಹೂ ಬಿಟ್ಟು, ಹರಡಿ ಹಣ್ಣಾದಂತೆ ತನ್ನ ದೇಹವನ್ನು ಶ್ರೀಕೃಷ್ಣನ ಪಾದಕಮಲಗಳಲ್ಲಿ ಈಡಾಡಿದಳು.

ಅರ್ಥ:
ಉಬ್ಬು: ಹಿಗ್ಗು; ಹರುಷ: ಸಂತಸ; ದುಗುಡ: ದುಃಖ; ಕೊಬ್ಬು: ಸೊಕ್ಕು, ಹಿಗ್ಗು; ಮುರಿ: ಸೀಳು; ಪುಳುಕ: ಮೈನವಿರೇಳುವಿಕೆ, ರೋಮಾಂಚನ; ಉಬ್ಬುಳಿ: ಹೆಚ್ಚು; ಉಳಿ: ಅವಿತುಕೊ; ಒಡೆ: ಸೀಳು, ಬಿರಿ; ಹಾಯಿ: ಮೇಲೆಬೀಳು, ಚಾಚು; ನಿಂದವು: ನಿಲ್ಲು; ನಯನ: ಕಣ್ಣು; ವಾರಿ: ನೀರು; ಸಭ್ಯತೆ: ಶಿಷ್ಟಾಚಾರ; ಲತೆ: ಬಳ್ಳಿ; ಹೂತ: ಹೂಬಿಟ್ಟ; ಹಸರು: ವ್ಯಾಪಿಸು, ಹಬ್ಬಿಸು; ಹಬ್ಬು: ಹರಡು, ವ್ಯಾಪಿಸು; ಫಲ: ಪ್ರಯೋಜನ, ಫಲಿತಾಂಶ; ಕಾಯ: ದೇಹ; ಈಡಾಡು: ಒಗೆ, ಚೆಲ್ಲು; ಹರಿ: ಕೃಷ್ಣ; ಪದ: ಪಾದ, ಚರಣ; ಪಯೋಜ: ಕಮಲ;

ಪದವಿಂಗಡಣೆ:
ಉಬ್ಬಿದಳು +ಹರುಷದಲಿ +ದುಗುಡದಕ್
ಉಬ್ಬು +ಮುರಿದುದು +ಪುಳಕ+ವಾರಿಯೊಳ್
ಉಬ್ಬ್+ಉಳಿಯೊಳ್+ಒಡೆ +ಹಾಯ್ದು +ನಿಂದವು +ನಯನ+ವಾರಿಗಳು
ಸಭ್ಯತಾಲತೆ +ಹೂತು +ಹಸರಿಸಿ
ಹಬ್ಬಿ +ಫಲವಾದಂತೆ +ಕಾಯವನ್
ಇಬ್ಬರದಲ್+ಈಡಾಡಿದಳು +ಹರಿ+ಪದ+ಪಯೋಜದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಭ್ಯತಾಲತೆ ಹೂತು ಹಸರಿಸಿ ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ
(೨) ಪುಳಕವಾರಿ, ನಯನವಾರಿ – ಪದಗಳ ಬಳಕೆ

ಪದ್ಯ ೨೧: ಧರ್ಮರಾಯನು ಕೃಷ್ಣನನ್ನು ಕಂಡಾಗ ಹೇಳಿದ ಮಾತುಗಳಾವುವು?

ಇದಿರುವಂದನು ಧರ್ಮಸುತ ಹರಿ
ಪದ ಪಯೋಜದೊಳೆರಗಿದನು ನಿನ
ಗಿದು ವಿನೋದವಲೇ ವಿಮುಕ್ತಗೆ ಭಕ್ತ ಸಂತರಣ
ಕುದಿದು ಮರುಗಿದವರಸಿ ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ
ಸದನವಖಿಳಾಮ್ನಾಯ ನಿಕರವನೇಡಿಸುವದೆಂದ (ಸಭಾ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧರ್ಮರಾಜನು ಶ್ರೀಕೃಷ್ಣನ ಮುಂದೆ ಬಂದು, ಅವನ ಪಾದಾರವಿಂದಗಳಿಗೆ ನಮಸ್ಕರಿಸಿ, “ಸದಾ ಮುಕ್ತನಾಗಿರುವ ನಿನಗೆ, ನಿನ್ನ ಭಕ್ತರ ರಕ್ಷಣೆ ವಿನೋದವಲ್ಲವೇ? ಭಕ್ತರನ್ನು ಸಂತೈಸುವಉದು, ಪಾರುಮಾಡುವುದು ನಿನ್ನ ಲೀಲೆಯಲ್ಲವೇ? ನಿನ್ನನ್ನು ಹುಡುಕಿ ನಿನ್ನನ್ನು ಕಾಣದೆ ಶೃತಿಗಳು ದುಃಖಿಸುತ್ತಿವೆ. ನೀನೆ ನಮ್ಮ ಮನೆಯಲ್ಲಿರುವುದರಿಂದ, ನಮ್ಮ ಮನೆಯು ಶೃತಿಗಳನ್ನು ಅಣಕಿಸುತ್ತಿವೆ, ಎಂದು ಹೇಳಿದನು.

ಅರ್ಥ:
ಇದಿರು: ಎದುರು; ಇದಿರುವಂದು: ಎದುರು ಬಂದು; ಪದ: ಪಾದ; ಪಯ: ನೀರು; ಪಯೋಜ: ಕಮಲ; ಎರಗು: ನಮಸ್ಕರಿಸು; ವಿನೋದ: ಸಂತೋಷ, ಹಾಸ್ಯ; ವಿಮುಕ: ಮುಕ್ತನಾಗಿರುವ; ಭಕ್ತ: ಆರಾಧಕ; ಸಂತರಿಸು: ಪಾರುಮಾಡು; ಕುದಿ: ಸಂಕಟ; ಮರುಗು:ತಳಮಳ; ಅರಸು: ಹುಡುಕು; ಕಾಣದೆ: ದೊರಕದೆ, ಸಿಗದೆ; ಶ್ರುತಿ: ವೇದ; ಸದನ: ಮನೆ; ಅಖಿಳ: ಎಲ್ಲಾ; ಆಮ್ನಾಯ: ವೇದ, ಶೃತಿ; ನಿಕರ: ಗುಂಪು, ಜೊತೆ; ಏಡಿಸು: ಅವಹೇಳನ ಮಾಡು, ನಿಂದಿಸು;

ಪದವಿಂಗಡಣೆ:
ಇದಿರು+ವಂದನು +ಧರ್ಮಸುತ +ಹರಿ
ಪದ +ಪಯೋಜದೊಳ್+ಎರಗಿದನು+ ನಿನ
ಗಿದು +ವಿನೋದವಲೇ +ವಿಮುಕ್ತಗೆ+ ಭಕ್ತ +ಸಂತರಣ
ಕುದಿದು +ಮರುಗಿದವರಸಿ +ನಿನ್ನಯ
ಪದವ +ಕಾಣದೆ +ಶ್ರುತಿಗಳ್+ಎಮ್ಮಯ
ಸದನವ್+ಅಖಿಳ +ಆಮ್ನಾಯ +ನಿಕರವನ್+ಏಡಿಸುವದೆಂದ

ಅಚ್ಚರಿ:
(೧) ನಿನ್ನ ಆಗಮನದಿಂದ ಮನೆಯೇ ಶೃತಿಗಳನ್ನು ಅವಹೇಳನ ಮಾಡುತ್ತಿವೆ ಎಂದು ಹೇಳಿರುವುದು – ನಿನ್ನಯ
ಪದವ ಕಾಣದೆ ಶ್ರುತಿಗಳೆಮ್ಮಯ ಸದನವಖಿಳಾಮ್ನಾಯ ನಿಕರವನೇಡಿಸುವದೆಂದ
(೨) ಕಮಲ ಪದಕ್ಕೆ ಪಯೋಜ ಎಂದು ಪ್ರಯೋಗ
(೩) ಪದ – ೨, ೫ ಸಾಲಿನ ಮೊದಲ ಪದ
(೪) ಆಮ್ನಾಯ, ಶೃತಿ – ವೇದ ಪದದ ಸಮನಾರ್ಥಕ ಪದಗಳು