ಎತ್ತಿದರು ಧರಣಿಪನ ಕಂಗಳೊ
ಳೊತ್ತಿದರು ಪನ್ನೀರನುಸುರಿನ
ತತ್ತಳವನಾರೈದರೊಯ್ಯನೆ ತಾಳವೃಂತದಲಿ
ಬಿತ್ತಿ ತಂಗಾಳಿಯನು ಶೋಕದ
ಹತ್ತಿಗೆಗೆ ಹೊರೆದೆಗೆದು ಮರವೆಯ
ಚಿತ್ತವನು ಚೇತರಿಸಿ ಮೆಲ್ಲನೆ ನುಡಿಸಿದನು ಮುನಿಪ (ಗದಾ ಪರ್ವ, ೧೧ ಸಂಧಿ, ೧೦ ಪದ್ಯ)
ತಾತ್ಪರ್ಯ:
ವ್ಯಾಸರು ಧೃತರಾಷ್ಟ್ರನನ್ನು ಎತ್ತಿ, ಪನ್ನೀರಿನಿಂದ ಅವನ ಕಣ್ತೊಳೆದು, ಬದುಕಿರುವನೋ ಇಲ್ಲವೋ ಎಂದು ಉಸಿರನ್ನು ಪರೀಕ್ಷಿಸಿ ತಾಳೆಯ ಬೀಸಣಿಕೆಯಿಂದ ತಂಗಾಳಿಯನ್ನು ಬೀಸಿದರು. ಆಗ ಧೃತರಾಷ್ಟ್ರನು ಶೋಕದ ಮೂರ್ಛೆಯಿಂದ ಹೊರ ಬಂದು, ಮನಸ್ಸನ್ನು ಸಮಾಧಾನಕ್ಕೆ ತಂದುಕೊಂಡನು. ವ್ಯಾಸರು ಅವನಲ್ಲಿ ಹೀಗೆ ನುಡಿದರು.
ಅರ್ಥ:
ಎತ್ತು: ಮೇಲೇಳು; ಧರಣಿಪ: ರಾಜ; ಕಂಗಳು: ಕಣ್ಣು, ನಯನ; ಒತ್ತು: ಮುತ್ತು, ಸ್ಪರ್ಶ; ಪನ್ನೀರು: ತಂಪಾದ ನೀರು; ಉಸುರು: ಪ್ರಾಣ; ತತ್ತ: ಹೊಂದಿದ; ವೃಂತ: ಎಲೆ, ಹೂ, ಹಣ್ಣುಗಳ ತೊಟ್ಟು, ಚೂಚುಕ; ತಾಳ: ತಾಳೆಗರಿ; ಬಿತ್ತು: ಉಂಟುಮಾಡು; ತಂಗಾಳಿ: ತಂಪಾದ ಗಾಳಿ; ಶೋಕ: ದುಃಖ; ಹತ್ತಿ: ತೂಲ; ಹೊರೆ: ಭಾರ; ತೆಗೆ: ಹೊರತರು; ಮರವೆ: ಜ್ಞಾಪಕದಿಂದ ದೂರವಾಗು; ಚಿತ್ತ: ಮನಸ್ಸು; ಚೇತರಿಸು: ಎಚ್ಚರಗೊಳಿಸು; ಮೆಲ್ಲನೆ:ನಿಧಾನ; ನುಡಿ: ಮಾತಾಡು; ಮುನಿಪ: ಋಷಿ;
ಪದವಿಂಗಡಣೆ:
ಎತ್ತಿದರು+ ಧರಣಿಪನ+ ಕಂಗಳೊಳ್
ಒತ್ತಿದರು +ಪನ್ನೀರನ್+ಉಸುರಿನ
ತತ್ತಳವನ್+ಆರೈದರ್+ಒಯ್ಯನೆ+ ತಾಳ+ವೃಂತದಲಿ
ಬಿತ್ತಿ+ ತಂಗಾಳಿಯನು +ಶೋಕದ
ಹತ್ತಿಗೆಗೆ +ಹೊರೆದೆಗೆದು +ಮರವೆಯ
ಚಿತ್ತವನು +ಚೇತರಿಸಿ +ಮೆಲ್ಲನೆ +ನುಡಿಸಿದನು +ಮುನಿಪ
ಅಚ್ಚರಿ:
(೧) ತ ಕಾರದ ಜೋಡಿ ಪದ – ತತ್ತಳವನಾರೈದರೊಯ್ಯನೆ ತಾಳವೃಂತದಲಿ
(೨) ಸಮಾಧಾನ ಪಡಿಸುವ ಪರಿ – ಬಿತ್ತಿ ತಂಗಾಳಿಯನು ಶೋಕದ ಹತ್ತಿಗೆಗೆ ಹೊರೆದೆಗೆದು