ಪದ್ಯ ೧೫: ಪದ್ಮವ್ಯೂಹದ ಮೊದಲ ಸಾಲು ಏನಾಯಿತು?

ಎಸಳ ಮೊನೆ ಮೋಹರದ ಸಂದಣಿ
ಯುಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಸಲು ಮೊಳಗಿದನು ಪಾರ್ಥಕುಮಾರನಳವಿಯಲಿ (ದ್ರೋಣ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪದ್ಮವ್ಯೂಹದ ತುದಿಯ ದಳದ ಸೈನ್ಯವು ನಾಶವಾಯಿತು. ಕೇಸರಾಕೃತಿಯಲ್ಲಿ ನಿಂತ ವೀರರು ಆಕಾಶಮಾರ್ಗದಲ್ಲಿ ನಡೆದರು. ಕರ್ಣಿಕೆಯನ್ನು ಕಾದುಕೊಳ್ಳುವ ರಾಜರು ಇಲ್ಲವಾದರು ದುರ್ಯೋಧನನ ನೆಲೆಯ ಮೇಲೆ ಅಭಿಮನ್ಯುವು ಗರ್ಜಿಸುತ್ತಾ ನುಗ್ಗಿದನು.

ಅರ್ಥ:
ಎಸಳು: ಹೂವಿನ ದಳ; ಮೊನೆ: ತುದಿ; ಮೋಹರ: ಯುದ್ಧ; ಸಂದಣಿ: ಗುಂಪು; ಉಸಿರು: ಗಾಳಿ; ಉಳಿ: ಮಿಕ್ಕ; ಕೇಸರಾಕೃತಿ: ಸಿಂಹದ ರೂಪ; ಆಕೃತಿ: ರೂಪ; ಅಸಮ: ಸಮವಲ್ಲದ; ವೀರ: ಶೂರ; ಪಥಿಕ: ದಾರಿಗ, ಪ್ರಯಾಣಿಕ; ಗಗನ: ಆಗಸ; ಮಾರ್ಗ: ದಾರಿ; ನುಸುಳು: ನುಣುಚಿಕೊಳ್ಳುವಿಕೆ; ಕರ್ಣಿಕೆ: ಕಮಲದ ಮಧ್ಯ ಭಾಗ, ಬೀಜಕೋಶ; ಕಾಹು: ಕಾಪಾಡು; ವಸುಮತೀಶ: ರಾಜ; ರಾಯ: ರಾಜ; ನೆಲೆ: ಭೂಮಿ; ಎಸಗು: ಕೆಲಸ, ಉದ್ಯೋಗ; ಮೊಳಗು: ಧ್ವನಿ, ಸದ್ದು; ಕುಮಾರ: ಪುತ್ರ; ಅಳವಿ: ಯುದ್ಧ;

ಪದವಿಂಗಡಣೆ:
ಎಸಳ+ ಮೊನೆ +ಮೋಹರದ +ಸಂದಣಿ
ಉಸಿರನ್+ಉಳಿದುದು +ಕೇಸರಾಕೃತಿ
ಅಸಮ +ವೀರರು +ಪಥಿಕರಾದರು+ ಗಗನಮಾರ್ಗದಲಿ
ನುಸುಳಿದರು +ಕರ್ಣಿಕೆಯ +ಕಾಹಿನ
ವಸುಮತೀಶರು+ ರಾಯನರನ್+ಎಲೆ
ದೆಸೆಗೆಸಲು +ಮೊಳಗಿದನು +ಪಾರ್ಥಕುಮಾರನ್+ಅಳವಿಯಲಿ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕೇಸರಾಕೃತಿಯಸಮ ವೀರರು ಪಥಿಕರಾದರು ಗಗನಮಾರ್ಗದಲಿ

ಪದ್ಯ ೩೭: ಬಾಣಗಳು ಅರ್ಜುನನ ಮೇಲೆ ಹೇಗೆ ಆಕ್ರಮಣ ಮಾಡಿದವು?

ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ (ಭೀಷ್ಮ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣಗಲ ಕಾಟಕ್ಕೆ ಹನುಮಮ್ತನು ಗಾಯಗೊಂಡನು. ಶ್ರೀಕೃಷ್ಣನು ತುಂಬಾನೊಂದು ಕೋಪಗೊಂಡನು. ಬಾಣಗಳೆಂಬ ಪ್ರಯಾಣಿಕರು ಅರ್ಜುನನ ದೇಹದೊಳಗೆ ದಾರಿಮಾಡಿಕೊಂಡು ಹೋದರು. ಕೂರಂಬುಗಳು ಮುತ್ತಿ ಮೈಕೊಡವಿ ಮುಗ್ಗುರಿಸಿ ಮುಖತಿರುವಿ ಹಿಂದಕ್ಕೆ ಹೋದವು.

ಅರ್ಥ:
ಹನುಮ: ಆಂಜನೇಯ; ಮಸೆ: ಒರಸು; ಹೋರಾಡು, ಕಾದು; ಮುರಾಂತಕ: ಕೃಷ್ಣ; ಕನಲು: ಸಿಟ್ಟಿಗೇಳು, ಕೆರಳು; ಕದುನೊಂದು: ತುಂಬ ನೋವುನ್ನುಂಡು; ತನು: ದೇಹ; ಹೆಬ್ಬಟ್ಟೆ: ದೊಡ್ಡದಾದ ದಾರಿ; ಬಾಣ: ಸರಳು; ಪಥಿಕ: ದಾರಿಗ, ಪ್ರಯಾಣಿಕ; ಮೊನೆ: ಚೂಪಾದ; ಅಲಗು: ಆಯುಧದ ಮೊನೆ, ಕತ್ತಿ; ಮುಕ್ಕು: ನಾಶಮಾಡು,ತಿಣುಕು; ರಥ: ಬಂಡಿ; ತನಿ: ಚೆನ್ನಾಗಿ ಬೆಳೆದುದು, ಹೆಚ್ಚಾಗು; ಕೊಡಹು: ಅಲ್ಲಾಡಿಸು; ಮುಗ್ಗು: ಬಾಗು, ಮಣಿ; ತೇಜಿ: ಕುದುರೆ; ಅನುವರ: ಯುದ್ಧ; ಮುಖ: ಆನನ; ತಿರುಹು: ಅಲೆದಾಡು, ಸುತ್ತು; ಕಲಿ: ಶೂರ; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಹನುಮ +ಮಸೆಗಂಡನು+ ಮುರಾಂತಕ
ಕನಲಿದನು +ಕಡುನೊಂದು +ಪಾರ್ಥನ
ತನುವಿನಲಿ+ ಹೆಬ್ಬಟ್ಟೆಯಾದುದು +ಬಾಣ+ಪಥಿಕರಿಗೆ
ಮೊನೆ+ಅಲಗು +ಮುಕ್ಕುರುಕೆ +ರಥವನು
ತನಿ+ಕೊಡಹಿ+ ಮುಗ್ಗಿದವು +ತೇಜಿಗಳ್
ಅನುವರಕೆ+ ಮುಖದ್+ಇರುಹಿದವು +ಕಲಿ +ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ರೂಪಕದ ಪ್ರಯೋಗ – ಬಾಣದ ಹೆದ್ದಾರಿ ಎಂದು ವಿವರಿಸುವ ಪರಿ – ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ