ಇಳಿದು ಸರಸಿಯ ಮಧ್ಯದಲಿ ನೃಪ
ತಿಲಕ ನಿಂದನು ಪಾಳೆಯವ ನೀ
ಕಳುಹು ಗಜಪುರಿಗೆನಲು ಬಂದೆನು ಪಥದ ಮಧ್ಯದಲಿ
ಸುಳಿವ ಕಂಡೆನು ಕೃಪನನಾ ಗುರು
ಗಳ ಮಗನ ಕೃತವರ್ಮಕನನಂ
ದುಳಿದ ಮೂವರ ಕಳುಹಿದೆನು ಕುರುಪತಿಯ ಹೊರೆಗಾಗಿ (ಗದಾ ಪರ್ವ, ೪ ಸಂಧಿ, ೨೮ ಪದ್ಯ)
ತಾತ್ಪರ್ಯ:
ದುರ್ಯೋಧನನು ಸರೋವರದ ಮಧ್ಯದಲ್ಲಿ ನಿಂತು, ಪಾಳೆಯವನ್ನು ಹಸ್ತಿನಾಪುರಕ್ಕೆ ಕಳುಹಿಸು ಎನಲು, ನಾನಿಲ್ಲಿಗೆ ಬಂದೆನು. ದಾರಿಯ ನಡುವೆ ಕೃಪಾಚಾರ್ಯ, ಅಶ್ವತ್ಥಾಮ, ಕೃತವರ್ಮರನ್ನು ನೋಡಿದೆ, ಅವರನ್ನು ಕೌರವನ ರಕ್ಷಣೆಗಾಗಿ ದೊರೆಯ ಬಳಿಗೆ ಕಳುಹಿಸಿದೆ ಎಂದು ಸಂಜಯನು ಹೇಳಿದನು.
ಅರ್ಥ:
ಇಳಿ: ಕೆಳಗೆ ಹೋಗು; ಸರಸಿ: ಸರೋವರ; ಮಧ್ಯ: ನಡುವೆ; ನೃಪ: ರಾಜ; ತಿಲಕ: ಶ್ರೇಷ್ಠ; ನಿಂದು: ನಿಲ್ಲು; ಪಾಳೆಯ: ಬಿಡಾರ; ಕಳುಹು: ತೆರಳು; ಗಜಪುರಿ: ಹಸ್ತಿನಾಪುರ; ಬಂದು: ಆಗಮಿಸು; ಪಥ: ಮಾರ್ಘ; ಮಧ್ಯ: ನಡುವೆ; ಸುಳಿ: ಕಾಣಿಸಿಕೊಳ್ಳು; ಕಂಡು: ನೋಡು; ಗುರು: ಆಚಾರ್ಯ; ಮಗ: ಸುತ; ಉಳಿದ: ಮಿಕ್ಕ; ಕಳುಹು: ಬೀಳ್ಕೊಡು; ಹೊರೆ: ರಕ್ಷಣೆ, ಆಶ್ರಯ;
ಪದವಿಂಗಡಣೆ:
ಇಳಿದು +ಸರಸಿಯ +ಮಧ್ಯದಲಿ +ನೃಪ
ತಿಲಕ +ನಿಂದನು +ಪಾಳೆಯವ +ನೀ
ಕಳುಹು +ಗಜಪುರಿಗ್+ಎನಲು +ಬಂದೆನು +ಪಥದ +ಮಧ್ಯದಲಿ
ಸುಳಿವ +ಕಂಡೆನು +ಕೃಪನನ್+ಆ+ ಗುರು
ಗಳ+ ಮಗನ+ ಕೃತವರ್ಮಕನನಂದ್
ಉಳಿದ +ಮೂವರ +ಕಳುಹಿದೆನು+ ಕುರುಪತಿಯ+ ಹೊರೆಗಾಗಿ
ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ನೃಪತಿಲಕ, ಕುರುಪತಿ