ಪತಿಯಳಿದ ಸತಿಯಿರವು ನಾಯಕ
ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ
ಕೃತಕವಲ್ಲಭಿಮನ್ಯುವಿಲ್ಲದೆ
ಕ್ಷಿತಿಪ ನಿನ್ನಾಸ್ಥಾನ ಮೆರೆಯದು
ಸುತನ ಸುದ್ದಿಯದೇನು ಮರುಗಿಸಬೇಡ ಹೇಳೆಂದ (ದ್ರೋಣ ಪರ್ವ, ೮ ಸಂಧಿ, ೧೮ ಪದ್ಯ)
ತಾತ್ಪರ್ಯ:
ಗಂಡನಿಲ್ಲದ ಹೆಂಡತಿ, ನಾಯಕರತ್ನವಿಲ್ಲದ ಪದಕ, ದೈವಸ್ತುತಿಯಿಲ್ಲದ ಕಾವ್ಯ ರಚನೆಯಂತೆ ಅಭಿಮನ್ಯುವಿಲ್ಲದ ನಿನ್ನ ಆಸ್ಥಾನ ಶೋಭಿಸದು, ಎಲೈ ರಾಜನೇ ನನ್ನ ಮಗನ ಸುದ್ದಿಯೇನೆಂದು ಹೆಳು ಎಂದು ಅರ್ಜುನನು ಬೇಡಿದನು.
ಅರ್ಥ:
ಪತಿ: ಗಂಡ; ಅಳಿ: ಸಾವು, ಇಲ್ಲದ; ಸತಿ: ಹೆಣ್ಣು, ಹೆಂಡತಿ; ನಾಯಕ: ಒಡೆಯ; ರತುನ: ರತ್ನ, ಮಣಿ; ಪದಕ: ಬಿಲ್ಲೆ; ದೈವ: ಭಗವಂತ; ಸ್ತುತಿ: ನಾಮಸ್ಮರಣೆ; ಕಾವ್ಯ: ಕವನ; ರಚನೆ: ನಿರ್ಮಿಸು; ಭಾವ: ಅಂತರ್ಗತ ಅರ್ಥ; ಕೃತಕ: ನೈಜವಲ್ಲದ; ಕ್ಷಿತಿಪ: ದೊರೆ, ರಾಜ; ಆಸ್ಥಾನ: ಓಲಗ; ಮೆರೆ: ಶೋಭಿಸು; ಸುತ: ಮಗ; ಸುದ್ದಿ: ವಿಚಾರ; ಮರುಗು: ತಳಮಳ, ಸಂಕಟ; ಹೇಳು: ತಿಳಿಸು;
ಪದವಿಂಗಡಣೆ:
ಪತಿಯಳಿದ +ಸತಿ+ಇರವು +ನಾಯಕ
ರತುನವಿಲ್ಲದ +ಪದಕ +ದೈವ
ಸ್ತುತಿಗಳಿಲ್ಲದ +ಕಾವ್ಯ +ರಚನಾ +ಭಾವದಂದದಲಿ
ಕೃತಕವಲ್+ಅಭಿಮನ್ಯುವಿಲ್ಲದೆ
ಕ್ಷಿತಿಪ +ನಿನ್ನಾಸ್ಥಾನ +ಮೆರೆಯದು
ಸುತನ +ಸುದ್ದಿಯದೇನು +ಮರುಗಿಸಬೇಡ +ಹೇಳೆಂದ
ಅಚ್ಚರಿ:
(೧) ಉಪಮಾನದ ಪ್ರಯೋಗ – ಪತಿಯಳಿದ ಸತಿಯಿರವು ನಾಯಕ ರತುನವಿಲ್ಲದ ಪದಕ ದೈವ
ಸ್ತುತಿಗಳಿಲ್ಲದ ಕಾವ್ಯ ರಚನಾ ಭಾವದಂದದಲಿ