ಹರಿದು ಹಿಡಿದನು ಮತ್ತೆ ನೀಲಾಂ
ಬರನ ಸೆರಗನು ನಿಮ್ಮ ಕುರುಪತಿ
ಚರಿಸಿದನಲಾ ಧರ್ಮವಿಸ್ತರವನು ವಿಭಾಡಿಸಿದೆ
ಕರಸಿ ಕಪಟದ್ಯೂತದಲಿ ನೃಪ
ವರನ ಸೋಲಿಸಿ ಪಟ್ಟದರಸಿಯ
ಕರಸಿ ಸುಲಿಸುವುದಾವ ಋಷಿಮತವೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೨ ಪದ್ಯ)
ತಾತ್ಪರ್ಯ:
ಶ್ರೀಕೃಷ್ಣನು ಅತಿವೇಗದಿಂದ ಹೋಗಿ ಬಲರಾಮನ ಸೆರಗನ್ನು ಹಿಡಿದು ನಿಲ್ಲಿಸಿದನು. ಅಣ್ಣಾ, ನಿಮ್ಮ ಕೌರವನು ಪಾಂಡವರನ್ನು ಕರೆಸಿ ಧರ್ಮವನ್ನು ಮೀರದೆ ಮೋಸದ ಜೂಜಿನಲ್ಲಿ ಯುಧಿಷ್ಠಿರನನ್ನು ಸೋಲಿಸಿ, ದ್ರೌಪದಿಯ ಸೀರೆಯನ್ನು ಸುಲಿಸಿದನೋ? ಇದು ಧರ್ಮವೆಂದು ಯಾವ ಋಷಿವಾಕ್ಯ ಹೇಳುತ್ತದೆ ಎಂದು ಪ್ರಶ್ನಿಸಿದನು.
ಅರ್ಥ:
ಹರಿ: ಓಡು, ಧಾವಿಸು; ಹಿಡಿ: ಗ್ರಹಿಸು; ನೀಲಾಂಬರ: ನೀಲಿ ಬಟ್ಟೆಯನ್ನು ಧರಿಸಿದವ (ಬಲರಾಮ); ಸೆರಗು: ಉತ್ತರೀಯ, ಬಟ್ಟೆಯ ತುದಿ; ಚರಿಸು: ನಡೆ; ಧರ್ಮ: ಧಾರಣೆ ಮಾಡಿದುದು; ವಿಸ್ತರ: ಹಬ್ಬುಗೆ, ವಿಸ್ತಾರ; ವಿಭಾಡಿಸು: ನಾಶಮಾಡು; ಕರಸು: ಬರೆಮಾಡು; ಕಪಟ: ಮೋಸ; ದ್ಯೂತ: ಪಗಡೆಯಾಟ, ಜೂಜು; ನೃಪ: ರಾಜ; ಸೋಲಿಸು: ಪರಾಭವಗೊಳಿಸು; ಪಟ್ಟದರಸಿ: ಪಟ್ಟದ ರಾಣಿ; ಸುಲಿಸು: ಬಿಚ್ಚಿಸು, ತೆಗೆಸು; ಋಷಿಮತ: ಒಳ್ಳೆಯ ವಿಚಾರ; ಅಸುರಾರಿ: ಕೃಷ್ಣ;
ಪದವಿಂಗಡಣೆ:
ಹರಿದು+ ಹಿಡಿದನು +ಮತ್ತೆ+ ನೀಲಾಂ
ಬರನ +ಸೆರಗನು +ನಿಮ್ಮ +ಕುರುಪತಿ
ಚರಿಸಿದನಲಾ +ಧರ್ಮ+ವಿಸ್ತರವನು +ವಿಭಾಡಿಸಿದೆ
ಕರಸಿ +ಕಪಟ+ದ್ಯೂತದಲಿ +ನೃಪ
ವರನ +ಸೋಲಿಸಿ +ಪಟ್ಟದರಸಿಯ
ಕರಸಿ+ ಸುಲಿಸುವುದಾವ +ಋಷಿಮತವ್ + ಎಂದನ್+ಅಸುರಾರಿ
ಅಚ್ಚರಿ:
(೧) ಬೇಗ ಎಂದು ಹೇಳುವ ಪರಿ – ಹರಿದು ಹಿಡಿದನು
(೨) ಬಲರಾಮನನ್ನು ನೀಲಾಂಬರ ಎಂದು ಕರೆದಿರುವುದು
(೩) ಕರಸಿ – ೪, ೬ ಸಾಲಿನ ಮೊದಲ ಪದ