ಪದ್ಯ ೪೨: ಅರ್ಜುನನ ಎಚ್ಚರಿಕೆ ಮಾತುಗಳು ಹೇಗಿದ್ದವು?

ಗರುಡಿಯಧಿಪತಿಯಾಣೆ ಕೃಷ್ಣನ
ಚರಣ ಸರಸಿಜದಾಣೆ ತ್ರಿಪುರವ
ನುರುಹಿದಭವನ ಪಾದ ಪಂಕಜದಾಣೆ ಮರೆಯೇಕೆ
ಸುರಪ ನೀನೇ ಕಳುಹದಿರ್ದೊಡೆ
ಪರಮ ಮುನಿ ದೂರ್ವಾಸ ನಿನ್ನನು
ನೆರಹಿದಂದವ ಮಾಡುವೆನು ಹರಿಕರುಣವುಂಟೆಮಗೆ (ಆದಿ ಪರ್ವ, ೨೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬಯಕೆಯನ್ನು ಈಡೇರಿಸದಿದ್ದರೆ ಏನು ಮಾಡಬಲ್ಲೆ ಎಂಬ ಎಚ್ಚರಿಕೆಯನ್ನೂ ಇಂದ್ರನಿಗೆ ಪತ್ರದಲ್ಲಿ ಬರದಿದ್ದನು. ವಿದ್ಯೆಕಲಿಸಿದ ಗುರುಗಳಾದ ದ್ರೋಣರ ಮೇಲಾಣೆ, ಕೃಷ್ನನ ಪಾದಪದ್ಮಗಳ ಮೇಲಾಣೆ, ತ್ರಿಪುರಗಳನ್ನು ಸಂಹರಿಸಿದ ಈಶ್ವರನ ಪಾದಕಮಲಗಳ ಮೇಲಾಣೆ, ನೀನು ನಾನು ಕೇಳಿದ ವಸ್ತುಗಳನ್ನು ಕಳಿಸದಿದ್ದರೆ, ಹಿಂದೆ ದೂರ್ವಾಸರು ನಿನ್ನ ಐಶ್ವರ್ಯವನ್ನು ನೀರಿನಲ್ಲದ್ದಿದ್ದಂತೆ ಮಾಡುತ್ತೇನೆ, ಶ್ರೀಹರಿಯ ಕೃಪಾಕಟಾಕ್ಷ ನಮ್ಮಮೇಲಿದೆ, ಎಂದು ಬರೆದಿದ್ದನು.

ಅರ್ಥ:
ಗರುಡಿ: ವ್ಯಾಯಾಮ ಶಾಲೆ; ಅಧಿಪತಿ: ರಾಜ, ಮುಖ್ಯಸ್ಥ; ಗರುಡಿಯಧಿಪತಿ: ದ್ರೋಣಾಚಾರ್ಯ; ಚರಣ: ಪಾದ; ಸರಸಿಜ: ಕಮಲ; ಆಣೆ: ಪ್ರಮಾಣ; ಉರು: ಶ್ರೇಷ್ಠ; ಪಾದ: ಚರಣ; ಪಂಕಜ: ಕಮಲ; ಮರೆ: ಗುಟ್ಟು, ರಹಸ್ಯ; ಸುರಪ: ದೇವೇಂದ್ರ; ಕಳುಹು: ಕಳಿಸು; ಪರಮ: ಶ್ರೇಷ್ಠ; ಮುನಿ: ಋಷಿ; ನೆರ: ಸಹಾಯ; ಮಾಡು: ನೆರವೇರಿಸು; ಹರಿ: ವಿಷ್ಣು; ಕರುಣ: ಕೃಪೆ; ಎಮಗೆ: ನಮಗೆ;

ಪದವಿಂಗಡಣೆ:
ಗರುಡಿ+ಅಧಿಪತಿ+ಯಾಣೆ +ಕೃಷ್ಣನ
ಚರಣ +ಸರಸಿಜದಾಣೆ +ತ್ರಿಪುರವನ್
ಉರುಹಿದಭವನ +ಪಾದ +ಪಂಕಜದಾಣೆ +ಮರೆಯೇಕೆ
ಸುರಪ +ನೀನೇ +ಕಳುಹದಿರ್ದೊಡೆ
ಪರಮ +ಮುನಿ +ದೂರ್ವಾಸ +ನಿನ್ನನು
ನೆರಹಿದಂದವ +ಮಾಡುವೆನು +ಹರಿಕರುಣವುಂಟೆಮಗೆ

ಅಚ್ಚರಿ:
(೧) ಆಣೆ: ೩ ಬಾರಿ ಪ್ರಯೋಗ
(೨) ಸರಸಿಜ, ಪಂಕಜ; ಚರಣ, ಪಾದ – ಸಮನಾರ್ಥಕ ಪದ