ಪದ್ಯ ೩೩: ಕುದುರೆಗಳ ಲಗಾಮನ್ನು ಯಾರು ಸರಿಪಡಿಸಿದರು?

ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ (ದ್ರೋಣ ಪರ್ವ, ೧೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ನೀರು ತುಂಬಿಸಿದ ಕೊಳದ ದಡದಲ್ಲಿ ಬಾಣಗಳಿಂದ ಒಂದು ಚಪ್ಪರವನ್ನು ಕಟ್ಟಿದನು. ಅರ್ಜುನನ ಸತ್ವಾತಿಶಯವನ್ನು ಹೊಗಳುತ್ತಾ ಶ್ರೀಕೃಷ್ಣನು ಕುದುರೆಗಳ ನೊಗವನ್ನು ಕಳಚಿ ಕಡಿವಾಣವನ್ನಿಳಿಸಿ, ಬೇರೆಯ ಲಗಾಮುಗಲನ್ನು ಕಟ್ಟಿ ಹಿಡಿಯಲು, ಕುದುರೆಗಳು ಎಡಬಲಕ್ಕೆ ಸ್ವತಮ್ತ್ರವಾಗಿ ತಿರುಗಾಡಿದವು.

ಅರ್ಥ:
ಕೊಳ: ಸರೋವರ; ತಡಿ: ದಡ, ತೀರ; ಹೂಡು: ಸಿದ್ಧಗೊಳ್ಳು; ಶರ: ಬಾಣ; ಚಪ್ಪರ: ಚಾವಣಿ, ಮೇಲ್ಕಟ್ಟು; ಬಲುಹು: ಬಲ, ಶಕ್ತಿ; ಕಂಡು: ನೋಡು; ಅಸುರಾರಿ: ಕೃಷ್ಣ; ಮೆಚ್ಚು: ಹೊಗಳು; ಅಡಿಗಡಿಗೆ: ಮತ್ತೆ ಮತ್ತೆ; ಹೊಗಳು: ಪ್ರಶಂಶಿಸು; ಕಳಚು: ಬೇರ್ಪಡಿಸು; ನೊಗ: ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ತೆಗೆ: ಹೊರತರು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಇಳುಹಿ: ಕೆಳಗಿಳಿಸು; ಪಿಡಿ: ಗ್ರಹಿಸು; ಪಾಡಿ: ನಾಡು, ಪ್ರಾಂತ್ಯ ; ಐದು: ಬಂದು ಸೇರು; ಮರಳು: ಹಿಂದಿರುಗು; ಎಡಬಲ: ಅಕ್ಕಪಕ್ಕ;

ಪದವಿಂಗಡಣೆ:
ಕೊಳನ +ತಡಿಯಲಿ +ಹೂಡಿದನು +ಶರ
ವಳಯದಲಿ +ಚಪ್ಪರವನ್+ಆತನ
ಬಲುಹ +ಕಂಡ್+ಅಸುರಾರಿ +ಮೆಚ್ಚಿದನ್+ಅಡಿಗಡಿಗೆ +ಹೊಗಳಿ
ಕಳಚಿ +ನೊಗನನು +ತೆಗೆದು +ಕಬ್ಬಿಯ
ನಿಳುಹಿ+ ಪಡಿ+ವಾಘೆಗಳ +ಸರಿದನು
ಕೊಳಿಸಿ+ ಪಿಡಿಯಲು +ಪಾಡಿಗೈದವು +ಮರಳಿದ್+ಎಡಬಲಕೆ

ಅಚ್ಚರಿ:
(೧) ಅಡಿಗಡಿ, ಎಡಬಲ – ಪದಗಳ ಬಳಕೆ

ಪದ್ಯ ೧೪: ಸಂಶಪ್ತಕರ ಸೈನ್ಯವು ಅರ್ಜುನನ ರಥವನ್ನು ಹೇಗೆ ಆವರಿಸಿತು?

ಕವಿದುದದುಭುತ ಬಲ ಮುರಾರಿಯ
ತಿವಿದರಡಗಟ್ಟಿದರು ತೇಜಿಯ
ಜವಗೆಡಿಸಿ ತಲೆಯಾರ ತಡೆದರು ತುಡುಕಿದರು ನೊಗವ
ಆವರನೊಂದೇ ನಿಮಿಷದಲಿ ಪರಿ
ಭವಿಸಿ ನಡೆತರೆ ಮುಂದೆ ಗುರುಸಂ
ಭವನ ರಥವಡಹಾಯ್ದುದವನೀಪಾಲ ಕೇಳೆಂದ (ಕರ್ಣ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸಂಜಯನು ಯುದ್ಧವನ್ನು ವಿವರಿಸುತ್ತಾ, ರಾಜ ಸಂಶಪ್ತಕರ ಸೈನ್ಯವು ಅರ್ಜುನನ ರಥವನ್ನು ಮುತ್ತಿತು ಅವರು ಅರ್ಜುನನ ಕುದುರೆಗಳ ವೇಗವನ್ನು ಕುಗ್ಗಿಸಿ, ಶ್ರೀಕೃಷ್ಣನನ್ನು ತಿವಿದು ರಥದ ನೊಗವನ್ನು ಹಿಡಿದರು. ಆದರೆ ಅರ್ಜುನನ ಕ್ಷಣಾರ್ಧದಲ್ಲಿ ಅವರನ್ನು ಸೋಲಿಸಿ ಮುಂದುವರೆಯಲು, ಅಶ್ವತ್ಥಾಮನು ಅರ್ಜುನನ ನಡುವೆ ಬಂದು ನಿಂತನು.

ಅರ್ಥ:
ಕವಿದು: ಆವರಿಸು; ಬಲ: ಸೈನ್ಯ; ಅದುಭುತ: ಆಶ್ಚರ್ಯ; ಮುರಾರಿ: ಕೃಷ್ಣ; ತಿವಿ: ಚುಚ್ಚು; ಅಡಗಟ್ಟು: ಮಧ್ಯ ಬಂದು, ತಡೆದು; ತೇಜಿ: ಕುದುರೆ; ಜವ: ವೇಗ; ಕುಗ್ಗಿಸು: ಕಡಿಮೆ ಮಾಡು; ತಲೆಯಾರು: ಕುದುರೆಗೆ ಕಟ್ಟುವ ನೊಗ; ತಡೆ: ನಿಲ್ಲಿಸು; ತುಡುಕು: ಬೇಗನೆ ಹಿಡಿಯುವುದು; ನೊಗ: ಬಂಡಿಯನ್ನಾಗಲಿ, ಎಳೆಯಲು ಕುದುರೆ ಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ನಿಮಿಷ: ಕ್ಷಣ; ಪರಿಭವ: ಸೋಲು; ನಡೆ: ಮುಂದೆ ಹೋಗು; ಮುಂದೆ: ಎದುರು; ಸಂಭವ: ಹುಟ್ಟಿದ; ರಥ: ಬಂಡಿ; ಅಡಹಾಯ್ದು: ತಡೆ; ಅವನೀಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕವಿದುದ್+ಅದುಭುತ +ಬಲ +ಮುರಾರಿಯ
ತಿವಿದರ್+ಅಡಗಟ್ಟಿದರು+ ತೇಜಿಯ
ಜವಗೆಡಿಸಿ +ತಲೆಯಾರ +ತಡೆದರು +ತುಡುಕಿದರು +ನೊಗವ
ಆವರನ್+ಒಂದೇ +ನಿಮಿಷದಲಿ +ಪರಿ
ಭವಿಸಿ+ ನಡೆತರೆ +ಮುಂದೆ +ಗುರುಸಂ
ಭವನ +ರಥವ್+ಅಡಹಾಯ್ದುದ್+ಅವನೀಪಾಲ +ಕೇಳೆಂದ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತಲೆಯಾರ ತಡೆದರು ತುಡುಕಿದರು
(೨) ಕೃಷ್ಣನು ಯುದ್ಧದಲ್ಲಿ ಪೆಟ್ಟನ್ನು ಅನುಭವಿಸಿದನು ಎಂದು ಹೇಳುವ ಪದ್ಯ – ಮುರಾರಿಯ
ತಿವಿದರ್