ಕೊಳನ ತಡಿಯಲಿ ಹೂಡಿದನು ಶರ
ವಳಯದಲಿ ಚಪ್ಪರವನಾತನ
ಬಲುಹ ಕಂಡಸುರಾರಿ ಮೆಚ್ಚಿದನಡಿಗಡಿಗೆ ಹೊಗಳಿ
ಕಳಚಿ ನೊಗನನು ತೆಗೆದು ಕಬ್ಬಿಯ
ನಿಳುಹಿ ಪಡಿವಾಘೆಗಳ ಸರಿದನು
ಕೊಳಿಸಿ ಪಿಡಿಯಲು ಪಾಡಿಗೈದವು ಮರಳಿದೆಡಬಲಕೆ (ದ್ರೋಣ ಪರ್ವ, ೧೦ ಸಂಧಿ, ೩೩ ಪದ್ಯ)
ತಾತ್ಪರ್ಯ:
ನೀರು ತುಂಬಿಸಿದ ಕೊಳದ ದಡದಲ್ಲಿ ಬಾಣಗಳಿಂದ ಒಂದು ಚಪ್ಪರವನ್ನು ಕಟ್ಟಿದನು. ಅರ್ಜುನನ ಸತ್ವಾತಿಶಯವನ್ನು ಹೊಗಳುತ್ತಾ ಶ್ರೀಕೃಷ್ಣನು ಕುದುರೆಗಳ ನೊಗವನ್ನು ಕಳಚಿ ಕಡಿವಾಣವನ್ನಿಳಿಸಿ, ಬೇರೆಯ ಲಗಾಮುಗಲನ್ನು ಕಟ್ಟಿ ಹಿಡಿಯಲು, ಕುದುರೆಗಳು ಎಡಬಲಕ್ಕೆ ಸ್ವತಮ್ತ್ರವಾಗಿ ತಿರುಗಾಡಿದವು.
ಅರ್ಥ:
ಕೊಳ: ಸರೋವರ; ತಡಿ: ದಡ, ತೀರ; ಹೂಡು: ಸಿದ್ಧಗೊಳ್ಳು; ಶರ: ಬಾಣ; ಚಪ್ಪರ: ಚಾವಣಿ, ಮೇಲ್ಕಟ್ಟು; ಬಲುಹು: ಬಲ, ಶಕ್ತಿ; ಕಂಡು: ನೋಡು; ಅಸುರಾರಿ: ಕೃಷ್ಣ; ಮೆಚ್ಚು: ಹೊಗಳು; ಅಡಿಗಡಿಗೆ: ಮತ್ತೆ ಮತ್ತೆ; ಹೊಗಳು: ಪ್ರಶಂಶಿಸು; ಕಳಚು: ಬೇರ್ಪಡಿಸು; ನೊಗ: ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ತೆಗೆ: ಹೊರತರು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಇಳುಹಿ: ಕೆಳಗಿಳಿಸು; ಪಿಡಿ: ಗ್ರಹಿಸು; ಪಾಡಿ: ನಾಡು, ಪ್ರಾಂತ್ಯ ; ಐದು: ಬಂದು ಸೇರು; ಮರಳು: ಹಿಂದಿರುಗು; ಎಡಬಲ: ಅಕ್ಕಪಕ್ಕ;
ಪದವಿಂಗಡಣೆ:
ಕೊಳನ +ತಡಿಯಲಿ +ಹೂಡಿದನು +ಶರ
ವಳಯದಲಿ +ಚಪ್ಪರವನ್+ಆತನ
ಬಲುಹ +ಕಂಡ್+ಅಸುರಾರಿ +ಮೆಚ್ಚಿದನ್+ಅಡಿಗಡಿಗೆ +ಹೊಗಳಿ
ಕಳಚಿ +ನೊಗನನು +ತೆಗೆದು +ಕಬ್ಬಿಯ
ನಿಳುಹಿ+ ಪಡಿ+ವಾಘೆಗಳ +ಸರಿದನು
ಕೊಳಿಸಿ+ ಪಿಡಿಯಲು +ಪಾಡಿಗೈದವು +ಮರಳಿದ್+ಎಡಬಲಕೆ
ಅಚ್ಚರಿ:
(೧) ಅಡಿಗಡಿ, ಎಡಬಲ – ಪದಗಳ ಬಳಕೆ