ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲನ ನಲಗಿನ ಮೊನೆಯೊಳಲ್ಲದೆ
ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು (ಉದ್ಯೋಗ ಪರ್ವ, ೧ ಸಂಧಿ, ೮ ಪದ್ಯ)
ತಾತ್ಪರ್ಯ:
ಸಾತ್ಯಕಿಯು ತನ್ನ ಮಾತನ್ನು ಮುಂದುವರೆಸುತ್ತಾ, ಬಲರಾಮನ ಮಾತುಗಳು ಕೌರವರ ಭಾಗ್ಯಕ್ಕೆ ಮೂಲ ಆಧಾರವೇನೂ ಅಲ್ಲವಲ್ಲ. ಆದರಿಂದೇನು ಆಗುತ್ತದೆ? ಕೌರವರ ನೂರು ತಲೆಗಳನ್ನು ಕಡಿದುಕೊಂಡು ಬಾ ಎಂದು ನನಗೆ ವೀಳೆ ಕೊಡಿ, ಭೂಮಿಯನ್ನು ಶಸ್ತ್ರಧಾರೆಯಿಂದ ಪಡೆಯಬೇಕೆ ಹೊರತು ಸಂಧಾನ, ವಿನಯದ ಮಾತುಗಳಿಗೆ ಒಪ್ಪಿ ಕ್ಷತ್ರಿಯಉ ರಾಜ್ಯವನ್ನು ಕೊಡುವುದಿಲ್ಲ” ಎಂದು ಹೇಳಿದನು.
ಅರ್ಥ:
ಬಲ: ಶೌರ್ಯ; ಮಾತು: ವಾಣಿ; ಭಾಗ್ಯ: ಮಂಗಳ, ಶುಭ; ನೆಲೆ: ಬೀಡು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಶತ: ನೂರು; ತಲೆ: ಶಿರ; ವೀಳೆ:ತಾಂಬೂಲ; ಕುಮಾರ: ಮಗ; ನೆಲ: ಭೂಮಿ; ನಲುಗು: ಬಾಡು, ಮುದುಡು; ಮೊನೆ:ತುದಿ, ಕೊನೆ; ಮೆಲು: ಮೃದು; ನುಡಿ: ಮಾತು; ಸಾಮ: ಶಾಂತಗೊಳಿಸುವಿಕೆ; ಅಳುಕು: ಹೆದರಿಕೆ; ಕೊಡು: ನೀಡು; ಧರೆ: ಭೂಮಿ; ಅಧಿಕ: ಹೆಚ್ಚು; ಆತ್ಮಜ: ಮಗ;
ಪದವಿಂಗಡಣೆ:
ಬಲನ +ಮಾತೇನ್+ಇವರ +ಭಾಗ್ಯದ
ನೆಲೆಯೆ +ಫಡ +ಕೌರವರ+ ಶತಕದ
ತಲೆಗೆ +ತಾ +ವೀಳೆಯವನೆಲೆ+ ಕುಂತೀ +ಕುಮಾರಕನೆ
ನೆಲನ +ನಲಗಿನ +ಮೊನೆಯೊಳ್+ಅಲ್ಲದೆ
ಮೆಲುನುಡಿಯ +ಸಾಮದೊಳು +ನಿಮಗಿನ್
ಅಳುಕಿ+ ಕೊಡುವರೆ+ ಧರೆಯೊಳ್+ಅಧಿಕ+ ಕ್ಷತ್ರಿಯಾತ್ಮಜರು
ಅಚ್ಚರಿ:
(೧) ‘ನ’ ಕಾರದ ಜೋಡಿ ಪದ – ನೆಲನ ನಲಗಿನ
(೨) ಕ್ಷತ್ರಿಯರು ಯಾವುದಕ್ಕೆ ಮಣಿಯುವುದಿಲ್ಲ – ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ