ಪದ್ಯ ೧೪: ಹಿರಣ್ಯಪುರದ ದೊರೆ ಏಕೆ ಆಶ್ಚರ್ಯಗೊಂಡನು?

ಅರಿಯದಾ ಪಟ್ಟಣವಿದೇನೋ
ಹೊರಗೆ ಗಜಬಜದೆನೆ ಸುಪರ್ವರ
ಕುರುಹುಗಳನರಿದಮರರಿಪುಗಳು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದರಸ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಿರಣ್ಯನಗರಿಯ ಜನಗಳಿಗೆ ಈ ಗದ್ದಲ ಏಕೆ ಎಂದು ತಿಳಿಯಲಿಲ್ಲ. ರಾಕ್ಷಸ ಭಟರು ಊರ ಹೊರಗೆ ಬಂದು ಇದು ದೇವತೆಗಳ ದಾಳಿಯೆಂದರಿತು ಅರಮನೆಗೆ ಹೋದರು. ಅವರೆಲ್ಲರೂ ಜೋರಾಗಿ ನಗುತ್ತಾ ಆಸ್ಥಾನಕ್ಕೆ ಹೋಗಿ, ಸದ್ದನ್ನು ಕಡಿಮೆ ಮಾಡಿಕೊಂಡು ಕಣ್ಣುಗಳಲ್ಲಿ ನೀರು ತುಂಬಿರಲು, ರಾಜನಿಗೆ ನಮಸ್ಕರಿಸಿದರು. ರಾಜನು ಅವರ ಸ್ಥಿತಿಯನ್ನು ನೋಡಿ ಇದೇಕೆ ಈ ರೀತಿಯಾದ ಸಂತಸ ಎಂದು ಕೇಳಿದನು.

ಅರ್ಥ:
ಅರಿ: ತಿಳಿ; ಪಟ್ಟಣ: ಊರು; ಹೊರಗೆ: ಆಚೆ; ಗಜಬಜ: ಗೊಂದಲ; ಪರ್ವ: ಸಂಧಿ ಕಾಲ, ಸಂಭ್ರಮ; ಕುರುಹು: ಚಿಹ್ನೆ, ಗುರುತು; ಅಮರ: ದೇವತೆ; ರಿಪು: ವೈರಿ; ಅಮರರಿಪು: ದಾನವ; ಹರಿ: ಧಾವಿಸು, ಓಡು; ಅರಮನೆ: ರಾಜರ ಆಲಯ; ಬಿರುನಗೆ: ಜೋರಾದ ನಗು; ಸುಮ್ಮಾನ: ಸಂತೋಷ, ಹಿಗ್ಗು; ಉಬ್ಬು: ಹೆಚ್ಚಳ, ಅಧಿಕ; ನೆರೆನಗೆ:ಜೊತೆಯಲ್ಲಿ ನಗು; ನಯನಾಂಬು: ಕಣ್ಣೀರು; ಖಳ: ದುಷ್ಟ; ಎರಗು: ಬಾಗು; ಅರಸ: ರಾಜ; ಬೆಸ: ಅಪ್ಪಣೆ, ಆದೇಶ, ಕೇಳು;

ಪದವಿಂಗಡಣೆ:
ಅರಿಯದಾ +ಪಟ್ಟಣವ್+ಇದೇನೋ
ಹೊರಗೆ+ ಗಜಬಜದ್+ಎನೆ +ಸುಪರ್ವರ
ಕುರುಹುಗಳನ್+ಅರಿದ್+ಅಮರ+ರಿಪುಗಳು +ಹರಿದರ್+ಅರಮನೆಗೆ
ಬಿರುನಗೆಯ+ ಸುಮ್ಮಾನದ್+ಉಬ್ಬಿನ
ನೆರೆನಗೆಯ +ನಯನಾಂಬುಗಳ+ ಖಳನ್
ಎರಗಲ್+ಅತಿ +ಸುಮ್ಮಾನವ್+ಏನೆಂದ್+ಅರಸ +ಬೆಸಗೊಂಡ

ಅಚ್ಚರಿ:
(೧) ಬಿರುನಗೆ, ನೆರೆನಗೆ – ನಗುವನ್ನು ವಿವರಿಸುವ ಪರಿ