ಎರಡು ಕೈಯಲಿ ತುಂಬಿ ರತುನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದೊಳು ಚತುರಾಸ್ಯಜನಕನ ವಿಮಲ ಭಕ್ತಿಯೊಳು
ನರವೃಕೋದರ ನಕುಲ ಸಹದೇ
ವರು ವಿರಾಟದ್ರುಪದ ಮೊದಲಾ
ಗಿರೆ ಸಮಸ್ತನೃಪಾಲಜನ ಮೆಯ್ಯಿಕ್ಕಿತೊಲವಿನೊಳು (ವಿರಾಟ ಪರ್ವ, ೧೧ ಸಂಧಿ, ೫೬ ಪದ್ಯ)
ತಾತ್ಪರ್ಯ:
ಯುಧಿಷ್ಠಿರನು ಬೆಲೆಬಾಳುವ ರತ್ನಗಳನ್ನು ಬೊಗಸೆಯಲ್ಲಿ ತುಂಬಿ ಭಕ್ತಿಯಿಂದ ಕೃಷ್ಣನ ಪಾದಗಳಿಗೆ ಸುರಿದು ನಮಸ್ಕರಿಸಿದನು. ಭೀಮ ಅರ್ಜುನ, ನಕುಲ ಸಹದೇವ ವಿರಾಟ ದ್ರುಪದ ಮೊದಲಾದ ಸರ್ವರೂ ಕೃಷ್ಣನಿಗೆ ನಮಸ್ಕರಿಸಿದರು.
ಅರ್ಥ:
ಕೈ: ಹಸ್ತ; ತುಂಬ: ಭರ್ತಿ; ರತುನ: ಬೆಲೆಬಾಳುವ ಮಣಿ; ಸುರಿ: ಹರಡು; ಮೆಯ್ಯಿಕ್ಕು: ನಮಸ್ಕರಿಸು; ಭೂಪತಿ: ರಾಜ; ಚತುರಾಸ್ಯ: ನಾಲ್ಕು ಮುಖವುಳ್ಳ (ಬ್ರಹ್ಮ) ಜನಕ: ತಂದೆ; ವಿಮಲ: ನಿರ್ಮಲ; ಭಕ್ತಿ: ಪೂಜ್ಯಭಾವ; ನರ: ಅರ್ಜುನ; ವೃಕೋದರ: ಭೀಮ; ವೃಕ: ತೋಳ; ಉದರ: ಹೊಟ್ಟೆ; ಸಮಸ್ತ: ಎಲ್ಲಾ; ನೃಪಾಲ: ರಾಜರು; ಜನ: ಮನುಷ್ಯರು; ಒಲವು: ಪ್ರೀತಿ;
ಪದವಿಂಗಡಣೆ:
ಎರಡು +ಕೈಯಲಿ +ತುಂಬಿ +ರತುನವ
ಸುರಿದು +ಮೆಯ್ಯಿಕ್ಕಿದನು +ಭೂಪತಿ
ಚರಣದೊಳು +ಚತುರಾಸ್ಯ+ಜನಕನ +ವಿಮಲ +ಭಕ್ತಿಯೊಳು
ನರ+ವೃಕೋದರ +ನಕುಲ +ಸಹದೇ
ವರು +ವಿರಾಟ+ದ್ರುಪದ +ಮೊದಲಾ
ಗಿರೆ+ ಸಮಸ್ತ+ನೃಪಾಲಜನ+ ಮೆಯ್ಯಿಕ್ಕಿತ್+ಒಲವಿನೊಳು
ಅಚ್ಚರಿ:
(೧) ಕೃಷ್ಣನನ್ನು ಚತುರಾಸ್ಯಜನಕ ಎಂದು ಕರೆದಿರುವುದು
(೨) ನಮಸ್ಕರಿಸು ಎನ್ನುವುದಕ್ಕೆ ಮೆಯ್ಯಿಕ್ಕು ಎಂಬ ಪದದ ಬಳಕೆ