ಪದ್ಯ ೪೩: ಕೌರವನ ಸಂಭಾಷಣೆಯನ್ನು ಯಾರು ಆಲಿಸಿದರು?

ಚರಣ ವದನವ ತೊಳೆದು ನಿರ್ಮಳ
ತರವರಾಂಬುವನೀಂಟಿದರು ಕೃಪ
ಗುರುಸುತರ ನುಡಿಗಳನು ನಡುನೀರಲಿ ನೃಪಧ್ವನಿಯ
ಅರಿದರಿವರಾಲಿಸಿದರೇನಿದು
ಕುರುಪತಿಯ ತತ್ಸುಭಟವಾದೋ
ತ್ತರವಲಾ ಲೇಸಾಯ್ತೆನುತ ಕೇಳಿದರು ಮರೆವಿಡಿದು (ಗದಾ ಪರ್ವ, ೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೈಕಾಲುಗಳನ್ನು ತೊಳೆದು ಒಳ್ಳೆಯ ನಿರ್ಮಲ ಜಲವನ್ನು ಕುಡಿದರು. ಕೃಪ ಅಶ್ವತ್ಥಾಮರ ಮಾತುಗಳನ್ನೂ, ನೀರಿನ ನದುವೆ ಇದ್ದ ದುರ್ಯೋಧನನ ಮಾತುಗಳನ್ನು ಕೇಳಿದರು. ಇದೇನು ಕೌರವನ ಮತ್ತು ಅವನ ಸುಭಟರು ವಾದ ಮಾಡುತ್ತಿದ್ದ ಹಾಗಿದೆಯೆಲ್ಲಾ ಎಂದು ಮರೆಯಲ್ಲಿ ನಿಂತು ಸಂಭಾಷಣೆಯನ್ನ್ ಕೇಳಿದರು.

ಅರ್ಥ:
ಚರಣ: ಪಾದ; ವದನ: ಮುಖ; ತೊಳೆ: ಸ್ವಚ್ಛಮಾಡು; ನಿರ್ಮಳ: ಶುದ್ಧ; ಅಂಬು: ನೀರು; ಈಂಟು: ಕುಡಿ; ಸುತ: ಮಗ; ಗುರು: ಆಚಾರ್ಯ; ನುಡಿ: ಮಾತು; ನಡು: ಮಧ್ಯ; ನೀರು: ಜಲ; ಧ್ವನಿ: ಶಬ್ದ; ನೃಪ: ರಾಜ; ಅರಿ: ತಿಳಿ; ಆಲಿಸು: ಕೇಳು; ಸುಭಟ: ಪರಾಕ್ರಮಿ; ಉತ್ತರ: ಪರಿಹಾರ; ಲೇಸು: ಒಳಿತು; ಕೇಳು: ಆಲಿಸು; ಮರೆ: ಗುಟ್ಟು, ರಹಸ್ಯ;

ಪದವಿಂಗಡಣೆ:
ಚರಣ+ ವದನವ +ತೊಳೆದು +ನಿರ್ಮಳ
ತರವರ್+ಅಂಬುವನ್+ಈಂಟಿದರು +ಕೃಪ
ಗುರುಸುತರ +ನುಡಿಗಳನು +ನಡುನೀರಲಿ+ ನೃಪಧ್ವನಿಯ
ಅರಿದರ್+ಇವರ್+ಆಲಿಸಿದರ್+ಏನಿದು
ಕುರುಪತಿಯ +ತತ್ಸುಭಟ+ವಾದ
ಉತ್ತರವಲಾ +ಲೇಸಾಯ್ತೆನುತ +ಕೇಳಿದರು +ಮರೆವಿಡಿದು

ಅಚ್ಚರಿ:
(೧) ನ ಕಾರದ ತ್ರಿವಳಿ ಪದಗಳು – ನುಡಿಗಳನು ನಡುನೀರಲಿ ನೃಪಧ್ವನಿಯ