ಪದ್ಯ ೧೫: ಊರ್ವಶಿಯು ಯಾರನ್ನು ನೋಡಿದಳು?

ಹೊಳೆವ ಮಣಿದೀಪಾಂಶುಗಳ ಮುಮ್
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣೆದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿನಿಂದಳು ತರುಣಿ ನೃಪಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ (ಅರಣ್ಯ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಊರ್ವಶಿಯ ಕಡೆಗಣ್ಣ ನೋಟಗಳು ಮಣಿದೀಪಗಳ ಬೆಳಗನ್ನು ತಿರಸ್ಕರಿಸಿದವು. ಅವಳ ದೇಹಕಾಂತಿಯು ಚಂದ್ರಕಾಂತ ಶಿಲೆಯ ಭಿತ್ತಿಯನ್ನು ಅಣಕಿಸಿತು. ತನ್ನ ಕೆಳದಿಯರ ಹೆಗಲ ಮೇಲೆ ಕೈಗಳನ್ನಿಟ್ಟು ಅರ್ಜುನನ ಅಂಗೋಪಾಂಗಗಳ ಮೇಲೆ ಮನಸಿಟ್ಟು ಕಣ್ಣುಗಳಿಂದ ನೋಡಿದಳು.

ಅರ್ಥ:
ಹೊಳೆ: ಕಾಂತಿ, ಪ್ರಕಾಶ; ಮಣಿ: ರತ್ನ; ದೀಪ: ಹಣತೆ; ಅಂಶು:ಕಿರಣ; ಮುಕ್ಕುಳಿಸು: ತಿರಸ್ಕರಿಸು; ಕಡೆ: ಕೊನೆ; ಕಣ್ಣು: ನಯನ; ಇಂದು: ಭಿತ್ತಿ: ಒಡೆಯುವುದು, ಸೀಳುವುದು; ಬೆಳಗು: ಹೊಳಪು, ಕಾಂತಿ; ಅಣೆ:ಹೊಡೆ, ತಿವಿ; ಬಹಳ: ತುಂಬ; ತನು: ದೇಹ; ಕಾಂತಿ: ಬೆಳಕು, ಹೊಳಪು; ಕೆಳದಿ: ಗೆಳತಿ, ಸ್ನೇಹಿತೆ; ಕಂಠ: ಕೊರಳು; ಕೈ: ಹಸ್ತ; ಇಳುಹು: ಇಡು; ತರುಣಿ: ಸುಂದರಿ, ಹೆಣ್ಣು; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ಅಂಗೋಪಾಂಗ: ಅಂಗಗಳು; ಹರಹು: ಹರಡು; ಕಣ್ಮನ: ದೃಷ್ಟಿ ಮತ್ತು ಮನಸ್ಸು; ಅಣೆ: ಹೊಡೆ, ತಿವಿ;

ಪದವಿಂಗಡಣೆ:
ಹೊಳೆವ +ಮಣಿದೀಪಾಂಶುಗಳ+ ಮು
ಕ್ಕುಳಿಸಿದವು +ಕಡೆ+ಕಂಗಳ್+ಇಂದೂ
ಪಳದ +ಭಿತ್ತಿಯ +ಬೆಳಗನ್+ಅಣೆದುದು +ಬಹಳ+ ತನುಕಾಂತಿ
ಕೆಳದಿಯರ +ಕಂಠದಲಿ +ಕೈಗಳನ್
ಇಳುಹಿ+ನಿಂದಳು +ತರುಣಿ +ನೃಪಕುಲ
ತಿಲಕನ್+ಅಂಗೋಪಾಂಗದಲಿ+ ಹರಹಿದಳು +ಕಣ್ಮನವ

ಅಚ್ಚರಿ:
(೧) ಅರ್ಜುನನನ್ನು ನೋಡುವ ಪರಿ – ಕೆಳದಿಯರ ಕಂಠದಲಿ ಕೈಗಳನಿಳುಹಿನಿಂದಳು ತರುಣಿ ನೃಪಕುಲ ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ
(೨) ಅರ್ಜುನನನ್ನು ಕರೆದ ಪರಿ – ನೃಪಕುಲತಿಲಕ
(೩) ಕ ಕಾರದ ತ್ರಿವಳಿ ಪದ – ಕೆಳದಿಯರ ಕಂಠದಲಿ ಕೈಗಳನಿಳುಹಿನಿಂದಳು