ಪದ್ಯ ೬೪: ಶಕುನಿಯು ಕೌರವನನ್ನು ಹೇಗೆ ಸಂತೈಸಿದನು?

ಶಕುನಿ ಕಂಡನು ಕೌರವೇಂದ್ರನ
ನಕಟ ನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ (ಗದಾ ಪರ್ವ, ೧ ಸಂಧಿ, ೬೪ ಪದ್ಯ)

ತಾತ್ಪರ್ಯ:
ಓಡಿ ಹೋಗುತ್ತಿದ್ದ ಕೌರವನನ್ನು ಕಂಡು ಶಕುನಿಯು, ಅಯ್ಯೋ ಕೌರವೇಂದ್ರ, ನೀನು ಒಬ್ಬೊಂಟಿಗನಾಗಿ ಏಕೆ ಯುದ್ಧಕ್ಕೆ ಬಂದೆ? ಅಶ್ವತ್ಥಾಮ, ಕೃತವರ್ಮ (ಭೋಜ), ಗೌತಮ(ಕೃಪಚಾರ್ಯ) ರಿದ್ದಾರಲ್ಲಾ, ಸೈನ್ಯವೆಲ್ಲವೂ ಸತ್ತುಹೋಯಿತೇ? ಸಂಶಪ್ತಕರಿದ್ದಾರೆ, ನಿನ್ನ ಮೂಲ ಸೈನ್ಯವಿದೆ, ಬೆದರಬೇಡ, ಖಿನ್ನನಾಗಬೇಡ ಎಂದು ಸಂತೈಸಿದನು.

ಅರ್ಥ:
ಅಕಟ: ಅಯ್ಯೋ; ಏಕಾಂಗ: ಒಬ್ಬನೆ; ಹೋರಿಕೆಗೆ: ಹೋರಾಡಲು; ಗರುವ: ಶ್ರೇಷ್ಠ; ಸುತ: ಮಗ; ಸಕಲ: ಎಲ್ಲಾ; ಬಲ: ಸೈನ್ಯ; ನುಗ್ಗು: ತಳ್ಳು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಮೂಲ: ಕಾರಣ, ಉಗಮ; ಬಲ: ಸೈನ್ಯ; ವಿಕಳ: ಭ್ರಮೆ, ಭ್ರಾಂತಿ; ಸಂತೈಸು: ಸಾಂತ್ವನಗೊಳಿಸು;

ಪದವಿಂಗಡಣೆ:
ಶಕುನಿ +ಕಂಡನು +ಕೌರವೇಂದ್ರನನ್
ಅಕಟ +ನೀನ್+ಏಕಾಂಗದಲಿ +ಹೋ
ರಿಕೆಗೆ +ಬಂದೈ +ಗರುವ+ ಗುರುಸುತ +ಭೋಜ +ಗೌತಮರು
ಸಕಲಬಲ +ನುಗ್ಗಾಯ್ತೆ +ಸಮಸ
ಪ್ತಕರು +ನಿನ್ನಯ +ಮೂಲಬಲವಿದೆ
ವಿಕಳನಾಗದಿರ್+ಎಂದು +ಸಂತೈಸಿದನು +ಕುರುಪತಿಯ

ಅಚ್ಚರಿ:
(೧) ಧೈರ್ಯ ತುಂಬುವ ಪರಿ – ನಿನ್ನಯ ಮೂಲಬಲವಿದೆ ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ
(೨) ಸಕಲಬಲ, ಮೂಲಬಲ – ಪದಗಳ ಬಳಕೆ